ಸಿರಗುಪ್ಪ: ರೈತರೇ ಬ್ಯಾಂಕಿನ ಶಕ್ತಿಯಿದ್ದಂತೆ. ರೈತರು ಸಕಾಲದಲ್ಲಿ ಸಾಲ ಪಾವತಿಸಿ ಬ್ಯಾಂಕ್ ಅನ್ನು ಕಲಬುರುಗಿ ವಿಭಾಗದಲ್ಲಿ ಹಾಗೂ ಬಳ್ಳಾರಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನದಲ್ಲಿರಲು ಅನುಕೂಲ ಮಾಡಿಕೊಟ್ಟ ರೈತರಿಗೆ ಅಭಿನಂದನೆಗಳು ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಚೊಕ್ಕ ಬಸವನಗೌಡ ಹೇಳಿದರು.

ನಗರದ ಶ್ರೀಶೈಲ ಸಾಂಸ್ಕೃತಿಕ ಭವನದಲ್ಲಿ ಶನಿವಾರ ಸಿರಗುಪ್ಪ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ 2025-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಜನ ಸಭೆ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದ ರೈತರಿಗೆ ಮತ್ತು ಸಣ್ಣ ಉದ್ಯಮಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸಿ, ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವುದು ಹಾಗೂ ಬಡವರನ್ನು, ದುರ್ಬಲ ವರ್ಗಗಳನ್ನು ಶೋಷಣೆಯಿಂದ ರಕ್ಷಿಸುವಲ್ಲಿ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕುಗಳು ಪ್ರಮುಖ ಪಾತ್ರವಹಿಸುತ್ತವೆ. ಬಡವರು ಹಾಗೂ ಕೃಷಿಕರನ್ನು ಮಧ್ಯವರ್ತಿಗಳ ಶೋಷಣೆಯಿಂದ ರಕ್ಷಿಸುವ ಕೆಲಸವನ್ನು ಸಹಕಾರಿ ಬ್ಯಾಂಕ್ ಗಳು ಮಾಡುತ್ತವೆ. ಬ್ಯಾಂಕಿನ ಅಭಿವೃದ್ಧಿಗೆ ಸಾಲ ವಸೂಲಾತಿಯೇ ಅತಿ ಮುಖ್ಯವಾಗಿರುತ್ತದೆ. ನಮ್ಮ ಬ್ಯಾಂಕ್ ತಾಲೂಕಿನಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದರೂ ಶೇಕಡ 96.26 ವಸೂಲಿ ಮಾಡಿ ಉತ್ತಮ ಸಾಲ ವಸೂಲಾತಿಗಾಗಿ ಕಲಬುರಗಿ ವಿಭಾಗ ಮಟ್ಟದಲ್ಲಿ ಪ್ರಥಮ ಸ್ಥಾನಕ್ಕೆ ಪುರಸ್ಕಾರಗೊಂಡಿದೆ. ಬೆಂಗಳೂರು ಕಾಸ್ಕಾರ್ಡ್ ಬ್ಯಾಂಕ್ ನಿಂದ ರಾಜ್ಯ ಮಟ್ಟದಲ್ಲಿ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಬ್ಯಾಂಕ್ ಆಯ್ಕೆಯಾಗಿರುವುದು ಸಂತೋಷದ ವಿಷಯವಾಗಿದೆ. ಬ್ಯಾಂಕಿನ ಲಾಭಾಂಶದಲ್ಲಿ ಮುಂದಿನ ದಿನಗಳಲ್ಲಿ ಭದ್ರತಾ ಕೊಠಡಿ ನಿರ್ಮಾಣ, ಬ್ಯಾಂಕಿನ ಮುಂಭಾಗದ ಜಾಗದಲ್ಲಿ ವಾಣೀಜ್ಯ ಮಳಿಗೆಗಳ ನಿರ್ಮಾಣ, ಗೋದಾಮಿನ ಸುತ್ತ ಕಾಂಪೌಂಡ್, ಸೂಪರ್ ಮಾರ್ಕೆಟ್ ವ್ಯವಹಾರ ನಡೆಸುವ ಕುರಿತು ಚಿಂತಿಸಲಾಗಿದೆ ಎಂದರು.

ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯ 80 ವಿದ್ಯಾರ್ಥಿಗಳಿಗೆ ಪ್ರತಿ ವಿದ್ಯಾರ್ಥಿಗೆ ₹5,000ಗಳಂತೆ ಪ್ರೋತ್ಸಾಹ ಧನವನ್ನು ನೀಡಿ ಮುಂದಿನ ವಿದ್ಯಾಭ್ಯಾಸ ಮಾಡಲು ಪ್ರೋತ್ಸಾಹಿಸುವ ಕೆಲಸವನ್ನು ಬ್ಯಾಂಕ್ ಮಾಡುತ್ತಿದೆ ಎಂದರು.

ಪಿಕಾರ್ಡ್ ಬ್ಯಾಂಕಿನ ವ್ಯವಸ್ಥಾಪಕ ತಿಪ್ಪಣ್ಣ ಬನಸೋಡೆ ವಾರ್ಷಿಕ ಲೆಕ್ಕ ಪತ್ರದ ವಿವರಗಳನ್ನು ಮಂಡಿಸಿದರು. ಪ್ರತಿವರ್ಷ ಸಾಲ ಪಡೆದು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿದ 60 ರೈತರನ್ನು ಬ್ಯಾಂಕ್ ವತಿಯಿಂದ ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಡಿ.ಆರ್. ಚಂದ್ರಾರೆಡ್ಡಿ, ನಿರ್ದೇಶಕ ತಿಮ್ಮಪ್ಪ ಪಿ, ಮಲ್ಲಯ್ಯ ಕೆ., ಶಾಂತನಗೌಡ ಎಚ್, ಬಿ.ಎಂ. ಜಡೇಸ್ವಾಮಿ, ಶಿವರಾಮಗೌಡ ಎಚ್, ಪುರಗೈ ತಾಯಪ್ಪ, ತಿಮ್ಮನಗೌಡ ವಿ., ಸರಸ್ವತಿ ಎಚ್., ಮರೇಗೌಡ, ಶಂಕ್ರಪ್ಪ, ಎಂ. ರಾಧಾ, ಗೋಣೆಪ್ಪನವರ ನಾಗರಾಜ, ವೃತ್ತಿಪರ ನಿರ್ದೇಶಕರಾದ ಸುಳುವಾಯಿ ಮಲ್ಲಿಕಾರ್ಜುನ, ಗಿರೀಶ್ ಗೌಡ, ಶಿಕ್ಷಕ ದಿವಾಕರ ನಾರಾಯಣ್, ಬ್ಯಾಂಕಿನ ಸರ್ವಸದಸ್ಯರು, ಬ್ಯಾಂಕ್ ಸಿಬ್ಬಂದಿ ಇತರರಿದ್ದರು.