ಸಾರಾಂಶ
ಹೊಸನಗರ: 94ಸಿ ಅಥವಾ ಬಗರ್ಹುಕುಂ ಅಡಿಯಲ್ಲಿ ಅರ್ಜಿ ಸಲ್ಲಿಸಿರುವವರಿಗೆ ನಿಯಮಾನುಸಾರ ಹಕ್ಕುಪತ್ರ ವಿತರಣೆಗೆ ಅಧಿಕಾರಿಗಳು ತ್ವರಿತಗತಿಯಲ್ಲಿ ಕ್ರಮ ವಹಿಸಬೇಕು. ಜನ ಸಾಮಾನ್ಯರು ಕಚೇರಿ ಅಲೆಯುವಂತೆ ಆಗಬಾರದು ಎಂದು ಶಾಸಕ ಆರಗಜ್ಞಾನೇಂದ್ರ ಹೇಳಿದರು.
ಹೊಸನಗರ: 94ಸಿ ಅಥವಾ ಬಗರ್ಹುಕುಂ ಅಡಿಯಲ್ಲಿ ಅರ್ಜಿ ಸಲ್ಲಿಸಿರುವವರಿಗೆ ನಿಯಮಾನುಸಾರ ಹಕ್ಕುಪತ್ರ ವಿತರಣೆಗೆ ಅಧಿಕಾರಿಗಳು ತ್ವರಿತಗತಿಯಲ್ಲಿ ಕ್ರಮ ವಹಿಸಬೇಕು. ಜನ ಸಾಮಾನ್ಯರು ಕಚೇರಿ ಅಲೆಯುವಂತೆ ಆಗಬಾರದು ಎಂದು ಶಾಸಕ ಆರಗಜ್ಞಾನೇಂದ್ರ ಹೇಳಿದರು.ಹೊಸನಗರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಅವರು ಫಲಾನುಭವಿಗಳಿಗೆ 94ಸಿ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.
ಪ್ರತಿ ವ್ಯಕ್ತಿಗೂ ಜೀವನದಲ್ಲಿ ನಾನು ನೆಲೆ ನಿಂತಜಾಗದ ಹಕ್ಕು ಪಡೆಯಬೇಕೆನ್ನುವ ಅಧಮ್ಯ ಬಯಕೆ ಇರುತ್ತದೆ. ಹಕ್ಕು ಪತ್ರದೊರೆತಾಗ ಆತನಿಗೆ ಆಗುವ ಸಂಭ್ರಮಕ್ಕೆ ಪಾರವಿಲ್ಲ. ತನ್ನ ಜೀವನ ಪರ್ಯಂತ ಆತ ಆ ಕ್ಷಣವನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಾನೆ. ಹಾಗಾಗಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಕ್ಕು ನೀಡುವ ಭಾಗ್ಯ ಬಂದಿರುವುದಕ್ಕೆ ಸಂತಸ ಪಡಬೇಕು. ಜನರ ನಿರೀಕ್ಷೆಯಂತೆ ಕೆಲಸ ಮಾಡಬೇಕು ಎಂದರು.ಮಲೆನಾಡು ಭಾಗದಲ್ಲಿ ಬಹುತೇಕ ಜನರು ತಮ್ಮ ವಾಸದ ಮನೆಯ ಜಾಗಕ್ಕೆ ಹಕ್ಕುಪತ್ರ ಹೊಂದಿರುವುದಿಲ್ಲ. ಕಾಡಿನ ಅಂಚಿನಲ್ಲಿ ವಾಸಿಸುವವರಿಗೆ ಹಕ್ಕುಪತ್ರ ಪಡೆಯುವ ಮಹತ್ವ ಎದುರಾಗಿರಲಿಲ್ಲ. ಯಾರೂ ಒಕ್ಕಲೆಬ್ಬಿಸಬಹುದು ಎನ್ನುವ ಕಲ್ಪನೆಯೂ ಇರಲಿಲ್ಲ. ಆದರೆ ನೂರಾರು ವರ್ಷ ಬಾಳಿದ ಜಾಗ, ಮನೆಗೆ ಮಾಲೀಕತ್ವ ಸಾಬೀತು ಮಾಡಬೇಕಾದ ಸಂದರ್ಭಗಳು ಇತ್ತೀಚೆಗೆ ಒದಗಿಬಂದಿವೆ. ಹಕ್ಕುಪತ್ರ, ನೋಂದಣೆ ಇವು ಒಂದು ಕಾಲದಲ್ಲಿ ನಗರ ಪ್ರದೇಶಕ್ಕೆ ಮಾತ್ರ ಸೀಮಿತ ಆಗಿದ್ದವು. ಆದರೆ ಇಂದು ಹಳ್ಳಿಗಳಲ್ಲಿಯೂ ಸೂಕ್ತ ದಾಖಲಾತಿಗಳು ಅತ್ಯಗತ್ಯವಾಗಿವೆ ಎಂದು ಹೇಳಿದರು.ಅತಂತ್ರ ಸ್ಥಿತಿಯಲ್ಲಿರುವವರಿಗೆ ಭೂಮಿಯ ಹಕ್ಕು ದೊರೆಯಬೇಕು. ಈಗಾಗಲೇ ಹಕ್ಕುಪತ್ರ ಪಡೆದವರಿಗೆ 9 ಮತ್ತು 11 ಹಾಗೂ ಖಾತೆ ಏರಿಸುವ ಪ್ರಕ್ರಿಯೆ ಚುರುಕುಗೊಳ್ಳಬೇಕು. ಎಲ್ಲಾ ಅರ್ಹ ಅರ್ಜಿದಾರರಿಗೂ ಹಕ್ಕುಪತ್ರ ದೊರೆಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ಒಂದೂ ಅರ್ಜಿಯೂ ಉಳಿಯದಂತೆ ಕಡತ ವಿಲೇ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.ಇದೇ ವೇಳೆ ನಗರ ಹಾಗೂ ಹುಂಚಾ ಹೋಬಳಿಗೆ ಸಂಬಂಧಿಸಿದ 57 ಮಂದಿಗೆ ಹಕ್ಕುಪತ್ರ ವಿತರಣೆ ಮಾಡಲಾಯಿತು.ತಹಸೀಲ್ದಾರ್ ಎಚ್.ಜೆ.ರಶ್ಮಿ, ಶಿರಸ್ತೆದಾರ್ ಕಟ್ಟೆ ಮಂಜುನಾಥ್, ತಾಲೂಕು ಪಂಚಾಯಿತಿ ವ್ಯವಸ್ಥಾಪಕ ಶಿವಕುಮಾರ್, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್, ಸಿದ್ಧಪ್ಪ, ಲೋಹಿತ್, ಶಾಸಕರ ಆಪ್ತ ಕಾರ್ಯದರ್ಶಿ ಬಸವರಾಜ್ ರಾಜೇಶ್ ಮತ್ತಿತರರು ಇದ್ದರು.