9.5 ಕೋಟಿ ನಷ್ಟದಲ್ಲಿರುವ ಪಿಎಲ್ಡಿ ಬ್ಯಾಂಕ್‌: ಅಶೋಕ್

| Published : Sep 20 2025, 01:00 AM IST

ಸಾರಾಂಶ

ಮಾಗಡಿ: ತಾಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ₹9.5 ಕೋಟಿ ನಷ್ಟದಲ್ಲಿರುವುದರಿಂದ ರೈತರಿಗೆ ಯಾವುದೇ ರೀತಿಯ ಲಾಭದ ಡಿವಿಡೆಂಟ್ ಕೊಡಲು ಆಗುತ್ತಿಲ್ಲ ಎಂದು ಬಿಡಿಸಿಸಿ ಬ್ಯಾಂಕ್ ಹಾಗೂ ಬಮೂಲ್ ನಿರ್ದೇಶಕ ಎಚ್.ಎನ್.ಅಶೋಕ್ ಹೇಳಿದರು.

ಮಾಗಡಿ: ತಾಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ₹9.5 ಕೋಟಿ ನಷ್ಟದಲ್ಲಿರುವುದರಿಂದ ರೈತರಿಗೆ ಯಾವುದೇ ರೀತಿಯ ಲಾಭದ ಡಿವಿಡೆಂಟ್ ಕೊಡಲು ಆಗುತ್ತಿಲ್ಲ ಎಂದು ಬಿಡಿಸಿಸಿ ಬ್ಯಾಂಕ್ ಹಾಗೂ ಬಮೂಲ್ ನಿರ್ದೇಶಕ ಎಚ್.ಎನ್.ಅಶೋಕ್ ಹೇಳಿದರು.

ಪಟ್ಟಣದ ಕ್ಷೀರ ಭವನದಲ್ಲಿ ಪಿಎಲ್‌ಡಿ ಬ್ಯಾಂಕ್ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, 1943ರಲ್ಲಿ ಆರಂಭವಾದ ಪಿಎಲ್‌ಡಿ ಬ್ಯಾಂಕ್ ಇದುವರೆಗೂ ಮುನ್ನಡೆಸಿಕೊಂಡು ಬರುತ್ತಿದೆ. ರೈತರು ಸಕಾಲದಲ್ಲಿ ಸಾಲ ಮರುಪಾವತಿ ಮಾಡದ ಕಾರಣ ಈಗ 9.5 ಕೋಟಿ ನಷ್ಟದಲ್ಲಿದೆ. ಸರ್ಕಾರಕ್ಕೆ12 ಕೋಟಿ ಸಾಲ ಕೊಡಬೇಕು. ರೈತರಿಂದ 7 ಕೋಟಿ ಸಾಲ ವಸೂಲಿ ಆಗಬೇಕಿದೆ. ಇನ್ನುಳಿದ 5 ಕೋಟಿ ನಷ್ಟದಲ್ಲಿರುವುದರಿಂದ ಪ್ರತಿವರ್ಷವೂ ಐದು ಕೋಟಿಗೆ ಎರಡು ಕೋಟಿ ಬಡ್ಡಿ ಕಟ್ಟಬೇಕು. ನಷ್ಟದಲ್ಲೇ ಬ್ಯಾಂಕ್ ನಡೆಯುತ್ತಿದೆ ಎಂದರು.ಬಮೂಲ್ ಮಾಜಿ ಅಧ್ಯಕ್ಷ ನರಸಿಂಹಮೂರ್ತಿಯವರು ವೈದ್ಯನಾಥ್ ವರದಿ ಪ್ರಕಾರ ನಷ್ಟದಲ್ಲಿರುವ ಸಹಕಾರ ಸಂಘದ ಹಣವನ್ನು ಸರ್ಕಾರದಿಂದ ಭರಿಸಿದರೆ ರೈತರಿಗೆ ಹೊಸ ಸಾಲ ಕೊಡಿಸಬಹುದು. ಇಲ್ಲವಾದರೆ ಹತ್ತು ವರ್ಷವಾದರೂ ಸಾಲ ತಿರುವುದಿಲ್ಲ. ಬ್ಯಾಂಕು ಲಾಭದತ್ತ ಹೆಜ್ಜೆ ಹಾಕುವುದು ಕಷ್ಟಸಾಧ್ಯ. ಈ ಬಗ್ಗೆ ಶಾಸಕ ಬಾಲಕೃಷ್ಣ ಜತೆ ಚರ್ಚಿಸಿದ್ದು ಸರ್ಕಾರದೊಂದಿಗೆ ಮಾತನಾಡಿ ಕ್ರಮ ವಹಿಸುವಂತೆ ಮನವಿ ಮಾಡಿದ್ದೇವೆ ಎಂದು ಅಶೋಕ್ ಹೇಳಿದರು.

ಹೊಸ ಕಟ್ಟಡ ಕಟ್ಟಲು ಬದ್ಧ:

ಟಿಎಪಿಸಿಎಂಎಸ್ ನಿರ್ದೇಶಕ ಸೋಮಶೇಖರ್ ಮಾತನಾಡಿ, ಪಿಎಲ್ ಡಿ ಬ್ಯಾಂಕ್ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ಸಿಬ್ಬಂದಿ ಅಂಗೈಯಲ್ಲಿ ಜೀವ ಹಿಡಿದು ಕೆಲಸ ಮಾಡಬೇಕಿದೆ. ನಿರ್ದೇಶಕ ಅಶೋಕ್ ಈಗಿರುವ ಬ್ಯಾಂಕಿನ ಜಾಗವನ್ನು ಪುರಸಭೆಗೆ ನೀಡಿ ಪುರಸಭೆಯಿಂದ ಗಂಗಾಧರೇಶ್ವರ ಪ್ರೌಢಶಾಲೆ ಪಕ್ಕದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಬಹುದು. ಅಶೋಕ್ ಅವರು ಬ್ಯಾಂಕಿನ ಉನ್ನತೀಕರಣಕ್ಕೆ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಬ್ಯಾಂಕ್ ಅಧ್ಯಕ್ಷ ಎಚ್.ಆರ್.ರವೀಶ್ ಮಾತನಾಡಿ, ಸರ್ಕಾರದಿಂದ ರೈತರಿಗೆ ಸಾಲ ಸೌಲಭ್ಯ ಕೊಡುತ್ತಿದ್ದು. ಈಗ ಪಡೆದಿರುವ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿ ರೈತರು ಸಹಕರಿಸಬೇಕು. ಇಲ್ಲವಾದರೆ ನಿಮ್ಮಿಂದ ಇನ್ನೊಬ್ಬ ರೈತರಿಗೆ ಸಾಲ ಸಿಗದಂತೆ ಆಗಲಿದೆ ಎಂದು ಹೇಳಿದರು.

ವಾರ್ಷಿಕ ಮಹಾಸಭೆಯಲ್ಲಿ 2024 25ನೇ ಸಾಲಿನ ಲೆಕ್ಕ ಪರಿಶೋಧನೆ ಆಯವ್ಯಯ ಮಂಡಿಸಿ ಅನುಮೋದನೆ ಪಡೆಯಲಾಯಿತು. ಸಭೆಯಲ್ಲಿ ಬ್ಯಾಂಕ್‌ ಉಪಾಧ್ಯಕ್ಷ ಹನುಮಂತಯ್ಯ ನಿರ್ದೇಶಕರಾದ ನಾಗರಾಜು, ಅರುಣಿ, ದೇವೇಂದ್ರ, ವೇಣುಗೋಪಾಲ್‌, ತಿಮ್ಮೇಗೌಡ, ಚಂದ್ರೇಗೌಡ, ಚನ್ನಗಂಗಯ್ಯ, ಯಶೋಧಸಿದ್ದೇಗೌಡ, ಶಶಾಂಕ್, ಭವ್ಯ, ಎಂ.ಕೆ.ಧನಂಜಯ, ಚಕ್ರಬಾವಿ ಮಾರೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್, ಮಂಚನಬೆಲೆ ಲೋಕೇಶ್ ಇತರರಿದ್ದರು.

(ಫೋಟೋ ಕ್ಯಾಪ್ಷನ್‌)

ಮಾಗಡಿಯಲ್ಲಿ ಪಿಎಲ್‌ಡಿ ಬ್ಯಾಂಕ್ ವಾರ್ಷಿಕ ಸಾಮಾನ್ಯ ಸಭೆಯನ್ನು ನಿರ್ದೇಶಕ ಎಚ್.ಎನ್.ಅಶೋಕ್ ಉದ್ಘಾಟಿಸಿದರು. ಬ್ಯಾಂಕ್‌ ಅಧ್ಯಕ್ಷ ರವೀಶ್, ಉಪಾಧ್ಯಕ್ಷ ಹನುಮಂತಯ್ಯ, ನಿರ್ದೇಶಕರಾದ ನಾಗರಾಜು, ಅರುಣಿ ಇತರರಿದ್ದರು.