ಸೇವಾ ವಿವಾದ ಪರಿಹರಿಸುವ ಕಾಯಂ ಜನತಾ ನ್ಯಾಯಾಲಯ

| Published : Sep 22 2025, 01:02 AM IST

ಸಾರಾಂಶ

ಕಾಯಂ ಜನತಾ ನ್ಯಾಯಾಲಯ ಧಾರವಾಡ ವಿಭಾಗದ ಅಧಿಕಾರ ವ್ಯಾಪ್ತಿಗೆ ಕೊಪ್ಪಳ ಜಿಲ್ಲೆ ಬರುವುದರಿಂದ ಇಲ್ಲಿನ ಜನರು ಕೊಪ್ಪಳ ಪೀಠದಲ್ಲಿ ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಕುಷ್ಟಗಿ:

ಸಾರ್ವಜನಿಕರ ಉಪಯುಕ್ತತೆಗಳ ವಿವಾದ ಪರಿಹರಿಸುವಲ್ಲಿ ಕಾಯಂ ಜನತಾ ನ್ಯಾಯಾಲಯ ಪ್ರಮುಖ ಪಾತ್ರ ವಹಿಸಲಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಎಲ್‌, ಪೂಜೇರಿ ಹೇಳಿದರು.

ಪಟ್ಟಣದ ಬಸವ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ತಾಲೂಕು ಪಂಚಾಯಿತಿ, ಪೊಲೀಸ್ ಇಲಾಖೆಯ ಸಹಯೋಗದಲ್ಲಿ ನಡೆದ ಕಾಯಂ ಜನತಾ ನ್ಯಾಯಾಲಯ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾಯಂ ಜನತಾ ನ್ಯಾಯಾಲಯ ಧಾರವಾಡ ವಿಭಾಗದ ಅಧಿಕಾರ ವ್ಯಾಪ್ತಿಗೆ ಕೊಪ್ಪಳ ಜಿಲ್ಲೆ ಬರುವುದರಿಂದ ಇಲ್ಲಿನ ಜನರು ಕೊಪ್ಪಳ ಪೀಠದಲ್ಲಿ ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.

ಸಾರ್ವಜನಿಕ ಉಪಯುಕ್ತತೆಯ ಸೇವೆಗಳಾದ ಪ್ರಯಾಣಿಕರು ಅಥವಾ ಸರಕುಗಳನ್ನು ವಾಯುಸಾರಿಗೆ, ರಸ್ತೆ ಅಥವಾ ನೀರಿನ ಮೂಲಕ ಒದಗಿಸುವ ಸಾಗಾಣಿಕೆಯ ಸೇವೆ, ಅಂಚೆ, ದೂರವಾಣಿ ಸೇವೆ, ವಿದ್ಯುತ್ ಪೂರೈಕೆ, ನೀರಿನ ಸರಬರಾಜು ಮಾಡುವ ಯಾವುದೇ ಸಂಸ್ಥೆ, ಸಾರ್ವಜನಿಕ ಸಂರಕ್ಷಣೆ, ನೈರ್ಮಲ್ಯ ವ್ಯವಸ್ಥೆ, ಆಸ್ಪತ್ರೆ, ವಿತರಣೆ ಸೇವೆ, ವಿಮೆ ಸೇವೆ , ಬ್ಯಾಂಕಿಂಗ್ ಹಾಗೂ ಹಣಕಾಸು ಸಂಸ್ಥೆ, ವಸತಿ ಮತ್ತು ರಿಯಲ್ ಎಸ್ಟೇಟ್ ಸೇವೆ, ಶಿಕ್ಷಣ ಈ ಎಲ್ಲ ಸೇವೆಗಳಲ್ಲಿ ನ್ಯೂನತೆ ಉಂಟಾದಾಗ ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.

ತಹಸೀಲ್ದಾರ್‌ ಅಶೋಕ ಶಿಗ್ಗಾಂವಿ ಅಧ್ಯಕ್ಷತೆ ವಹಿಸಿದ್ದರು. ಪ್ಯಾನಲ್ ವಕೀಲರಾದ ಆನಂದ ಡೊಳ್ಳಿನ ಕಾಯಂ ಜನತಾ ನ್ಯಾಯಾಲಯದ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ತಾಪಂ ಇಒ ಪಂಪಾಪತಿ ಹಿರೇಮಠ, ವಕೀಲರ ಸಂಘದ ಅಧ್ಯಕ್ಷ ದೊಡ್ಡನಗೌಡ ಪಾಟೀಲ, ಸಹಾಯಕ ಸರ್ಕಾರಿ ಅಭಿಯೋಜಕ ರಾಯನಗೌಡ ಎಲ್, ಗ್ರೇಡ್‌-2 ತಹಸೀಲ್ದಾರ್ ರಜನಿಕಾಂತ, ಎಸ್‌.ಜಿ. ಪಾಟೀಲ್, ಎಸ್‌.ಕೆ. ಪಾಟೀಲ, ಕಂದಾಯ ಇಲಾಖೆ, ನ್ಯಾಯಾಂಗ ಇಲಾಖೆ, ತಾಲೂಕು ಪಂಚಾಯಿತಿ, ಪೊಲೀಸ್ ಇಲಾಖೆ, ಪಿಡಿಒ, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.