ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಜಾಗತಿಕ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆ ಪ್ರಕೃತಿಯ ಸಮತೋಲನ ಕಾಪಾಡಿಕೊಳ್ಳಲು ಹೆಚ್ಚಾಗಿ ಮರಗಿಡಗಳನ್ನು ಬೆಳೆಸುವುದು ಅನಿವಾರ್ಯವಾಗಿದ್ದು, ಅವುಗಳನ್ನು ಸಂರಕ್ಷಿಸುವುದು ಕೂಡ ಅಷ್ಟೇ ಅಗತ್ಯ ಎಂದು ದೇವರಹಿಪ್ಪರಗಿ ಗಸ್ತು ಅರಣ್ಯ ಪಾಲಕರಾದ ಗುರು ರಾಮಗೀರಮಠ ಹೇಳಿದರು.ಪಟ್ಟಣದ ಹೊಸನಗರದ ಪ್ರಾಥಮಿಕ ಶಾಲಾ ಆವರಣದಲ್ಲಿ ಅರಣ್ಯ ಇಲಾಖೆ ಹಾಗೂ ಶಾಲಾ ಸಿಬ್ಬಂದಿಯೊಂದಿಗೆ ವಿಶ್ವ ಪರಿಸರ ದಿನದ ನಿಮಿತ್ತ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈಗಾಗಲೇ ತಾಲೂಕಿನಲ್ಲಿ ಸಾವಿರಾರು ಗಿಡ ನೆಡುವ ಕಾರ್ಯಕ್ರಮ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದೆ. ಶಾಲಾ ಆವರಣಗಳಲ್ಲಿ, ಸ್ಮಶಾನ, ಇಲಾಖೆಯ ಜಾಗ ಹಾಗೂ ರಸ್ತೆಯ ಹತ್ತಿರ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರಂತೆ ಶಿಕ್ಷಕರ ಜೊತೆ ಶಾಲಾ ಆವರಣದಲ್ಲಿ ಇಂದು ಚಾಲನೆ ನೀಡಲಾಗಿದೆ. ಈ ಕೆಲಸಕ್ಕೆ ಸಂಘ ಸಂಸ್ಥೆಗಳು ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಕೈಜೋಡಿಸಬೇಕು. ಕೇವಲ ಗಿಡ ನೆಟ್ಟರೆ ಸಾಲದು, ಶಾಲಾ ಮಕ್ಕಳು ಅವುಗಳನ್ನು ಸಂರಕ್ಷಿಸಿ ಮರವಾಗಿ ಬೆಳೆಸಬೇಕು. ಜೊತೆಗೆ ತಮ್ಮ ಪೋಷಕರಲ್ಲೂ ಪರಿಸರ ಜಾಗೃತಿ ಮೂಡಿಸಬೇಕು. ಹೀಗಾದರೆ ಮಾತ್ರ ಪ್ರಕೃತಿ ಸಮತೋಲನ ಕಾಪಾಡಲು ಸಾಧ್ಯ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಚ್.ವಾಲೀಕಾರ ಮಾತನಾಡಿ, ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಶಾಲಾ ಅವರಣದಲ್ಲಿ ನೆಟ್ಟಿರುವ ಎಲ್ಲ ಸಸಿಗಳನ್ನು ಶಾಶ್ವತವಾಗಿ ಸಂರಕ್ಷಿಸಲಾಗುವುದು. ಜೊತೆಗೆ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸಲಾಗುವುದು. ಅರಣ್ಯ ಇಲಾಖೆಯ ಜೊತೆ ಸಂಘ ಸಂಸ್ಥೆಗಳು ಕೈಜೋಡಿಸಬೇಕು ಎಂದರು.ಅರಣ್ಯ ಇಲಾಖೆಯ ದಿನಗೂಲಿ ನೌಕರರಾದ ಮೌಲಾಸಾಬ ನದಾಫ್ ಹಾಗೂ ಭೈರಪ್ಪ ಪೂಜಾರಿ ಅವರ ಕಾರ್ಯ ಕ್ಷಮೆತೆಗೆ ಪರಿಸರ ದಿನಾಚರಣೆ ಅಂಗವಾಗಿ ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಕ ಶಿವಶರಣ ಪೂಜಾರಿ ಸೇರಿದಂತೆ ಶಾಲಾ ಸಿಬ್ಬಂದಿ ವರ್ಗ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.