ಕನ್ನಡಪ್ರಭವಾರ್ತೆ ನಾಪೋಕ್ಲು
ಕಕ್ಕಬ್ಬೆಯ ಯವಕಪಾಡಿ ಗ್ರಾಮದ ನೆಟ್ಟು ಮಾಡು ಶ್ರೀ ಭಗವತಿ ದೇವಿಯ ಬ್ರಹ್ಮ ಕಲಶ ಮತ್ತು ಪುನರ್ ಪ್ರತಿಷ್ಠಾಪನೆಯು ಬುಧವಾರ ಶ್ರದ್ಧಾ ಭಕ್ತಿಯಿಂದ ವಿಜೃಂಭಣೆಯಿಂದ ನೆರವೇರಿತು. ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆ 10.21 ರಿಂದ 11.30ರ ವೃಷಭ ಲಗ್ನದಲ್ಲಿ ಅಮ್ಮನವರ ಬಿಂಬ ಪ್ರತಿಷ್ಠೆ ಜೀವ ಕಲಶ ಅಭಿಷೇಕ, ಶಿಖರ ಪ್ರತಿಷ್ಠೆ, ಪರಿವಾರ ಪ್ರತಿಷ್ಠೆ ನಡೆಯಿತು. ಭಕ್ತರು ಅಧಿಕ ಸಂಖ್ಯೆಯಲ್ಲಿ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಹಾಗೂ ಸಂಜೆ ದೇವರ ಉತ್ಸವ ಜರುಗಿ ಮಂತ್ರಾಕ್ಷತೆ ನಡೆಯಿತು. ದೇವಸ್ಥಾನದಲ್ಲಿ ನೂತನವಾಗಿ ಪುನರ್ ನಿರ್ಮಿಸಿರುವ ದೇವ ಸಾನಿಧ್ಯ ಬಿಂಬ ಪುನರ್ ಪ್ರತಿಷ್ಠೆ, ಅಷ್ಟ ಬಂಧ ಲೇಪನ, ಬ್ರಹ್ಮ ಕಲಶ ಕಾರ್ಯಕ್ರಮದ ಪೂರ್ವ ಕಾರ್ಯಕ್ರಮ 22 ರಿಂದ ಪ್ರಾರಂಭಗೊಂಡು ಇದರ ಅಂಗವಾಗಿ ಗಣಪತಿ ಹೋಮ, ಬಿಂಬಶುದ್ದಿ, ಕಲಶಾಭಿಷೇಕ, ಶಾಂತಿ ಹೋಮ, ಪ್ರಾಯಶ್ಚಿತ ಹೋಮಗಳು ನಡೆದವು. ದುರ್ಗಾ ನಮಸ್ಕಾರ ಪೂಜೆ ಗಣಪತಿ ಹೋಮ, ಸಂಹಾರ ತತ್ವ ಹೋಮ, ಸಂಹಾರ ತತ್ವ ಕಲಶ ಪೂಜೆ, ಸಂಹಾರ ತತ್ವ ಕಲಶಾಭಿಷೇಕ, ಅನುಜ್ಞಾ ಕಲಶಾಭಿಷೇಕ, ಅನುಜ್ಞಾಪ್ರಾರ್ಥನೆ, ದೇವ ಕಲಶ ಪೂಜೆ, ಜೀವದ್ವಾಪನೆ, ಜೀವ ಕಲಶ ನೆರವೇರಿದವು. ಸಂಜೆ ಕುಂಬೇಶ ಕರ್ಕರಿ ಕಲಶ ಪೂಜೆ, ಆದಿ ವಾಸ ಹೋಮ, ಧ್ಯಾನ ಧೀವಾಸ, ಬ್ರಹ್ಮಕಲಶ ಪೂಜೆ, ಪರಿಕಲಶ ಪೂಜೆ ಸೇರಿದಂತ ವಿವಿಧ ಪೂಜಾ ವಿಧಿ ವಿಧಾನಗಳು ನೆರವೇರಿದವು. ಬುಧವಾರ ಬೆಳಿಗ್ಗೆ ಗಣಪತಿ ಹೋಮ, ಪ್ರಾಸಾದ ಪ್ರತಿಷ್ಠೆ, ಪೀಠ ಪ್ರತಿಷ್ಠೆ ಯೊಂದಿಗೆ ಪುನರ್ ಪ್ರತಿಷ್ಟಾಪನೆ ಕಾರ್ಯಕ್ರಮಕ್ಕೆ ಚಾಲನೆನೀಡಲಾಯಿತು.ಈ ಸಂದರ್ಭ ದೇವಸ್ಥಾನದ ತಕ್ಕ ಮುಖ್ಯಸ್ಥರಾದ ಪಾಂಡಂಡ ಜೆ ನರೇಶ್, ಆಡಳಿತ ಮಂಡಳಿ ಅಧ್ಯಕ್ಷ ಬಡಕಡ ಎಂ ತಿಮ್ಮಯ್ಯ, ಕಾರ್ಯದರ್ಶಿ ಅಂಜಪರವಂಡ ಚೋಮನಿ ಹಾಗೂ ಸದಸ್ಯರು, ದೇವಾಲಯದ ಮುಖ್ಯ ಅರ್ಚಕ ಪದ್ಮನಾಭ ಉಡುಪ ಸೇರಿದಂತೆ ಊರ ಮತ್ತು ಪಾರ ಊರಿನ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು. ಕಕ್ಕಬ್ಬೆಯ ಯವಕಪಾಡಿ ಗ್ರಾಮದ ನೆಟ್ಟು ಮಾಡು ಶ್ರೀ ಭಗವತಿ ದೇವಿಯ ಬ್ರಹ್ಮ ಕಲಶ ಮತ್ತು ಪುನರ್ ಪ್ರತಿಷ್ಟಾಪನೆಯಲ್ಲಿ ನಾಗ ಪ್ರತಿಷ್ಠಾಪನೆಯ ಪೂಜಾ ವಿಧಿ ವಿಧಾನಗಳು ಜರುಗಿತು.