ಸಾರಾಂಶ
ಹೊಸಪೇಟೆ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ವಿಜಯನಗರ ಜಿಲ್ಲಾ ಘಟಕ ಹಾಗೂ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಜಿಲ್ಲಾ ಹಾಗೂ ಸ್ಥಳೀಯ ಘಟಕದ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹಾಗೂ ಭಾರತೀಯ ರೆಡ್ ಕ್ರಾಸ್ ನ ವಿಜಯನಗರ ಘಟಕದ ಜಿಲ್ಲಾಧ್ಯಕ್ಷ ಎಂ.ಎಸ್. ದಿವಾಕರ್ ಸಸಿ ನೆಟ್ಟು ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ದೇಶದಲ್ಲಿ ಶೇ.33ರಷ್ಟು ಅರಣ್ಯ ಪ್ರದೇಶ ಇರಬೇಕು. ಆದರೆ ಪ್ರಸ್ತುತ ಶೇ.೨೧ರಷ್ಟು ಇದೆ. ಇದರಿಂದಾಗಿ ತಾಪಮಾನ ಹೆಚ್ಚುತ್ತಿದೆ. ದೆಹಲಿಯ ತಾಪಮಾನ 50 ಡಿಗ್ರಿ ದಾಟಿದೆ. ಈ ಬಾರಿ ನಗರದಲ್ಲಿಯೂ ದಾಖಲೆ ಪ್ರಮಾಣದ ಉಷ್ಣಾಂಶ ಏರಿಕೆಯಾಗಿತ್ತು. ಅದನ್ನು ತಡೆಯಲು ಹೆಚ್ಚು ಹೆಚ್ಚು ಗಿಡ ನೆಟ್ಟು ಪರಿಸರ ಸಮತೋಲನ ಗೊಳಿಸಬೇಕು. ಪರಿಸರ ರಕ್ಷಣೆ ಅಥವಾ ಜಾಗೃತಿ ಎಂಬುದು ಒಂದು ದಿನದ ಸಿಮೀತ ಕಾರ್ಯಕ್ರಮವಾಗದೇ ಜೀವನ ಪದ್ಧತಿಯಾಗಬೇಕು ಎಂದರು.
ರೆಡ್ ಕ್ರಾಸ್ ನ ಉಪಸಭಾಪತಿ ರವಿಶಂಕರ್ ಮಾತನಾಡಿ, ಹುಟ್ಟು ಹಬ್ಬದ ಸಂದರ್ಭದಲ್ಲಿ ಚಾಕೋಲೇಟ್, ಕೇಕ್ಗೆ ಹಣ ಸುರಿಯುವ ಬದಲು ₹೨೫ ಕೊಟ್ಟು ಸಸಿ ಕೊಂಡು ನೆಡುವುದರಿಂದ ಸಾರ್ಥಕ ಭಾವ ಬರಲಿದೆ. ಇದನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಅನುಸರಿಸಬೇಕು ಎಂದರು. ಎಂಎಸ್ಪಿಎಲ್ ಸಹಕಾರದೊಂದಿಗೆ ಕ್ರೀಡಾಂಗಣ ಸುತ್ತ ಗಿಡಗಳನ್ನು ನೆಡಲಾಯಿತು.ಈ ಸಂದರ್ಭದಲ್ಲಿ ವಿಜಯನಗರ ರೆಡ್ ಕ್ರಾಸ್ ನ ಸಭಾಪತಿ ಎಚ್. ಶ್ರೀನಿವಾಸರಾವ್, ಜಿಲ್ಲಾ ಕಾರ್ಯದರ್ಶಿ ಅನ್ನಪೂರ್ಣ ಸದಾಶಿವ, ಜಿಲ್ಲಾ ಪ್ರತಿನಿಧಿ ರೇಖಾ ಪ್ರಕಾಶ್, ಪಿ.ಕೊಟ್ರಪ್ಪ, ಪ್ರಭಾಕರ್, ಎಂ.ಎಂ. ತಿಪ್ಪೇಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ, ಸ್ಕೌಟ್ಸ್ ಆ್ಯಂಡ್ ಗೈಡ್ ನ ಜಿಲ್ಲಾಧ್ಯಕ್ಷ ಮಂಜುನಾಥ, ತಿಪ್ಪೇಸ್ವಾಮಿ, ಎಂಎಸ್ಪಿಎಲ್ ನ ರಮೇಶ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿಗಳು ಇದ್ದರು.