ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಗಳ ಅವಕಾಶ ಅಗತ್ಯ

| Published : Nov 05 2025, 01:30 AM IST

ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಗಳ ಅವಕಾಶ ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕನಕಪುರ: ಮಕ್ಕಳಲ್ಲಿರುವ ಪ್ರತಿಭೆ ಹೊರತೆಗೆದಾಗ ಮುಂದೆ ಅದು ಉಜ್ವಲ ಪ್ರತಿಭೆಯಾಗಲಿದೆ. ಅವರಲ್ಲಿನ ನ್ಯೂನತೆಗಳನ್ನು ಸರಿಪಡಿಸಿದಾಗ ಮುಂದೆ ಸರಿಯಾದ ಮಾರ್ಗದಲ್ಲಿ ನಡೆಯಲಿದ್ದಾರೆ ಎಂದು ಜ್ಞಾನೋದಯ ಪ್ರೌಢಶಾಲೆ ಕಾರ್ಯದರ್ಶಿ ಸಿದ್ದಲಿಂಗಯ್ಯ ತಿಳಿಸಿದರು.

ಕನಕಪುರ: ಮಕ್ಕಳಲ್ಲಿರುವ ಪ್ರತಿಭೆ ಹೊರತೆಗೆದಾಗ ಮುಂದೆ ಅದು ಉಜ್ವಲ ಪ್ರತಿಭೆಯಾಗಲಿದೆ. ಅವರಲ್ಲಿನ ನ್ಯೂನತೆಗಳನ್ನು ಸರಿಪಡಿಸಿದಾಗ ಮುಂದೆ ಸರಿಯಾದ ಮಾರ್ಗದಲ್ಲಿ ನಡೆಯಲಿದ್ದಾರೆ ಎಂದು ಜ್ಞಾನೋದಯ ಪ್ರೌಢಶಾಲೆ ಕಾರ್ಯದರ್ಶಿ ಸಿದ್ದಲಿಂಗಯ್ಯ ತಿಳಿಸಿದರು.

ತಾಲೂಕಿನ ಸಾತನೂರು ಹೋಬಳಿ ತೆಂಗನಾಯಕನಹಳ್ಳಿ ಜ್ಞಾನೋದಯ ಪ್ರೌಢಶಾಲೆಯಲ್ಲಿ ಜಿಲ್ಲಾ ಲೇಖಕರ ವೇದಿಕೆ ಸೋಮವಾರ ಆಯೋಜಿಸಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಕ್ತ ಲೇಖನ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಶಾಲಾ ಹಂತದಲ್ಲಿ ನಾವು ಮಕ್ಕಳಿಗೆ ಉತ್ತಮ ಸಂಸ್ಕಾರ, ಸಾಮಾಜಿಕ ಜವಾಬ್ದಾರಿಗಳನ್ನು ಹಾಗೂ ಸರಿ ತಪ್ಪುಗಳ ಬಗ್ಗೆ ತಿಳಿಸಿಕೊಡಬೇಕು. ಜಿಲ್ಲಾ ಲೇಖಕರ ವೇದಿಕೆ ಮಕ್ಕಳಲ್ಲಿರುವ ಪ್ರತಿಭೆ ಹಾಗೂ ಸಾಮಾಜಿಕ ಜ್ಞಾನದ ಬಗ್ಗೆ ತಿಳಿಸಲು ಇಂದು ಸ್ಪರ್ಧೆ ಆಯೋಜಿಸಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಜಿಲ್ಲಾ ಲೇಖಕರ ವೇದಿಕೆ ಅಧ್ಯಕ್ಷ ಕೂಗಿ ಗಿರಿಯಪ್ಪ ಮಾತನಾಡಿ, ಕನ್ನಡ ನಾಡು ಉದಯವಾಗಿ 70 ವರ್ಷಗಳಾಯಿತು. ಕರ್ನಾಟಕ ಏಕೀಕರಣಕ್ಕೆ ಬಹಳಷ್ಟು ಜನ ಬುದ್ಧಿಜೀವಿಗಳು, ಸಾಹಿತಿಗಳು, ಪತ್ರಕರ್ತರು, ಕನ್ನಡಾಭಿಮಾನಿಗಳು ಹೋರಾಟ ಮಾಡಿ 20 ಸಂಸ್ಥಾನಗಳಾಗಿದ್ದ ಕನ್ನಡ ನಾಡನ್ನು ಒಟ್ಟುಗೂಡಿಸಿ 1956 ನ.1ರಂದು ಮೈಸೂರು ರಾಜ್ಯವೆಂದು ನಾಮಕರಣವಾಗಿದ್ದು ನಂತರದಲ್ಲಿ 1973 ನವೆಂಬರ್ 1ರಂದು ಡಿ ದೇವರಾಜ ಅರಸು ಅವರು ಕರ್ನಾಟಕ ರಾಜ್ಯವೆಂದು ಮರು ನಾಮಕರಣ ಮಾಡಿದರು. ಅಂದಿನಿಂದ ಕರ್ನಾಟಕ ರಾಜ್ಯವಾಯಿತು ಎಂದು ಕರ್ನಾಟಕ ರಾಜ್ಯ ಏಕೀಕರಣದ ಬಗ್ಗೆ ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಉಪನ್ಯಾಸಕ ಬಿ.ಆರ್.ಹೇಮಂತ್ ಕರ್ನಾಟಕ ರಾಜ್ಯೋತ್ಸವ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಮುಖ್ಯ ಶಿಕ್ಷಕ ಸಿ.ನಿಂಗೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಲೇಖಕರ ವೇದಿಕೆ ಮತ್ತು ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಪದಾಧಿಕಾರಿಗಳಾದ ಗಬ್ಬಾಡಿ ಕಾಡೇಗೌಡ, ರಾಮಯ್ಯ, ಚಿಕ್ಕರಂಗಯ್ಯ, ಶಿಕ್ಷಕರಾದ ಸೌಜನ್ಯ, ಕಾರ್ತಿಕ್, ಶ್ರೀನಿವಾಸ್, ಸುರೇಶ್ ಉಪಸ್ಥಿತರಿದ್ದರು.