ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ಪೈಲಟ್ ತರಬೇತಿ ಕೇಂದ್ರ: ಸಂಸದ

| Published : Oct 29 2023, 01:00 AM IST

ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ಪೈಲಟ್ ತರಬೇತಿ ಕೇಂದ್ರ: ಸಂಸದ
Share this Article
  • FB
  • TW
  • Linkdin
  • Email

ಸಾರಾಂಶ

ಏರ್‌ಬಸ್ ತರಬೇತಿಗೆ 50 ಎಕರೆ ಅವಶ್ಯಕವಿದ್ದು, ವಿಮಾನ ನಿಲ್ದಾಣ ಪಕ್ಕದಲ್ಲಿ ಜಾಗ ಲಭ್ಯ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಏರ್‌ಬಸ್ ತರಬೇತಿ ಕೇಂದ್ರ ಆರಂಭಿಸುವ ಕುರಿತು ಇಂಡಿಗೋ ಮತ್ತು ವಿಸ್ತಾರ ಸಂಸ್ಥೆಗಳಿಗೆ ಪ್ರಸ್ತಾವನೆ ಸಲ್ಲಿಸುವ ಕುರಿತು ಸಚಿವ ಎಂ.ಬಿ.ಪಾಟೀಲ್ ಅವರೊಂದಿಗೆ ಚರ್ಚಿಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಏರ್‌ಬಸ್ ತರಬೇತಿಗೆ 50 ಎಕರೆ ಜಾಗದ ಅವಶ್ಯಕತೆ ಇದೆ. ಅಷ್ಟು ಜಾಗ ಶಿವಮೊಗ್ಗ ವಿಮಾನ ನಿಲ್ದಾಣದ ಪಕ್ಕದಲ್ಲಿ ಲಭ್ಯವಿದೆ. ರಾಜ್ಯದಲ್ಲಿರುವ ಇನ್ನಿತರೆ ಸಂಸ್ಥೆಗಳು ಈಗಾಗಲೇ ತರಬೇತಿ ಕೇಂದ್ರಗಳನ್ನು ಹೊಂದಿವೆ. ಇಂಡಿಗೋ ಮತ್ತು ವಿಸ್ತಾರ ಸಂಸ್ಥೆಗಳು ತರಬೇತಿ ಕೇಂದ್ರಗಳನ್ನು ಹೊಂದಿಲ್ಲದಿರುವುದರಿಂದ ಆ ಸಂಸ್ಥೆಗಳಿಗೆ ತರಬೇತಿ ಕೇಂದ್ರ ಆರಂಭಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ವಿಮಾನ ನಿಲ್ದಾಣವನ್ನು ರಾಜ್ಯ ಸರ್ಕಾರವೇ ನೋಡಿಕೊಳ್ಳುತ್ತಿದೆ. ಖರ್ಚು ವೆಚ್ಚಗಳೂ ಹೆಚ್ಚಾಗುತ್ತಿವೆ. ಇದನ್ನು ನಿಭಾಯಿಸಲು ಆದಾಯ ಹೆಚ್ಚಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ. ಫ್ಲೈಟ್ ಕಾರ್ಯಾಚರಣೆ ಮುಂದುವರಿಸಲು ಪರಿಹರಿಸಬೇಕಾದ ಸಮಸ್ಯೆಗಳ ಬಗ್ಗೆ ಮತ್ತು ಬಿಡಿಡಿಎಸ್ ಸಲಕರಣೆಗಳ ನಿಯೋಜಿಸುವ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಅವರಿಂದ ಸಕಾರಾತ್ಮಕ ಭರವಸೆ ಸಿಕ್ಕಿದೆ ಎಂದರು. ಎಲ್ಲ ಹವಾಗುಣದಲ್ಲೂ ವಿಮಾನ ಇಳಿಯಲು ಮತ್ತು ರಾತ್ರಿ ವೇಳೆಯಲ್ಲಿ ಸಹ ಇಳಿಯಲು ಮತ್ತು ಹೊರಡಲು ಬೇಕಾಗಿರುವ ಯಂತ್ರೋಪಕರಣಗಳನ್ನು ಒದಗಿಸಲು, ಶಿವಮೊಗ್ಗದ ವಿಮಾನ ನಿಲ್ದಾಣದ ಅಭಿವೃದ್ಧಿ ಹಾಗೂ ಮುಂದಿನ ದೃಷ್ಟಿಕೋನ ಇಟ್ಟುಕೊಂಡು ನಿಲ್ದಾಣದ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲಾಗಿದೆ. ಮುಖ್ಯವಾಗಿ ವಿಮಾನ ನಿಲ್ದಾಣ ಭದ್ರತೆ ಹಾಗೂ ಬಾಂಬ್ ಬೆದರಿಕೆ ಬಗ್ಗೆ ವಿಮಾನ ಯಾನ ಭದ್ರತಾ ಬ್ಯೂರೋ ತಾತ್ಕಾಲಿಕವಾಗಿ ಅನುಮೋದಿಸಿದೆ. ಸಂಗ್ರಹಣೆಗಾಗಿ ಮೂರು ತಿಂಗಳ ಗಡುವು ನೀಡಲಾಗಿದೆ. ನ.28ರಂದು ಈ ಗಡುವು ಅಂತ್ಯಗೊಳ್ಳಲಿದೆ. ಅದನ್ನು ಮತ್ತೆ ನವೀಕರಣ ಮಾಡಬೇಕಾಗಿದೆ ಎಂದು ಹೇಳಿದರು. ರಾಜ್ಯ ಸರ್ಕಾರ ಅನುಮತಿ: ಇದರ ನಡುವೆ ಸ್ಟಾರ್ ಏರ್ ಕಂಪೆನಿಯು ನ.21ರಿಂದ ತನ್ನ ಸೇವೆ ಆರಂಭಿಸುತ್ತದೆ. ಇದರ ಮಾನ್ಯತೆಯು ಕೂಡ ನ.28ರವರೆಗೆ ಇರುತ್ತದೆ. ಆದ್ದರಿಂದ ಬಿಸಿಎಎಸ್ ಮತ್ತು ಡಿಜಿಸಿಎ ಇಂದ ಕೇವಲ7 ದಿನಗಳವರೆಗೆ ಅನುಮೋದನೆ ಪಡೆಯಬೇಕಾಗಿದೆ. ಈ ಹಿನ್ನೆಲೆ ಸುಮಾರು ಎರಡೂವರೆ ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣದಲ್ಲಿ ಸೌಕರ್ಯಗಳನ್ನು ನೀಡಬೇಕಾಗಿದೆ. ರಾಜ್ಯ ಸರ್ಕಾರ ಇದಕ್ಕೆ ತನ್ನ ಅನುಮತಿ ನೀಡಿದೆ ಎಂದರು. ಇದಲ್ಲದೇ, ಶಿವಮೊಗ್ಗ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲಾಗುವುದು. ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೋಟೆಲ್‌ಗಳು, ಮಾಲ್‌ಗಳು ಸಂಕೀರ್ಣಗಳನ್ನು ಸ್ಥಾಪಿಸಲಾಗುವುದು. ಮುಖ್ಯವಾಗಿ ವಿಸ್ತಾರ ಮತ್ತು ಇಂಡಿಗೋದಂತಹ ವಿಮಾನಯಾನ ಸಂಸ್ಥೆಗಳ ಮೂಲಕ ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ಬೋಯಿಂಗ್ ಅಥವಾ ಏರ್‌ಬಸ್ ತರಬೇತಿ ನೀಡುವ ಕೇಂದ್ರಗಳನ್ನು ತೆರೆಯಲಾಗುವುದು ಎಂದರು. ಒಟ್ಟಾರೆ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಎಲ್ಲಾ ರೀತಿಯಲ್ಲೂ ಅಭಿವೃದ್ಧಿಪಡಿಸಲು ಅನುಕೂಲ ಆಗುವಂತೆ ರಾಜ್ಯ ಸರ್ಕಾರದ ನೆರವು ಪಡೆದು ಸುಸೂತ್ರ ವಿಮಾನ ಹಾರಾಟಕ್ಕೆ ಅವಕಾಶ ಮಾಡಿಕೊಡಲಾಗುವುದು. ಬೇರೆ ಬೇರೆ ಸ್ಥಳಗಳಿಗೆ ಬೇರೆ ಬೇರೆ ವಿಮಾನ ಸಂಸ್ಥೆಗಳ ಮೂಲಕ ಹಾರಾಟಕ್ಕೆ ಅನುವು ಮಾಡಿಕೊಡಲಾಗುವುದು. ಪರವಾನಿಗೆ ಕೂಡ ವಿಸ್ತರಿಸಲಾಗುವುದು. ಶಾಶ್ವತ ಪರವಾನಿಗೆಯತ್ತ ಚಿಂತನೆ ನಡೆದಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ವಿಧಾನಪರಿಷತ್‌ ಸದಸ್ಯ ಎಸ್‌.ರುದ್ರೇಗೌಡ, ಪ್ರಮುಖರಾದ ದತ್ತಾತ್ರಿ, ಶಿವರಾಜ್, ಮಾಲತೇಶ್, ಜಗದೀಶ್, ಬಿ.ಕೆ. ಶ್ರೀನಾಥ್, ಅಣ್ಣಪ್ಪ, ಶರತ್ ಮತ್ತಿತರರು ಇದ್ದರು. - - - -28ಎಸ್‌ಎಂಜಿಕೆಪಿ02: ಬಿ.ವೈ.ರಾಘವೇಂದ್ರ