ಸಾರಾಂಶ
ಹಂಪಿ ಸ್ವದೇಶ ದರ್ಶನದ ಎರಡನೇ ಚರಣವನ್ನು ವರ್ಚುವಲ್ ವಿಧಾನದಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.
ಹೊಸಪೇಟೆ: ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಮಾ. 7ರಂದು ಬೆಳಗ್ಗೆ 10.30ಕ್ಕೆ ಪ್ರಧಾನಿ ಮೋದಿ ಅವರು ಸ್ವದೇಶ ದರ್ಶನ್ 2.0 ಕಾರ್ಯಕ್ರಮವನ್ನು ವರ್ಚುವಲ್ ಮೂಲಕ ಉದ್ಘಾಟಿಸಲಿದ್ದಾರೆ. ಹಂಪಿಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಕೇಂದ್ರ ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆಗಳು ಈ ಯೋಜನೆ ಸಾಕಾರಕ್ಕೆ ಕ್ರಮವಹಿಸಿದ್ದು, ಈ ಯೋಜನೆಯಿಂದ ಹಂಪಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಅನುದಾನ ದೊರೆಯಲಿದೆ.
ಈ ಯೋಜನೆಯಲ್ಲಿ ಹಂಪಿ ಸೇರ್ಪಡೆ ಮಾಡಿರುವುದಕ್ಕೆ ಈ ಭಾಗದ ಪ್ರವಾಸಿತಾಣಗಳ ಪ್ರೇಮಿಗಳು ಖುಷಿಯಾಗಿದ್ದಾರೆ.ಹಂಪಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಶಾಸಕ ಎಚ್.ಆರ್. ಗವಿಯಪ್ಪ, ಸಂಸದ ವೈ. ದೇವೇಂದ್ರಪ್ಪನವರು ಸೇರಿದಂತೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಜಿಪಂ ಸಿಇಒ ಸದಾಶಿವಪ್ರಭು ಬಿ. ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ.