ಪೊಳಲಿ: 105 ವರ್ಷದ ಬಳಿಕ ನಡೆಯುವ ಶತಚಂಡಿಕಾಯಾಗಕ್ಕೆ ಚಾಲನೆ

| Published : Mar 03 2025, 01:45 AM IST

ಸಾರಾಂಶ

ಬ್ರಹ್ಮಶ್ರೀ ಪೊಳಲಿ ಶ್ರೀಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಕ್ಷೇತ್ರದ ಅರ್ಚಕರಾದ ಮಾಧವಭಟ್, ನಾರಾಯಣ ಭಟ್, ಪರಮೇಶ್ವರ ಭಟ್ ಮತ್ತು ರಾಮ್ ಭಟ್ ಅವರ ಪೌರೋಹಿತ್ಯದಲ್ಲಿ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, 108 ಕಾಯಿಯ ಗಣಪತಿ ಹೋಮ ನಡೆದು ಸಪ್ತಸತಿ ಪಾರಾಯಣ, ನವಾಕ್ಷರೀ ಜಪಕ್ಕೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಸರಿಸುಮಾರು‌ 105 ವರ್ಷಗಳ ಬಳಿಕ ಆಯೋಜಿಸಲಾದ ಶತಚಂಡಿಕಾಯಾಗಕ್ಕೆ ಶನಿವಾರ ಚಾಲನೆ ದೊರೆತಿದೆ.

ಬ್ರಹ್ಮಶ್ರೀ ಪೊಳಲಿ ಶ್ರೀಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಕ್ಷೇತ್ರದ ಅರ್ಚಕರಾದ ಮಾಧವಭಟ್, ನಾರಾಯಣ ಭಟ್, ಪರಮೇಶ್ವರ ಭಟ್ ಮತ್ತು ರಾಮ್ ಭಟ್ ಅವರ ಪೌರೋಹಿತ್ಯದಲ್ಲಿ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, 108 ಕಾಯಿಯ ಗಣಪತಿ ಹೋಮ ನಡೆದು ಸಪ್ತಸತಿ ಪಾರಾಯಣ, ನವಾಕ್ಷರೀ ಜಪಕ್ಕೆ ಚಾಲನೆ ನೀಡಲಾಯಿತು.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ದೇವಳದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಸಹಿತ ಸ್ಥಳೀಯ ಪ್ರಮುಖರು ಹಾಜರಿದ್ದರು.ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ 105 ವರ್ಷಗಳ ಹಿಂದೆ ಶತಚಂಡಿಕಾಯಾಗ ನಡೆದಿರುವ ಬಗ್ಗೆ ದೇವಳದ ದಾಖಲೆ‌ ಮತ್ತು ಇತಿಹಾಸ ತಿಳಿಸುತ್ತದೆ. ತದನಂತರ ಅದೇ ಮಾದರಿಯಲ್ಲಿ ಲೋಕಕಲ್ಯಾಣಾರ್ಥ ಮತ್ತು ಸಾನಿಧ್ಯ ವೃದ್ಧಿಗಾಗಿ ಶತಚಂಡಿಕಾಯಾಗ ನಡೆಸಲಾಗುತ್ತಿದೆ.ಮಾ. 4ರ ವರೆಗೆ ವಿವಿಧ ವೈಧಿಕ ವಿಧಿ ವಿಧಾನ, ಹೋಮಾಧಿಗಳು, ಪರಾಯಣಗಳು ನಡೆಯಲಿದ್ದು, ಮಾ.5ರಂದು ಬೆಳಗ್ಗೆ 6 ಗಂಟೆಗೆ ಶತಚಂಡಿಕಾಯಾಗ ಆರಂಭವಾಗಲಿದ್ದು, ಮಧ್ಯಾಹ್ನ ಯಾಗದ ಪೂರ್ಣಾಹುತಿ ಬಳಿಕ ದೇವರಿಗೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಮಾ.6ರಂದು ಸೇವಾರೂಪದ ದೊಡ್ಡ ರಂಗಪೂಜೆ ಉತ್ಸವವು ನಡೆಯಲಿದೆ.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ, ದೇವಳದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅವರ ನೇತೃತ್ವದಲ್ಲಿ ವಿವಿಧ ಸಮಿತಿಗಳು ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. 25 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯನ್ನು ಸಂಘಟಕರು ಹೊಂದಿದ್ದು, ಕ್ಷೇತ್ರದ ಬ್ರಹ್ಮಕಲಶದ ಸಂದರ್ಭದಲ್ಲಿ ದುಡಿದಿರುವ ಸಾವಿರಾರು ಸ್ವಯಂಸೇವಕರು, ವಿವಿಧ ಸಂಘಸಂಸ್ಥೆಗಳು‌ ಸಹಿತ ಭಕ್ತಸಮೂಹ ಸ್ವಯಂಸೇವಕರಾಗಿ ತೊಡಗಿಸಿಕೊಳ್ಳಲಿದ್ದಾರೆ.ಹೊರೆಕಾಣಿಕೆ ಮೆರವಣಿಗೆ:ಶತಚಂಡಿಕಾಯಾಗದ ಪ್ರಯುಕ್ತ ಶನಿವಾರ ಸಂಜೆ ಅದ್ದೂರಿಯ ಹೊರೆಕಾಣಿಕೆ ಮೆರವಣಿಗೆಯು‌ ನಡೆಯಿತು. ವಿವಿಧ ಕಡೆಗಳಿಂದ ಬಂದಂತ ಹೊರೆಕಾಣಿಕೆಯನ್ನು‌ ಪೊಳಲಿ ದ್ವಾರದಿಂದ ಕ್ಷೇತ್ರದ ವರೆಗೆ ಮೆರವಣಿಗೆಯಲ್ಲಿ‌ ತರಲಾಯಿತು.