ಗ್ರಾಪಂ ಸಿಬ್ಬಂದಿಗೆ ಅನುಮೋದನೆ ನೀಡಲು ಒತ್ತಾಯಿಸಿ ಜಿಪಂ ಸಿಇಒಗೆ ಮನವಿ ಸಲ್ಲಿಕೆ

| Published : Jun 22 2025, 11:47 PM IST / Updated: Jun 22 2025, 11:48 PM IST

ಗ್ರಾಪಂ ಸಿಬ್ಬಂದಿಗೆ ಅನುಮೋದನೆ ನೀಡಲು ಒತ್ತಾಯಿಸಿ ಜಿಪಂ ಸಿಇಒಗೆ ಮನವಿ ಸಲ್ಲಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಪಂಗಳಲ್ಲಿ 2017ಕ್ಕಿಂತ ಮುನ್ನ ನೇಮಕಗೊಂಡ ಕರ ವಸೂಲಿಗಾರರು, ವಾಟರ್ ಆಪರೇಟರ್, ಅಟೆಂಡರ್ ಹಾಗೂ ಸ್ವಚ್ಛತಾಗಾರರಿಗೆ ಕನಿಷ್ಠ ವಿದ್ಯಾರ್ಹತೆ ಹೊಂದಿಲ್ಲದ ಕಾರಣಕ್ಕೆ ಅನುಮೋದನೆಗಾಗಿ ಬಾಕಿ ಇರುವ ಸಿಬ್ಬಂದಿಗೆ ಸರ್ಕಾರದ ಆದೇಶದಂತೆ ಜಿಪಂ ಘಟನೋತ್ತರವಾಗಿ ಅನುಮೋದನೆ ನೀಡಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಗ್ರಾಮ ಪಂಚಾಯ್ತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಸರ್ಕಾರದ ಆದೇಶದಂತೆ ಅನುಮೋದನೆ ನೀಡುವಂತೆ ಒತ್ತಾಯಿಸಿ ಜಿಲ್ಲಾ ಪಂಚಾಯ್ತಿ ಸಿಇಒಗೆ ಮನವಿ ಸಲ್ಲಿಸಿದರು.

ಜಿಪಂ ಕಚೇರಿಗೆ ತೆರಳಿದ ಹುಲಿವಾನ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಚಾಮರಾಜು ಮತ್ತು ಇತರರು ಜಿಪಂ ಉಪ ಕಾರ್‍ಯದರ್ಶಿ ಬಾಬು ಅವರಿಗೆ ಮನವಿ ಸಲ್ಲಿಸಿ ಶೀಘ್ರವೇ ಕ್ರಮಕ್ಕೆ ಒತ್ತಾಯಿಸಿದರು.

ಗ್ರಾಪಂಗಳಲ್ಲಿ 2017ಕ್ಕಿಂತ ಮುನ್ನ ನೇಮಕಗೊಂಡ ಕರ ವಸೂಲಿಗಾರರು, ವಾಟರ್ ಆಪರೇಟರ್, ಅಟೆಂಡರ್ ಹಾಗೂ ಸ್ವಚ್ಛತಾಗಾರರಿಗೆ ಕನಿಷ್ಠ ವಿದ್ಯಾರ್ಹತೆ ಹೊಂದಿಲ್ಲದ ಕಾರಣಕ್ಕೆ ಅನುಮೋದನೆಗಾಗಿ ಬಾಕಿ ಇರುವ ಸಿಬ್ಬಂದಿಗೆ ಕನಿಷ್ಠ ವಿದ್ಯಾರ್ಹತೆ ಹೊರತುಪಡಿಸಿ ಸಭಾ ನಡವಳಿ, ವೇತನ ಪಾವತಿ, ಹಾಜರಾತಿ ಆಧಾರದ ಮೇಲೆ ಒಂದು ಬಾರಿಗೆ ಸರ್ಕಾರದ ಆದೇಶದಂತೆ ಜಿಪಂ ಘಟನೋತ್ತರವಾಗಿ ಅನುಮೋದನೆ ನೀಡುವಂತೆ ಆಗ್ರಹಿಸಿದರು.

ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಐದಾರು ತಿಂಗಳ ಹಿಂದೆಯೇ ಸಿಬ್ಬಂದಿ ದಾಖಲಾತಿ ಪರಿಶೀಲನಾ ಕಾರ್‍ಯ ನಡೆಸಿದ್ದು, ಇದುವರೆಗೂ ಜಿಪನಲ್ಲಿ ಅನುಮೋದನೆ ನೀಡಿಲ್ಲ. ಇದರಿಂದ ಗ್ರಾಪಂಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಯಾವುದೇ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಕೆಲವರು ನಿವೃತ್ತಿ ಹಂಚಿನಲ್ಲಿದ್ದಾರೆ. ಇದು ನೋವಿನ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಗ್ರಾಪಂ ಸಿಬ್ಬಂದಿಗೆ ಸರ್ಕಾರದಿಂದ ದೊರೆಯಬಹುದಾದ ಎಲ್ಲಾ ಸೌಲಭ್ಯ ನೀಡಲು ತಕ್ಷಣ ಜಿಪಂ ಸಿಇಒ ಅವರು ಈ ಬಗ್ಗೆ ಗಮನ ಹರಿಸಿ ಅನುಮತಿ ನೀಡಲು ಕ್ರಮ ವಹಿಸಬೇಕು. ಇಲ್ಲದಿದ್ದಲ್ಲಿ ಜಿಲ್ಲೆ ಸಂಘ ಸಂಸ್ಥೆಗಳೊಂದಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಮು, ಬೂದನೂರು ಗ್ರಾಪಂ ಮಾಜಿ ಸದಸ್ಯ ಬಿ.ಕೆ. ಸತೀಶ್ ಸೇರಿದಂತೆ ಹಲವರು ಇದ್ದರು.