ದೈಹಿಕ, ಮಾನಸಿಕ ಆರೋಗ್ಯದ ಕಾಳಜಿ ಅಗತ್ಯ

| Published : Dec 17 2024, 01:02 AM IST

ಸಾರಾಂಶ

ಹದಿ ವಯಸ್ಸು ಎಷ್ಟು ಸುಂದರವೋ ಅಷ್ಟೇ ನಾಜೂಕಾದ ವಯಸ್ಸಾಗಿದೆ.

ಹೂವಿನಹಡಗಲಿ; ಹದಿ ಹರೆಯದ ವಯಸ್ಸಿನ ವಿದ್ಯಾರ್ಥಿನಿಯರು ತಮ್ಮ ದೈಹಿಕ, ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ತಜ್ಞ ವೈದ್ಯೆ ಡಾ.ಶ್ರುತಿ ಟಿ. ಹೇಳಿದರು.

ತಾಲೂಕಿನ ಹೊಳಲು ಸ್ವಾಮಿ ವಿವೇಕಾನಂದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ವೈಯಕ್ತಿಕ ಸ್ವಚ್ಛತೆ ಹಾಗೂ ಮಾನಸಿಕ ಆರೋಗ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿನಿಯರೊಂದಿಗೆ ಆಪ್ತ ಸಮಾಲೋಚನೆ ಮಾಡಿ ಮಾತನಾಡಿದರು.

ಹದಿ ವಯಸ್ಸು ಎಷ್ಟು ಸುಂದರವೋ ಅಷ್ಟೇ ನಾಜೂಕಾದ ವಯಸ್ಸಾಗಿದೆ. ಈ ಹಂತದಲ್ಲಿ ಹುಡುಗಿಯರಿಗೆ ದೈಹಿಕ ಮತ್ತು ಮಾನಸಿಕವಾಗಿ ಸಾಕಷ್ಟು ಬದಲಾವಣೆಗಳು ಆಗುತ್ತವೆ. ಈ ಎಲ್ಲ ಬದಲಾವಣೆಗಳ ಬಗ್ಗೆ ನಮಗೆ ಸೂಕ್ತ ಜ್ಞಾನ ಇದ್ದಾಗ ಮಾತ್ರ ನಾವು ಆರೋಗ್ಯವಾಗಿ ಇರಲು ಸಾಧ್ಯ ಎಂದರು.

ನಮ್ಮ ಸಮಾಜದಲ್ಲಿ ಮಹಿಳೆಯರ ಆರೋಗ್ಯದ ಬಗ್ಗೆ ಮುಕ್ತವಾಗಿ ಮಾತನಾಡುವ ವಾತಾವರಣವನ್ನು ನಾವು ಸೃಷ್ಟಿ ಮಾಡಬೇಕಿದೆ. ಆ ಮೂಲಕ ಎಲ್ಲ ತರಹದ ಭಯ, ಹಿಂಜರಿಕೆಗಳನ್ನು ದೂರ ಮಾಡಬೇಕಿದೆ. ವಿದ್ಯಾರ್ಥಿನಿಯರ ವೈಯಕ್ತಿಕ ಸ್ವಚ್ಛತೆ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಕಾಲೇಜಿಗೆ ಇರುವ ಕಾಳಜಿಯನ್ನು ಶ್ಲಾಘಿಸಿದರು. ಎಲ್ಲ ಕಾಲೇಜಿಗಳಲ್ಲಿ ಈ ತರಹದ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕಿದೆ ಎಂದರು.

ಆಪ್ತ ಸಮಾಲೋಚನೆಯಲ್ಲಿ ವಿದ್ಯಾರ್ಥಿನಿಯರು ಮುಕ್ತವಾಗಿ ಪ್ರಶ್ನೆಗಳನ್ನು ಕೇಳಿ ತಮ್ಮ ಸಮಸ್ಯೆ ಹಾಗೂ ಗೊಂದಲಗಳನ್ನು ಪರಿಹರಿಸಿಕೊಂಡರು.

ವಿದ್ಯಾರ್ಥಿಗಳಾದ ಸಹನಾ, ಪುಷ್ಪಲತಾ ಅನಿಸಿಕೆ ಹಂಚಿಕೊಂಡರು.

ಪ್ರಾಚಾರ್ಯ ಬಿ.ಸಣ್ಣನೀಲಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಸುಮಾ ಶಾಕಾರ, ಶಿದ್ದಲಿಂಗೇಶ, ಕಾರ್ಯಕ್ರಮ ಸಂಯೋಜಕ ಪರಶುರಾಮ ನಾಗೋಜಿ ಉಪಸ್ಥಿತರಿದ್ದರು.