ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ
ತಾಲೂಕಿನ ನಾಗಲಮಡಿಕೆ ಕ್ಷೇತ್ರ ಹೊರತುಪಡಿಸಿ ಉಳಿದ ಕ್ಷೇತ್ರಗಳಿಗೆ ಅವಿರೋಧ ಆಯ್ಕೆ ಮಾಡುವ ಮೂಲಕ ಇಲ್ಲಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಅಚ್ಚರಿಯ ಹೊಂದಾಣಿಕೆ ಏರ್ಪಟ್ಟಿದೆ.ಒಟ್ಟು 14 ಸ್ಥಾನಗಳ ಪೈಕಿ 13 ಸ್ಥಾನಗಳಲ್ಲಿ ಅವಿರೋಧ ಆಯ್ಕೆಯಾಗಿದ್ದು, ಅದರಲ್ಲಿ ಕಾಂಗ್ರೆಸ್ 9 ಹಾಗೂ 4 ಜೆಡಿಎಸ್ ಪಾಲಾಗಿವೆ. ಉಳಿದ ಒಂದು ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಪಟ್ಟು ಸಡಿಸದ ಕಾರಣ ಚುನಾವಣೆ ನಡೆಯಲಿದೆ. ಈ ಕುರಿತು ಮಾತನಾಡಿದ ಮಾಜಿ ಸಚಿವ ವೆಂಕಟರಮಣಪ್ಪ ಚುನಾವಣೆ ವೆಚ್ಚ ಉಳಿಸುವ ಉದ್ದೇಶದಿಂದ ಹಾಗೂ ಪರಸ್ಪರ ವಿಶ್ವಾಸಾರ್ಹತೆ ಬೆಳೆಸಿಕೊಂಡು ಹೋಗುವ ದೃಷ್ಟಿಯಿಂದ ಚುನಾವಣೆಯಲ್ಲಿ ಎಲ್ಲರ ಮನವೊಲಿಸಿ ಅವಿರೋಧ ಆಯ್ಕೆ ಮಾಡಲಾಗಿದೆ ಎಂದರು.
ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ ಚುನಾವಣೆಯ ಖರ್ಚುವೆಚ್ಟದ ಲೆಕ್ಕಾಚಾರದ ಮೇರೆಗೆ, ಕಾಂಗ್ರೆಸ್ ಜೆಡಿಎಸ್ ಮುಖಂಡರು ಸಭೆಯಲ್ಲಿ ಮಾತುಕತೆ ನಡೆಸಿದ್ದು ಅದರಂತೆ 9 ಅಭ್ಯರ್ಥಿಗಳ ಆಯ್ಕೆಗೆ ತೀರ್ಮಾನ ಕೈಗೊಳ್ಳಲಾಗಿದೆ. ನಾಗಲಮಡಿಕೆ ಕ್ಷೇತ್ರದಲ್ಲಿ ಪಕ್ಷದ ಹಿರಿಯ ಮುಖಂಡರು ಬ್ಯಾಂಕ್ ನ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು ನಾಮಪತ್ರ ಹಿಂಪಡೆಯಲು ಜೆಡಿಎಸ್ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಒಪ್ಪದ ಕಾರಣ, ಅಂತಿಮ ಹಂತದಲ್ಲಿ ಚುನಾವಣೆ ಘೋಷಣೆಯಾಗಿದೆ. ಎಸ್.ವಿ.ಗೋವಿಂದಪ್ಪ, ಟಿ.ಎಸ್ ಅನಿತ ಹಾಗೂ ಅಂಗಡಿಯ ಚಿರಂಜೀವಿ ಕಣದಲ್ಲಿ ಉಳಿದಿದ್ದಾರೆ ಎಂದರು.ಚುನಾವಣೆ ಅಧಿಕಾರಿಯಾಗಿ ವೆಂಕಟೇಶ್ ಕಾರ್ಯನಿರ್ವಹಿಸಿದ್ದು ಇದೇ ವೇಳೆ ರಾಜ್ಯ ಜೆಡಿಎಸ್ ಘಟಕದ ಉಪಾಧ್ಯಕ್ಷ ಎನ್.ತಿಮ್ಮಾರೆಡ್ಡಿ ಜಿಲ್ಲಾ ಜೆಡಿಎಸ್ ಘಟಕದ ಜಿಲ್ಲಾಧ್ಯಕ್ಷ ಆರ್.ಸಿ.ಅಂಜಿನಪ್ಪ,ಜೆಡಿಎಸ್ ತಾಲೂಕು ಅಧ್ಯಕ್ಷ ಎನ್.ಎ.ಈರಣ್ಣ, ತಾ.ಬಿಜೆಪಿ ಅಧ್ಯಕ್ಷ ರಂಗಣ್ಣಗೌಡ, ಬಲರಾಮರೆಡ್ಡಿ, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಚಂದ್ರಶೇಖರರೆಡ್ಡಿ, ಮಾಜಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಶೇಷಗಿರಿಯಪ್ಪ, ತಾಲೂಕು ಕಾಂಗ್ರೆಸ್ ಹಿರಿಯ ಶ ವಡ್ಡರಹಟ್ಟಿ ದಾಸಪ್ಪ, ರೈತ ಸಂಘದ ನರಸಿಂಹರೆಡ್ಡಿ, ಗೋರಸ್ ಮಾವು ಹನುಮಂತರಾಯಪ್ಪ, ಗುಟ್ಟಹಳ್ಳಿ ಅಂಜಪ್ಪ ಇತರರಿದ್ದರು.