ಒಬ್ಬ ಕವಿ, ಸಾಹಿತಿ ಎಷ್ಟು ಪುಸ್ತಕಗಳನ್ನು ಬರೆದಿದ್ದಾರೆ ಎನ್ನುವುದಿಲ್ಲ. ಆ ಪುಸ್ತಕಗಳನ್ನು ಓದಿದ ಮೇಲೆ ಎಷ್ಟು ಜನರ ಮನಸ್ಸು ಪರಿವರ್ತನೆ ಆಗಿದೆ ಅನ್ನುವುದು ಸಾಹಿತ್ಯ ಮೂಲಕ ತಿಳಿಯಲಿದೆ. ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿಗಳು ಲಭಿಸಿರುವುದು ಸಾಹಿತ್ಯ ಕ್ಷೇತ್ರದ ಹಿರಿಮೆಗೆ ಹೆಮ್ಮೆಯ ಸಂಗತಿಯಾಗಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ಜಗತ್ತನ್ನು ಭಗವಂತ ಸೃಷ್ಟಿಸಿದರೇ ಕಾವ್ಯವೆಂಬ ಮಹಾ ಸಂಪತ್ತನ್ನು ಕವಿ ಮತ್ತು ಸಾಹಿತಿಗಳು ಸೃಷ್ಟಿಸುತ್ತಾರೆ ಎಂದು ಶ್ರೀ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.ನಗರದ ತಾಲೂಕು ಕ್ರೀಡಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ 10ನೇ ಕನ್ನಡ ಸಾಹಿತ್ಯ ತಾಲೂಕು ಸಮ್ಮೇಳನದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಬ್ರಹ್ಮದೇವನು ತನಗೆ ಬೇಕಾದ ರೀತಿಯಲ್ಲಿ ಜಗತ್ತನ್ನು ಸೃಷ್ಟಿಸಿದರೆ, ಕವಿಗಳು ತಮ್ಮ ಸುತ್ತಮುತ್ತಲಿನ ಸಮಾಜವನ್ನು ಅದಕ್ಕೆ ಪೂರಕವಾದ ಸಾಹಿತ್ಯವನ್ನು ಸೃಷ್ಟಿ ಮಾಡುತ್ತಾರೆ ಎಂದರು.
ಒಬ್ಬ ಕವಿ, ಸಾಹಿತಿ ಎಷ್ಟು ಪುಸ್ತಕಗಳನ್ನು ಬರೆದಿದ್ದಾರೆ ಎನ್ನುವುದಿಲ್ಲ. ಆ ಪುಸ್ತಕಗಳನ್ನು ಓದಿದ ಮೇಲೆ ಎಷ್ಟು ಜನರ ಮನಸ್ಸು ಪರಿವರ್ತನೆ ಆಗಿದೆ ಅನ್ನುವುದು ಸಾಹಿತ್ಯ ಮೂಲಕ ತಿಳಿಯಲಿದೆ. ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿಗಳು ಲಭಿಸಿರುವುದು ಸಾಹಿತ್ಯ ಕ್ಷೇತ್ರದ ಹಿರಿಮೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.ಕನ್ನಡ ಭಾಷೆಯನ್ನು ಸಾಗರದಾಚೆಗೂ ವಿಸ್ತರಿಸಿದ ಕೀರ್ತಿ ಶ್ರೀಬಾಲಗಂಗಾಧರನಾಥ ಸ್ವಾಮೀಜಿಗಳದ್ದಾಗಿದೆ. ಶ್ರೀಗಳು ಕಾಲವಾಗುವ ಮೂರು ತಿಂಗಳ ಮುಂಚೆ ಅಮೆರಿಕದಲ್ಲಿ ಶ್ರೀಮಠದಿಂದ ಶಾಖೆಯನ್ನು ನಿರ್ಮಾಣ ಮಾಡಿದ್ದರು. ಅಕ್ಕ ಎಂಬ ಸಂಸ್ಥೆಯ ಮೂಲಕ ಅಮೆರಿಕದಲ್ಲಿ ನೆಲೆಸಿರುವ ಕನ್ನಡಾಭಿಮಾನಿಗಳಿಗೆ ಸಾಹಿತ್ಯ ಸಮ್ಮೇಳನದ ಮೂಲಕ ಕನ್ನಡ ಭಾಷೆಯನ್ನು ಮತ್ತಷ್ಟು ಪಸರಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಅಕ್ಕ ಸಂಸ್ಥೆಗೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಳೆದ 12 ದಿನಗಳ ಹಿಂದೆಯಷ್ಟೆ ಅಕ್ಕ ಸಮ್ಮೇಳನವನ್ನು ನಡೆಸಲಾಯಿತು. ನಮ್ಮ ಆಧುನಿಕ ಭಾಷೆ ಜೊತೆಗೆ ಸಂಸ್ಕೃತಿ, ಧಾರ್ಮಿಕ ಆಚರಣೆ ಉಳಿಯಬೇಕಾದರೆ ಇಂತಹ ಸಾಹಿತ್ಯ ಸಮ್ಮೇಳನಗಳು ನಡೆಯುತ್ತಿರಬೇಕು ಎಂದು ಶ್ರೀಗಳು ಕಿವಿಮಾತು ಹೇಳಿದರು.