ಹಕ್ಕುಪತ್ರ ವಿತರಿಸುವಂತೆ ಹಂದಿಜೋಗಿ ಸಮುದಾಯ ಮನವಿ

| Published : Jul 06 2024, 12:53 AM IST

ಹಕ್ಕುಪತ್ರ ವಿತರಿಸುವಂತೆ ಹಂದಿಜೋಗಿ ಸಮುದಾಯ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾತ್ಮಗಾಂಧಿ ಬಡಾವಣೆಯಲ್ಲಿ ಹಂದಿಜೋಗಿ ಸಮುದಾಯದ ಸುಮಾರು 20ಕ್ಕೂ ಅಧಿಕ ಕುಟುಂಬಗಳು ಕಳೆದ 25 ವರ್ಷಗಳಿಂದಲೂ ಗುಡಿಸಲು ನಿರ್ಮಿಸಿಕೊಂಡು ಹಂದಿಸಾಕಾಣಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಕಳೆದ 25 ವರ್ಷಗಳಿಂದ ಪಟ್ಟಣದ ಮಹಾತ್ಮಗಾಂಧಿ ಬಡಾವಣೆಯಲ್ಲಿ ವಾಸಿಸುತ್ತಿರುವ ಹಂದಿಜೋಗಿ ಕುಟುಂಬಗಳಿಗೆ ಸರಕಾರದಿಂದ ಹಕ್ಕುಪತ್ರ ವಿತರಿಸುವಂತೆ ಆಗ್ರಹಿಸಿ ಶುಕ್ರವಾರ ಪುರಸಭೆ ಮುಖ್ಯಾಧಿಕಾರಿ ವೀಣಾ ಅವರಿಗೆ ನಿವಾಸಿಗಳು ಮನವಿ ಸಲ್ಲಿಸಿದರು.

ಬಡಾವಣೆಯ ಪುರಸಭೆ ಸದಸ್ಯ ಚಂದ್ರು ನೇತೃತ್ವದಲ್ಲಿ ಪುರಸಭೆಗೆ ಆಗಮಿಸಿದ ಹಂದಿಜೋಗಿ ಸಮುದಾಯದ 20ಕ್ಕೂ ಹೆಚ್ಚು ನಿವಾಸಿಗಳು ಹಕ್ಕು ಪತ್ರ ವಿತರಣೆ ಮಾಡಿಸುವಂತೆ ಮುಖ್ಯಾಧಿಕಾರಿಗಳನ್ನು ಒತ್ತಾಯಿಸಿದರು.

ಪುರಸಭೆ ಸದಸ್ಯ ಚಂದ್ರು ಮಾತನಾಡಿ, ಮಹಾತ್ಮಗಾಂಧಿ ಬಡಾವಣೆಯಲ್ಲಿ ಹಂದಿಜೋಗಿ ಸಮುದಾಯದ ಸುಮಾರು 20ಕ್ಕೂ ಅಧಿಕ ಕುಟುಂಬಗಳು ಕಳೆದ 25 ವರ್ಷಗಳಿಂದಲೂ ಗುಡಿಸಲು ನಿರ್ಮಿಸಿಕೊಂಡು ಹಂದಿಸಾಕಾಣಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ ಎಂದರು.

1999-20ನೇಸಾಲಿನಲ್ಲಿ ಮಹಾತ್ಮಗಾಂಧಿ ಬಡಾವಣೆಯ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲಾಗಿತ್ತು. ಆದರೆ, ಹಂದಿಜೋಗಿ ಸಮುದಾಯದವರಿಗೆ ಹಕ್ಕುಪತ್ರವನ್ನು ನೀಡಲಿಲ್ಲ. ಈ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡಬೇಕು, ಈ ವಿಚಾರವಾಗಿ ಶಾಸಕ ದರ್ಶನ್‌ ಪುಟ್ಟಣ್ಣಯ್ಯ, ಮಾಜಿ ಶಾಸಕರಾದ ಸಿ.ಎಸ್.ಪುಟ್ಟರಾಜು ಅವರಿಗೂ ಮನವಿ ಸಲ್ಲಿಸಿದ್ದೇವೆ. ಜತೆಗೆ ಇವರು ಹಂದಿಗಳನ್ನು ಸಾಕಾಣಿಕೆ ಮಾಡಲು ಸೂಕ್ತ ಸ್ಥಳವನ್ನು ಮಂಜೂರು ಮಾಡಿಕೊಡುವಂತೆ ಮನವಿ ಪತ್ರ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿ ವೀಣಾ ಅವರು, ಮಹಾತ್ಮಗಾಂಧಿ ಬಡಾವಣೆಯ ಹಂದಿಜೋಗಿ ಸಮುದಾಯದ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಮಾಡುವ ಬಗ್ಗೆ ಸೂಕ್ತ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಬಡಾವಣೆ ನಿವಾಸಿಗಳಾದ ಕುಮಾರ, ಹರೀಶ, ಮಂಜುಳ, ಪವಿತ್ರ, ರವಿ, ಮಂಜುಳ, ಭಾಗ್ಯ, ಸ್ವಾಮಿ, ರೂಪ, ವೆಂಕಟೇಶ್, ಗೌರಮ್ಮ, ವಿಷಕಂಠ, ಗೀತಾ ಸೇರಿದಂತೆ ಹಲವರು ಹಾಜರಿದ್ದರು.