ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರದ ತಪ್ಪುಗಳಿಗೆ ಅಮಾಯಕ ಪೊಲೀಸರು ಬಲಿಪಶುಗಳಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಪಟ್ಟಣದ ತಾಲೂಕು ಮಿನಿ ವಿಧಾನಸೌಧ ಬಳಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಕಾಲ್ತುಳಿತದಲ್ಲಿ 11 ಆರ್ಸಿಬಿ ಅಭಿಮಾನಿಗಳು ಸಾವಿಗೀಡಾಗಿದ್ದು, ದುರಂತದ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಗೃಹ ಸಚಿವ ಜಿ.ಪರಮೇಶ್ವರ ರಾಜೀನಾಮೆ ನೀಡಬೇಕು ಆಗ್ರಹಿಸಿದರು.
ಜಿಲ್ಲಾ ಬಿಜೆಪಿ ಮುಖಂಡ ಡಾ.ಸದಾನಂದ್ ಮಾತನಾಡಿ, ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಸಾವಿಗೆ ಸರ್ಕಾರವೇ ಹೊಣೆ. ಈ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನು ತರಾತುರಿಯಲ್ಲಿ ಅಮಾನತುಗೊಳಿಸಿ ಸರ್ಕಾರದ ತಪ್ಪುಗಳಿಗೆ ಅಧಿಕಾರಿಗಳನ್ನು ಬಲಿಪಶುಗಳನ್ನಾಗಿ ಮಾಡಿದ್ದಾರೆ ಎಂದು ದೂರಿದರು.ಸರ್ಕಾರ ನಡೆಸುವವರು ಪಾರದರ್ಶಕ, ಸತ್ಯ ಮತ್ತು ನಿಷ್ಠಾವಂತ ಆಡಳಿತವನ್ನು ನೀಡುವುದಾಗಿ ಹೇಳಿಕೊಳ್ಳುತ್ತಾರೆ. ಇವರು ತೆಗೆದುಕೊಂಡ ನಿರ್ಧಾರಗಳಿಂದಾಗಿ 11 ಸಾವುಗಳು ಸಂಭವಿಸಿವೆ. ತರಾತುರಿಯಲ್ಲಿ ಅಧಿಕಾರಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಹೇಗೆ ಸಾಧ್ಯ. ಇದನ್ನು ಸರ್ಕಾರ ಯೋಚಿಸಬೇಕಿತ್ತು ಎಂದರು.
ಆರ್ ಸಿಬಿ ಪಂದ್ಯ ಗೆಲ್ಲುವ ಮುನ್ನವೇ ವಿಧಾನಸೌಧದ ಮುಂದೆ ವಿಜಯೋತ್ಸವಕ್ಕಾಗಿ ಡಿಎಪಿಆರ್ಗೆ ಅರ್ಜಿ ಸಲ್ಲಿಸಲಾಯಿತು. ಆ ನಿರ್ಧಾರದ ಹಿಂದೆ ಇದ್ದದ್ದು ಯಾರು. ಪೊಲೀಸ್ ಆಯುಕ್ತರ ಮೇಲೆ ಅನುಮತಿಗಾಗಿ ಒತ್ತಡ ಹೇರಿದವರು ಯಾರು ಎಂದು ಪ್ರಶ್ನಿಸಿದರು.ಪ್ರತಿಭಟನೆಯಲ್ಲಿ ಸಂತೋಷ್ , ಸಿದ್ದಲಿಂಗಸ್ವಾಮಿ, ಪ್ರದೀಪ್, ಶಿವನಂಜೇಗೌಡ, ವೆಂಕಟೇಶ್, ದೀಪು ಸೇರಿದಂತೆ ಹಲವು ಕಾರ್ಯಕರ್ತರು ಭಾಗವಹಿಸಿದ್ದರು.
ಕೆ.ಆರ್.ಪೇಟೆ ಪ್ರವಾಸಿ ಮಂದಿರ ವೃತ್ತದಲ್ಲಿ ಬಿಜೆಪಿ ಪ್ರತಿಭಟನೆಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಆರ್ಸಿಬಿ ವಿಜಯೋತ್ಸವದಲ್ಲಿ ವೇಳೆ ಕಾಲ್ತುಳಿದಿಂದ ಮೃತಪಟ್ಟ 11 ಜನರ ಸಾವಿಗೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿ ತಾಲೂಕು ಬಿಜೆಪಿ ಕಾರ್ಯಕರ್ತರು ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ತಾಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗರಾಜು ನೇತೃತ್ವದಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಈ ವೇಳೆ ಸಾರಂಗಿ ನಾಗರಾಜು ಮಾತನಾಡಿ, ರಾಜ್ಯ ಸರ್ಕಾರ ಎರಡು ಕಡೆ ವಿಜಯೋತ್ಸವ ಆಚರಿಸುವ ಅಗತ್ಯವಿರಲಿಲ್ಲ. ಪೊಲೀಸರ ಮಾತಿಗೂ ಬೆಲೆಕೊಡದೆ ಏಕಪಕ್ಷೀಯವಾಗಿ ವಿಜಯೋತ್ಸವ ಆಚರಣೆ ಮಾಡುವ ಮೂಲಕ ಅಮಾಯಕ ಯುವಕರ ಸಾವಿಗೆ ಕಾರಣವಾಗಿದೆ ಎಂದು ದೂರಿದರು.ತಾನು ಮಾಡಿದ ತಪ್ಪನ್ನು ಮುಚ್ಚಿಕೊಳ್ಳಲು ದಕ್ಷ ಪೊಲೀಸರ ತಲೆ ದಂಡ ಮಾಡಿದೆ. ಇದು ಖಂಡನೀಯ. ಸರ್ಕಾರ ಘಟನೆಯ ಸಂಪೂರ್ಣ ಜವಾಬ್ದಾರಿ ಹೊರಬೇಕು. ಸಿಎಂ, ಡಿಸಿಎಂ, ಗೃಹ ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯ ಶೀಳನೆರೆ ಭರತ್, ಕಾರ್ಯದರ್ಶಿ ರವಿ, ಮಂಜು, ಯೋಗೇಶ್ ಸೇರಿದಂತೆ ಹಲವರಿದ್ದರು.