ರಾಣಿಬೆನ್ನೂರು: ಮುಂಗಾರು ಬಿತ್ತನೆಗೆ ಮೊದಲೇ ರಸಗೊಬ್ಬರದ ಕೊರತೆಯಾಗದಂತೆ ಮತ್ತು ಬೀಜಗಳ ಸಂಗ್ರಹದ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಸೋಮವಾರ ಕೃಷಿ ಇಲಾಖೆ ಸಿಬ್ಬಂದಿ ಮೂಲಕ ಸಹಾಯಕ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು. ರೈತ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ, ಮುಂಗಾರು ಪ್ರಾರಂಭಕ್ಕೂ ಮುನ್ನ ತಾಲೂಕಿನ ರೈತರಿಗೆ ಅಗತ್ಯವಿರುವ ರಸಗೊಬ್ಬರ ಮತ್ತು ಬೀಜಗಳ ದಾಸ್ತಾನು ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರ ಎಫ್‌ಐಡಿ ಮಾಡಿದರೆ ಮಾತ್ರ ಗೊಬ್ಬರ ಕೊಡುವುದಾಗಿ ಆದೇಶ ಮಾಡುವ ಮೂಲಕ ರೈತರನ್ನು ದಾರಿ ತಪ್ಪಿಸುವಂತಹ ವ್ಯವಸ್ಥೆ ಮಾಡಿದೆ. ರೈತರಿಗೆ ಇದು ಬರಸಿಡಿಲು ಬಡಿದಂತಾಗಿದೆ. ಈಗಾಗಲೇ ರೈತರು ಮುಂಗಾರು ಬಿತ್ತನೆಗೆ ಭೂಮಿಯನ್ನು ಹದಗೊಳಿಸಿ ಬಿತ್ತನೆಯ ತಯಾರಿಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರಿಗೆ ಎಫ್‌ಐಡಿ ಮಾಡಿಸಿ ಎಂದು ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ. ಒಂದು ಕಡೆಗೆ ಅಧಿಕಾರಿಗಳು ಸರ್ಕಾರದ ಆದೇಶವನ್ನು ಪಾಲನೆ ಮಾಡಲಿಕ್ಕೆ ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಸಕ್ತ ಸಾಲಿನ ಮುಂಗಾರು ಬಿತ್ತನೆಗೆ ಈ ಆದೇಶ ಕೈಬಿಟ್ಟು ಕೂಡಲೇ ರೈತರಿಗೆ ಬೀಜ ಮತ್ತು ಗೊಬ್ಬರ ಸಮರ್ಪಕವಾಗಿ ದೊರಕುವಂತೆ ಜಿಲ್ಲಾ ಮತ್ತು ತಾಲೂಕ ಆಡಳಿತ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಬೀಜ, ಗೊಬ್ಬರ ಅಂಗಡಿಯ ಮಾಲೀಕರನ್ನು, ರೈತರು, ವಿವಿಧ ಸಂಘಟನೆಗಳ ಮುಖಂಡರನ್ನು ಕರೆಯಿಸಿ ಸಭೆಗಳನ್ನು ಮಾಡಿ ಬೇರೆ ಬೇರೆ ಜಿಲ್ಲೆಗೆ ಗೊಬ್ಬರವನ್ನು ಕೊಡುತ್ತಿರುವ ಅಂಗಡಿಕಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಸ್ಥಳೀಯ ರೈತರಿಗೆ ಯಾವುದೇ ರೀತಿಯಲ್ಲಿ ಬೀಜ, ಗೊಬ್ಬರಕ್ಕೆ ತೊಂದರೆ ಆಗದಂತೆ ಹಾಗೂ ಸಮರ್ಪಕವಾಗಿ ವಿತರಿಸುವ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಈರಣ್ಣ ಬುಡುಪನಹಳ್ಳಿ, ಮಲ್ಲಿಕಾರ್ಜುನ ತೆಗ್ಗಿನ, ಬಸವರಾಜ ನೆಲೊಗಲ್, ಸೋಮನಗೌಡ ಪಾಟೀಲ, ಫಕ್ಕಿರೇಶ ಮಾಚೇನಹಳ್ಳಿ, ಬಸವರಾಜ ಹಾದಿಮನಿ, ಫಕ್ಕಿರೇಶ ರಂಗರೆಡ್ಡಿ, ಸಂಪತ್ ನಾಗರಹಳ್ಳಿ, ಸಿದ್ದಪ್ಪ ಪೂಜಾರ, ಶೇಖಪ್ಪ ಕೊಪ್ಪದ, ಸೋಮರೆಡ್ಡಿ ಹಾದಿಮನಿ, ಬಸವರಾಜ ಮೇಗಳಗೇರಿ ಮತ್ತಿತರರಿದ್ದರು.