ಸಾರಾಂಶ
ಕನ್ನಡಪ್ರಭವಾರ್ತೆ ಚನ್ನಪಟ್ಟಣ
ದೇಶ ಮತ್ತು ಸಮಾಜದ ಭದ್ರತೆ, ಏಕತೆ ಹಾಗೂ ಸೌಹಾರ್ದತೆಗಾಗಿ ಹಾಗೂ ಸಮಾಜದಲ್ಲಿ ಶಾಂತಿ ನೆಮ್ಮದಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ತಮ್ಮ ಜೀವದ ಹಂಗು ತೊರೆದು ಶ್ರಮಿಸಿ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಪೊಲೀಸರನ್ನು ಸಮಾಜ ಸ್ಮರಿಸಿಕೊಂಡು ಸದಾ ಗೌರವ ಭಾವನೆ ಹೊಂದಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ವಿ.ರೇಣುಕ ತಿಳಿಸಿದರು.ರಾಮನಗರ ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮ ಪೊಲೀಸರ ಸ್ಮಾರಕಕ್ಕೆ ಪುಷ್ಪಗುಚ್ಚ ಅರ್ಪಿಸಿ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು.
ಪೊಲೀಸರು ಸುಸ್ಥಿರ ಸಮಾಜದ ಆಧಾರ ಸ್ತಂಭಗಳು. ದೇಶಕ್ಕಾಗಿ ಹಲವಾರು ಪೊಲೀಸರು ಧೈರ್ಯ ಮತ್ತು ಶೌರ್ಯದಿಂದ ಪ್ರಾಣ ತ್ಯಾಗಮಾಡಿದ್ದಾರೆ. ಅವರ ನಿಸ್ವಾರ್ಥ ಸೇವೆ, ಧೈರ್ಯ, ಸಾಹಸ ನಮಗೆಲ್ಲರಿಗೂ ಸ್ಫೂರ್ತಿ ಮತ್ತು ಪ್ರೇರಣೆಯಾಗಿದೆ. ಹುತಾತ್ಮರ ಸ್ಮರಣೆ ಮಾಡುವುದು ನಮ್ಮೆಲ್ಲರ ಆದ್ಯಕರ್ತವ್ಯ. ಹುತಾತ್ಮರ ಪವಿತ್ರ ಆತ್ಮಕ್ಕೆ ಭಗವಂತ ಶಾಂತಿಯನ್ನು ಕೊಡಲಿ. ಹಾಗೆಯೇ ಅವರ ಕುಟುಂಬಕ್ಕೆ ಧೈರ್ಯ ನೀಡಲಿ ಎಂದು ಪ್ರಾರ್ಥಿಸಿದರು.ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ಅವರು ಸ್ವಾಗತಿಸಿ, ಪೊಲೀಸ್ ಹುತಾತ್ಮರ ದಿನಾಚರಣೆ ಮಹತ್ವವನ್ನು ತಿಳಿಸಿ ಅವರ ಸ್ಮರಣೆಗಾಗಿ ದೇಶಾದ್ಯಂತ ಪ್ರತಿ ವರ್ಷ ಅಕ್ಟೋಬರ್ ೨೧ರಂದು ಪೊಲೀಸ್ ಹುತ್ಮಾತರ ದಿನಾಚರಣೆ ಆಚರಿಸಲಾಗುತ್ತಿದೆ. ಈ ವರ್ಷ ದೇಶಕ್ಕಾಗಿ ಕರ್ತವ್ಯದಲ್ಲಿದ್ದು ಹೋರಾಡುತ್ತಾ ವೀರ ಮರಣಹೊಂದಿದ್ದ ೧೯೧ ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹೆಸರು ವಾಚನೆ ಮಾಡುವ ಮೂಲಕ ಸ್ಮರಿಸಿದರು.
ದೇಶದ ರಕ್ಷಣೆ ಹಾಗೂ ಸಮಾಜದ ಆಸ್ತಿ ಪಾಸ್ತಿ ರಕ್ಷಣೆ ಹಾಗೂ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗಾಗಿ ಶ್ರಮಿಸಿ ಹುತಾತ್ಮರಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದರು.ಇದೇ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಎನ್.ಎಚ್.ರಾಮಚಂದ್ರಯ್ಯ, ರಾಜೇಂದ್ರ ಡಿ.ಎಸ್., ಡಿವೈಎಸ್ಪಿ ಗಿರಿ, ಜಿಲ್ಲೆ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ, ನಿವೃತ್ತ ಪೊಲೀಸ್ ಅಧಿಕಾರಿಗಳು, ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಗಿರೀಶ್, ಜಿಲ್ಲಾ ಪತ್ರಕರ್ತರ ಪರವಾಗಿ ಹಿರಿಯ ಪತ್ರಕರ್ತ ಲಕ್ಷ್ಮೀಪತಿ ಮಂಗಳವಾರಪೇಟೆ, ಸಾರ್ವಜನಿಕರ ಪರವಾಗಿ ಕೋಟೆ ಸಿದ್ದರಾಮಯ್ಯ ಅವರು ಸೇರಿದಂತೆ ಹಲವರು ಪೊಲೀಸ್ ಸ್ಮಾರಕಕ್ಕೆ ಹೂ ಗುಚ್ಚ ಅರ್ಪಿಸಿ ಗೌರವ ನಮನ ಸಲ್ಲಿಸಿದರು. ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯಿಂದ ಮೂರು ಸುತ್ತು ಕುಶಾಲ ತೋಪು ಹಾರಿಸಿ ಪೊಲೀಸ್ ಹುತಾತ್ಮರಿಗೆ ಗೌರವ ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ನಗರ ವೃತ್ತನಿರೀಕ್ಷಕ ರವಿಕಿರಣ್ , ಗ್ರಾಮಾಂತರ ಸಿಪಿಐ ಪ್ರಕಾಶ್ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳು, ಪೊಲೀಸ್ ಇಲಾಖೆ ಕಾರ್ಯನಿರತ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ , ಸಾರ್ವಜನಿಕರು ಉಪಸ್ಥಿತರಿದ್ದರು.