ಸಾರಾಂಶ
ವಾಸ್ತವ್ಯ ಮತ್ತು ಸಾಗುವಳಿಗಾಗಿ ಅರಣ್ಯವಾಸಿಗಳು ಹೋರಾಟ ಮಾಡುವುದು ಸಂವಿಧಾನಬದ್ಧ ಹಕ್ಕು.
ಯಲ್ಲಾಪುರ: ವಾಸ್ತವ್ಯ ಮತ್ತು ಸಾಗುವಳಿಗಾಗಿ ಅರಣ್ಯವಾಸಿಗಳು ಹೋರಾಟ ಮಾಡುವುದು ಸಂವಿಧಾನಬದ್ಧ ಹಕ್ಕು. ಅದರ ಜೊತೆಯಲ್ಲಿ ಅರಣ್ಯ ಪರಿಸರ ಜಾಗೃತೆ ಮೂಡಿಸುವುದು ಅರಣ್ಯವಾಸಿಗಳ ಕರ್ತವ್ಯ. ಅರಣ್ಯವಿಲ್ಲದೇ ಮಾನವನಿಲ್ಲ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.
ಅವರು ತಾಲೂಕಿನ ಕುಂದರಗಿ, ಮಾವಿನಕಟ್ಟ ಗ್ರಾಮದಲ್ಲಿ ದಶಲಕ್ಷ ಗಿಡ ನೆಡುವ ಅಭಿಯಾನದ ಅಂಗವಾಗಿ ಗಿಡ ನೆಟ್ಟು ಮಾತನಾಡುತ್ತಿದ್ದರು.ಬದುಕಿಗಾಗಿ ಅರಣ್ಯವಾಸಿ ಭೂಮಿ ಸಾಗುವಳಿ ಮಾಡುವ ಹಿನ್ನೆಲೆಯಲ್ಲಿ ಅರಣ್ಯ ಪ್ರಮಾಣ ಹೆಚ್ಚಿಸುವ ಕಾರ್ಯ ಮಾಡುವುದು ಅತೀ ಅವಶ್ಯ. ಇಂದು ಜಿಲ್ಲೆಯ ಜನಸಂಖ್ಯೆಯ ಸಾಂಧ್ರತೆಯ ಪ್ರಮಾಣ ಪ್ರತಿ ಚದರ ಕಿ.ಮೀ.ಗೆ ೨೦೨ ಜನ ಇದ್ದರೆ ಅರಣ್ಯ ಸಾಂದ್ರತೆಯ ಪ್ರದೇಶವು ಜನಸಂಖ್ಯೆಯ ಸಾಂಧ್ರತೆಗಿಂತ ೧೦ ಪಟ್ಟು ಹೆಚ್ಚಾಗಿ ಇದ್ದರೂ ವಾಸ್ತವಿಕವಾಗಿ ಗಿಡ, ಮರ ಪ್ರಮಾಣ ಕಡಿಮೆ ಇರುವುದು ಉಲ್ಲೇಖನಾರ್ಹ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಂಚಾಲಕರಾದ ಸೀತಾರಾಮ ನಾಯ್ಕ, ಪ್ರಭಾಕರ್ ನಾಯ್ಕ, ನಾಗರಾಜ ಹೆಮ್ಮಾಡಿ, ನೀಲಕಂಠ ಹೆಗಡೆ, ರವೀಂದ್ರ ಗೌಡ ಭರತನಳ್ಳಿ, ಗಣಪತಿ ಮಡಿವಾಳ, ನಾಗರಾಜ ನಾಯ್ಕ ಬಿಜ್ಜೋಡ್, ಪರಮೇಶ್ವರ ಗೌಡ ಕ್ಯಾದಗಿಸರ, ಗಣಪತಿ ಮರಾಠಿ ಮುಂತಾದವರು ಉಪಸ್ಥಿತರಿದ್ದರು.ಅರಣ್ಯ ಪ್ರಮಾಣ ಕುಂಠಿತ:
ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಯೋಜನೆ, ಅಭಿವೃದ್ಧಿ ಕಾರ್ಯ, ಬೆಂಕಿ, ಜಲವಿದ್ಯುತ್ ಯೋಜನೆ, ಸಾರಿಗೆ, ಅರಣ್ಯ ಇಲಾಖೆಯ ಕಾಮಗಾರಿ, ವಿವಿಧ ರೀತಿಯ ರೋಗ ಮತ್ತು ನೀರಿನ ಅಭಾವ ಮುಂತಾದ ಉದ್ದೇಶದಿಂದ ಜಿಲ್ಲೆಯಲ್ಲಿನ ಅರಣ್ಯ ಸಾಂಧ್ರತೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದು ವಿಷಾದಕರ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.ಯಲ್ಲಾಪುರದಲ್ಲಿ ದಶ ಲಕ್ಷ ಗಿಡ ನೆಡುವ ಅಭಿಯಾನ ನಡೆಯಿತು.