13,622 ಫಲಾನುಭವಿಗಳಿಗೆ ಶಾಶ್ವತವಾಗಿ ಮನೆ ಮಾಲಿಕತ್ವ-ಶಾಸಕ ಮಾನೆ

| Published : Oct 28 2025, 12:15 AM IST

ಸಾರಾಂಶ

ಮನೆ ಒಡೆಯ ಯೋಜನೆ ಮೂಲಕ ಸರ್ಕಾರಿ ಮತ್ತು ಖಾಸಗಿ ಜಮೀನುಗಳಲ್ಲಿ ಕಳೆದ ನಾಲ್ಕೈದು ದಶಕಗಳಿಂದ ಮನೆ ನಿರ್ಮಿಸಿಕೊಂಡು ದಾಖಲೆ ರಹಿತವಾಗಿ ವಾಸಿಸುತ್ತಿರುವ ತಾಲೂಕಿನ 13,622 ಫಲಾನುಭವಿಗಳಿಗೆ ಶಾಶ್ವತವಾಗಿ ಮನೆ ಮಾಲಿಕತ್ವ ದೊರಕಿಸುವ ಭರವಸೆ ಈಡೇರಿಸಿ, ನುಡಿದಂತೆ ನಡೆದಿದ್ದೇನೆ. ನನ್ನ ರಾಜಕೀಯ ಜೀವನದ ಸಾರ್ಥಕ ಕ್ಷಣ ಇದಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಹಾನಗಲ್ಲ: ಮನೆ ಒಡೆಯ ಯೋಜನೆ ಮೂಲಕ ಸರ್ಕಾರಿ ಮತ್ತು ಖಾಸಗಿ ಜಮೀನುಗಳಲ್ಲಿ ಕಳೆದ ನಾಲ್ಕೈದು ದಶಕಗಳಿಂದ ಮನೆ ನಿರ್ಮಿಸಿಕೊಂಡು ದಾಖಲೆ ರಹಿತವಾಗಿ ವಾಸಿಸುತ್ತಿರುವ ತಾಲೂಕಿನ 13,622 ಫಲಾನುಭವಿಗಳಿಗೆ ಶಾಶ್ವತವಾಗಿ ಮನೆ ಮಾಲಿಕತ್ವ ದೊರಕಿಸುವ ಭರವಸೆ ಈಡೇರಿಸಿ, ನುಡಿದಂತೆ ನಡೆದಿದ್ದೇನೆ. ನನ್ನ ರಾಜಕೀಯ ಜೀವನದ ಸಾರ್ಥಕ ಕ್ಷಣ ಇದಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. ಸೋಮವಾರ ತಾಲೂಕಿನ ಕೆಲವರಕೊಪ್ಪ ಗ್ರಾಮದಲ್ಲಿ ಕೆಲವರಕೊಪ್ಪ ಮತ್ತು ಉಪ್ಪುಣಸಿ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.

ತಾಲೂಕಿನ ಸಾವಿರಾರು ಕುಟುಂಬಗಳು ಅತಂತ್ರದ ಕಡೆಯಿಂದ ಸ್ವತಂತ್ರದ ಕಡೆಗೆ ವಾಲುತ್ತಿವೆ. ಯಾವೊಂದು ಕುಟುಂಬಗಳೂ ಸಹ ಬೀದಿಪಾಲಾಗದಂತೆ ರಕ್ಷಣೆ ಮಾಡುವ ಜವಾಬ್ದಾರಿ ಹೊತ್ತುಕೊಂಡಿದ್ದೆ. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ. ಕನಿಷ್ಠ 8-10 ಲಕ್ಷ ರು. ಮೌಲ್ಯದ ಆಸ್ತಿಯನ್ನು ಸಂಪೂರ್ಣ ಉಚಿತವಾಗಿ ಅಳಿಸಲಾಗದ ದಾಖಲೆಗಳೊಂದಿಗೆ ನೀಡಲಾಗುತ್ತಿದೆ. ಇದರಿಂದ ಸಾವಿರಾರು ಕುಟುಂಬಗಳಲ್ಲಿ ಸಂತಸ ಕಾಣುತ್ತಿರುವುದು ಸಾರ್ಥಕ ಭಾವ ಮೂಡಿಸಿದೆ ಎಂದರು. ಹಿಂದೆ ವಿಧಾನ ಪರಿಷತ್ ಸದಸ್ಯನಿದ್ದ ಸಂದರ್ಭದಲ್ಲಿ ನಗರ ಪ್ರದೇಶಗಳ ಸ್ಲಂಗಳಲ್ಲಿ ವಾಸಿಸುತ್ತಿರುವ ಬಡವರಿಗೆ ಸತತ ಪ್ರಯತ್ನದ ಫಲವಾಗಿ ನಿವೇಶನ ಭಾಗ್ಯ ದೊರಕಿಸಲಾಗಿತ್ತು. ಹಾನಗಲ್ ಮಾತ್ರವಲ್ಲದೇ ಇಡೀ ರಾಜ್ಯದ ಸಾವಿರಾರು ಬಡವರಿಗೆ ಅನುಕೂಲವಾಗಿತ್ತು. ಇದೀಗ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಜಮೀನುಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಮನೆ ದಾಖಲೆ ಒದಗಿಸಿ, ಶಾಶ್ವತ ಮಾಲಿಕತ್ವ ನೀಡಲಾಗುತ್ತಿದೆ. ಹಿಂದೆ ಇಂದಿರಾ ಗಾಂಧಿ ಕಾಲದಲ್ಲಿ ಉಳುವವ ಭೂಮಿಯ ಒಡೆಯನಾದರೆ, ಇಂದು ಸಿದ್ದರಾಮಯ್ಯ ಅವಧಿಯಲ್ಲಿ ವಾಸಿಸುವವನೆ ಮನೆಯ ಒಡೆಯನಾಗುತ್ತಿದ್ದಾನೆ ಎಂದರು. ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಸರ್ಕಾರದ ಎಲ್ಲ ಯೋಜನೆ, ಕಾರ್ಯಕ್ರಮಗಳ ಲಾಭ ಪಡೆಯುವಲ್ಲಿ ಹಾನಗಲ್ ತಾಲೂಕು ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ. ಜಿಲ್ಲೆಯಲ್ಲಿ 30 ಸಾವಿರ ಹಕ್ಕುಪತ್ರ ವಿತರಿಸಲಾಗುತ್ತಿದ್ದರೆ 13 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಹಾನಗಲ್ ತಾಲೂಕಿಗೆ ಸೇರಿದ್ದಾರೆ. ಜಿಲ್ಲೆಯಲ್ಲಿ 350 ಕಂದಾಯ ಗ್ರಾಮ ಮತ್ತು ಉಪ ಗ್ರಾಮಗಳನ್ನು ರಚಿಸುತ್ತಿದ್ದರೆ ಇದರಲ್ಲಿ 150ಕ್ಕೂ ಹೆಚ್ಚು ಹಾನಗಲ್ ತಾಲೂಕಿಗೆ ಸೇರಿವೆ. ಶಾಸಕ ಶ್ರೀನಿವಾಸ ಮಾನೆ ಅವರು ಖಾಸಗಿ ಸರ್ವೆದಾರರಿಗೆ ಸ್ವಂತದ ಹಣ ನೀಡಿ ಕೆಲಸ ಮಾಡಿಸುತ್ತಿರುವ ಪರಿಣಾಮ ಇಂದು ಸಾವಿರಾರು ಕುಟುಂಬಗಳ ಹಲವು ತಲೆಮಾರಿನ ಸಮಸ್ಯೆ ತ್ವರಿತಗತಿಯಲ್ಲಿ ಪರಿಹಾರ ಕಾಣುತ್ತಿದೆ ಎಂದರು. ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮರಿಯೋಜಿರಾವ್, ತಹಸೀಲ್ದಾರ್ ರೇಣುಕಾ ಎಸ್., ಇಒ ಪರಶುರಾಮ ಪೂಜಾರ, ಕೆಲವರಕೊಪ್ಪ ಗ್ರಾಪಂ ಅಧ್ಯಕ್ಷ ಗೋಪಾಲ ಕಾನಮನಿ, ಉಪಾಧ್ಯಕ್ಷೆ ಸುಧಾ ಮ್ಯಾಗಳವರ, ಉಪ್ಪುಣಸಿ ಗ್ರಾಪಂ ಅಧ್ಯಕ್ಷ ಬಾಬಾಜಾನ ಬಂಕಾಪೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಕರಿಯಪ್ಪ ಗಂಟೇರ, ಯಲ್ಲಪ್ಪ ದೊಡ್ಡಚಿಕ್ಕಣ್ಣನವರ, ಫಕ್ಕೀರಪ್ಪ ಮುಂಡರಗಿ, ಲಕ್ಕಪ್ಪ ಗಂಟೇರ, ಬಂಗಾರಪ್ಪ ಹರಿಜನ, ಸಿದ್ದಣ್ಣ ಕಾಡಪ್ಪನವರ, ಶಾಂತಪ್ಪ ಬಡೆಣ್ಣನವರ, ಸಿದ್ದು ವಡ್ಡರ, ವನಜಾಕ್ಷಿ ಮಾಳಣ್ಣನವರ, ಶಿವಾಜೆಪ್ಪ ಬೆಳ್ಳಿಕಟ್ಟಿ, ಸುಭಾಸ ಗೊರಣ್ಣನವರ, ಬಸವರಾಜ ಮಾಳಣ್ಣನವರ, ವಿಜಯಕುಮಾರ ದೊಡ್ಡಮನಿ, ಪುಟ್ಟಪ್ಪ ನರೇಗಲ್, ಟಾಕನಗೌಡ ಪಾಟೀಲ, ಹನುಮಂತಪ್ಪ ಮರಗಡಿ, ಖ್ವಾಜಾಮೊಹಿದ್ದೀನ್ ಜಮಾದಾರ, ಮಹದೇವಪ್ಪ ಬಾಗಸರ, ಚಂದ್ರಪ್ಪ ಜಾಲಗಾರ, ಕೊಟ್ರಪ್ಪ ಕುದರಿಸಿದ್ದನವರ ಈ ಸಂದರ್ಭದಲ್ಲಿ ಇದ್ದರು.