ಸಾರಾಂಶ
ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ
ಕನ್ನಡಪ್ರಭ ವಾರ್ತೆ ಕುಷ್ಟಗಿಅನ್ನಭಾಗ್ಯ ಯೋಜನೆಯ ಹಣ ಜಮೆಯಾಗದ ಪಡಿತರ ಕಾರ್ಡ್ ವಿವರ ಕೊಡಬೇಕು ಹಾಗೂ ಸಮಸ್ಯೆಯ ನಿವಾರಣೆಗೆ ಮುಂದಾಗಬೇಕು. ಬಿಪಿಎಲ್ ಪಡಿತರ ಹೊಂದಿದ ಪ್ರತಿಯೊಬ್ಬರಿಗೂ ತಲುಪುವಂತಹ ಯೋಜನೆಯಾಗಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಫಾರೂಕ್ ಡಾಲಾಯತ್ ಹೇಳಿದರು.
ಪಟ್ಟಣದ ಗ್ಯಾರಂಟಿ ಅನುಷ್ಠಾನ ಸಮಿತಿ ಕಾರ್ಯಾಲಯದಲ್ಲಿ ನಡೆದ ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.ಅನ್ನಭಾಗ್ಯದ ಹಣ ಜಮೆಯಾಗದೆ ಬಾಕಿ ಇರುವ ಅರ್ಹ ಪಡಿತರ ಪಟ್ಟಿ ತಿಳಿಸಿಕೊಟ್ಟರೆ ನಮ್ಮ ಸಮಿತಿ ವತಿಯಿಂದ ನಿವಾರಿಸುವ ಪ್ರಯತ್ನ ಮಾಡಲಾಗುತ್ತದೆ. ತಾಲೂಕಿನ ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಬೋರ್ಡ್ನ್ನು ಹಾಕಿರುವುದಿಲ್ಲ ಕೂಡಲೇ ಆ ಕೆಲಸ ಮಾಡಿಸಬೇಕು ಎಂದರು.ಗ್ಯಾರಂಟಿ ಸಮಿತಿಯ ಸದಸ್ಯರೊಬ್ಬರು ಮಾತನಾಡಿ, ತಾಲೂಕಿನ ಮಿಟ್ಟಲಕೋಡ ಗ್ರಾಮದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿದಾಗ ಅವರು ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ. ಆದ ಕಾರಣ ನ್ಯಾಯಬೆಲೆ ಅಂಗಡಿಯವರೊಂದಿಗೆ ಗ್ಯಾರಂಟಿ ಸಮಿತಿಯ ಸದಸ್ಯರ ಜೊತೆ ಸಭೆ ಕರೆಯುವ ಅವಶ್ಯಕತೆ ಇದೆ ಎಂದರು.
ಆಹಾರ ಇಲಾಖೆಯ ಅಧಿಕಾರಿಗಳು ಮಾತನಾಡಿ, ಒಟ್ಟು 1596 ಕಾರ್ಡ್ಗಳ ತೊಂದರೆಯಿದ್ದು, ಇವರಿಗೆ ರೇಷನ್ ಕೊಡಲಾಗುತ್ತಿದೆ ಬಯೋಮೆಟ್ರಿಕ್, ಅಕೌಂಟ್ ಸಮಸ್ಯೆಯಿಂದ ಇವರಿಗೆ ಹಣ ಜಮೆಯಾಗುತ್ತಿಲ್ಲ ಎಂದು ತಿಳಿಸಿದರು.ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಬೋರ್ಡ್ನ್ನು ಹಾಕಿದ್ದಾರೆ ಇನ್ನುಳಿದಂತೆ ಸಹಕಾರಿ ಸಂಘದಲ್ಲಿ ನ್ಯಾಯಬೆಲೆ ಅಂಗಡಿಗಳು ನಡೆಯುತ್ತಿವೆ. 7 ಎಕರೆ 20 ಗುಂಟೆ ಪಹಣಿ, ಆರ್ಸಿಸಿ ಮನೆ, ವಾರ್ಷಿಕ ಆದಾಯ ₹1.20 ಲಕ್ಷ, 4 ಚಕ್ರದ ವಾಹನ, ಸರ್ಕಾರಿ, ಅರೆ ಸರಕಾರಿ ನೌಕರರು ಇರುವುದನ್ನು ಪರಿಶೀಲಿಸಿ ಬಿಪಿಎಲ್ ಕಾರ್ಡ್ ರದ್ದತಿಗೆ ಕ್ರಮ ವಹಿಸಲಾಗುತ್ತಿದೆ ಎಂದರು.
ಈ ಸಂದರ್ಭ ತಾಲೂಕು ಪಂಚಾಯಿತಿಯ ಅಧಿಕಾರಿಗಳು, ಆಹಾರ ಇಲಾಖೆಯ ಅಧಿಕಾರಿಗಳು, ಗ್ಯಾರಂಟಿ ಸಮಿತಿಯ ಸದಸ್ಯರಾದ ಯಮನೂರಪ್ಪ ಅಬ್ಬಿಗೇರಿ, ಯಮನೂರಪ್ಪ ಕನ್ನಾಳ, ಉಮಾದೇವಿ ಪಾಟೀಲ, ಪದ್ಮಾವತಿ ಬಸ್ತಿ, ಆನಂದಗೌಡ, ನಾಗರಾಜ ಭಜಂತ್ರಿ, ಶರಣಗೌಡ ಮಾಲಿಪಾಟೀಲ, ಶೋಭಾ ಪುರ್ತಗೇರಿ, ಮಂಜುನಾಥ ತೆವರನ್ನವರ, ನರಸಪ್ಪ ಬಿಂಗಿ, ಹುಸೇನಸಾಬ ಕಾಯಿಗಡ್ಡಿ ಸೇರಿದಂತೆ ಹಲವರು ಇದ್ದರು.