ಯುವತಿ ಅಪಹರಣ ಆರೋಪಿಗೆ ಪಿಎಫ್‌ಐ ನಂಟು: ಎಎನ್‌ಐ ತನಿಖೆ ಆಗ್ರಹ

| Published : Apr 03 2025, 12:30 AM IST

ಯುವತಿ ಅಪಹರಣ ಆರೋಪಿಗೆ ಪಿಎಫ್‌ಐ ನಂಟು: ಎಎನ್‌ಐ ತನಿಖೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಮಣಿಪಾಲದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಅಪಹರಿಸಿದ ಆರೋಪಿ, ಇಲ್ಲಿನ ಕರಂಬಳ್ಳಿಯ ನಿವಾಸಿ ಮೊಹಮ್ಮದ್ ಅಕ್ರಮ್ ಗೆ ನಿಷೇಧಿತ ಪಿಎಫ್ಐ ನಂಟಿದ್ದು, ಇದೊಂದು ವ್ಯವಸ್ಥಿತ ಲವ್‌ಜಿಹಾದ್ ಪ್ರಕರಣವಾಗಿದೆ. ಇದನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಮೂಲಕ ತನಿಖೆ ನಡೆಸಬೇಕು ಎಂದು ವಿಶ್ವ ಹಿಂದೂ ಪರಿಷತ್‌ ಪ್ರಾಂತ ಗೋರಕ್ಷ ಪ್ರಮುಖ್ ಸುನೀಲ್ ಕೆ.ಆರ್ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಇತ್ತೀಚೆಗೆ ಮಣಿಪಾಲದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಅಪಹರಿಸಿದ ಆರೋಪಿ, ಇಲ್ಲಿನ ಕರಂಬಳ್ಳಿಯ ನಿವಾಸಿ ಮೊಹಮ್ಮದ್ ಅಕ್ರಮ್ ಗೆ ನಿಷೇಧಿತ ಪಿಎಫ್ಐ ನಂಟಿದ್ದು, ಇದೊಂದು ವ್ಯವಸ್ಥಿತ ಲವ್‌ಜಿಹಾದ್ ಪ್ರಕರಣವಾಗಿದೆ. ಇದನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಮೂಲಕ ತನಿಖೆ ನಡೆಸಬೇಕು ಎಂದು ವಿಶ್ವ ಹಿಂದೂ ಪರಿಷತ್‌ ಪ್ರಾಂತ ಗೋರಕ್ಷ ಪ್ರಮುಖ್ ಸುನೀಲ್ ಕೆ.ಆರ್ ಆಗ್ರಹಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯುವತಿ 9 ನೇ ತರಗತಿಯಲ್ಲಿ ಇದ್ದಾಗಲೇ ಅಕ್ರಮ್ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯಿಸಿಕೊಂಡು ಲವ್ ಜಿಹಾದ್ ಬಲೆಗೆ ಬೀಳಿಸಿಕೊಂಡು, ಆಶ್ಲೀಲ ಪೋಟೊಗಳನ್ನು ಚಿತ್ರಿಸಿ, ಆಕೆಯ ಹೆತ್ತವರನ್ನು ಬೆದರಿಸಿದ್ದ. ಆಗ ಯುವತಿಯೇ ಆತನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿದ್ದಳು. ಆದರೂ ಆತ ನಿರಂತರವಾಗಿ ಆಕೆಯನ್ನು ಹಿಂಬಾಲಿಸಿ, ಅಪಹರಿಸಿಕೊಂಡು ಹೋಗಿದ್ದಾನೆ ಎಂದು ಆರೋಪಿಸಿದರು.

ಅಕ್ರಮ್ ಡ್ರಗ್ಸ್ ಜಾಲದಲ್ಲಿ ಸಕ್ರಿಯನಾಗಿದ್ದು, ಕುಖ್ಯಾತ ಗರುಡ ಗ್ಯಾಂಗಿನ ಸದಸ್ಯ ಎಂದು ಸಂತ್ರಸ್ತೆಯ ಪೋಷಕರೇ ತಿಳಿಸಿದ್ದಾರೆ. ಪೋಲಿಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಪೋಷಕರ ಮಡಿಲಿಗೆ ಮಗಳನ್ನು ಸೇರಿಸಿ ನ್ಯಾಯ ದೊರಕಿಸಿ ಕೊಡಬೇಕು ಎಂದು ಸುನಿಲ್ ಒತ್ತಾಯಿಸಿದರು.

ಯುವತಿಯನ್ನು ಬೆದರಿಸಿ ಅಪಹರಿಸಿದ ಅಕ್ರಮ್‌ನನ್ನು ಬಂಧಿಸಿ, ಆತನ ಹಿಂದಿರುವ ಜಾಲ ತನಿಖೆ ನಡೆಸಬೇಕು. ರಾಜ್ಯ ಗೃಹ ಸಚಿವರು ಹಾಗು ಕೇಂದ್ರ ಗೃಹ ಸಚಿವರಿಗೆ ಮನವಿ ನೀಡಿ, ಎನ್‌ಐಎಗೆ ಪ್ರಕರಣವನ್ನು ನೀಡುವಂತೆ ಆಗ್ರಹಿಸಲಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಿಹಿಂಪ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ವಿಭಾಗ ಪ್ರಚಾರ ಪ್ರಮುಖ್ ಪ್ರದೀಪ್ ಸರಿಪಲ್ಲ, ಜಿಲ್ಲಾ ಸಂಯೋಜಕ್ ಮನೋಜ್ ಮಲ್ಪೆ ಇದ್ದರು.

ಮೀಸಲಾತಿಗೆ ಪ್ರತಿಭಟನೆ:

ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಮುಸ್ಲಿಂರಿಗೆ ಘೋಷಿಸಿರುವ ವಿಶೇಷ ಮೀಸಲಾತಿ ವಿರೋಧಿಸಿ ರಾಜ್ಯದಾದ್ಯಾಂತ ವಿ.ಹಿಂ.ಪ. ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಉಡುಪಿಯಲ್ಲಿ ಏ.8 ರಂದು ಬೃಹತ್‌ ಪ್ರತಿಭಟನೆ ನಡೆಯಲಿದೆ ಎಂದು ಸುನೀಲ್ ಕೆ‌.ಆರ್ ತಿಳಿಸಿದ್ದಾರೆ.