ಸಾರಾಂಶ
ಮೈಸೂರು: ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಎರಡು ಸಂಘಟನೆಗಳು ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಪೊಲೀಸರು ಅವಕಾಶ ನೀಡಲಿಲ್ಲ.
ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಯಿಂದ ಬಿ.ಆರ್. ಭಾಸ್ಕರ್ ಪ್ರಸಾದ್ ಪಾದಯಾತ್ರೆ ಹಮ್ಮಿಕೊಂಡಿದ್ದರು. ಹಾಗೆಯೇ, ಸಂವಿಧಾನದ ಪೀಠಿಕೆಗೆ ಬಿ.ಆರ್. ಭಾಸ್ಕರ್ ಪ್ರಸಾದ್, ಎಸ್. ಅರುಣ್ ಕುಮಾರ್ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ದಲಿತ ಸಂಘಟನೆಗಳ ಒಕ್ಕೂಟದವರು ಪ್ರತಿಭಟನೆಗೆ ಮುಂದಾದರು. ಈ ವೇಳೆ ಎರಡೂ ಗುಂಪುಗಳ ನಡುವೆ ಘರ್ಷಣೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡಲಿಲ್ಲ.ದಲಿತ ಸಂಘಟನೆಗಳ ಒಕ್ಕೂಟದ ನೂರಾರು ಮುಖಂಡರು ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಆಗಮಿಸಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಮುಂಜಾಗ್ರತೆಯಾಗಿ ಕ್ರಮವಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಪೊಲೀಸರ ವಶಕ್ಕೆಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾದ ಬಿ.ಆರ್. ಭಾಸ್ಕರ್ ಪ್ರಸಾದ್, ವಕೀಲ ಎಸ್. ಅರುಣ್ ಕುಮಾರ್ ಮತ್ತು ಬೆಂಬಲಿಗರನ್ನು ಪೊಲೀಸರು ಬನ್ನೂರು ರಸ್ತೆಯ ಗೌತಮ ಬುದ್ಧ ವೃತ್ತದಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದು ಕರೆದುಕೊಂಡು ಹೋದರು.
ಎಡಿಸಿಗೆ ಮನವಿ ಸಲ್ಲಿಕೆಬಳಿಕ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎನ್. ಭಾಸ್ಕರ್ ನೇತೃತ್ವದಲ್ಲಿ ಮುಖಂಡರು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ಅವರಿಗೆ ಮನವಿ ಸಲ್ಲಿಸಿದರು. ಸಂವಿಧಾನ ಪೀಠಿಕೆ ಬಗ್ಗೆ ಹಗುರವಾಗಿ ಮಾತಾಡಿ, ಜಾತಿ ಜಾತಿಗಳ ನಡುವೆ ಕೋಮು ಸೌಹಾರ್ದತೆ ಹಾಳು ಮಾಡುತ್ತಿರುವ ಎಸ್. ಅರುಣ್ ಕುಮಾರ್ ಮತ್ತು ಬಿ.ಆರ್. ಭಾಸ್ಕರ್ ಪ್ರಸಾದ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ರಾಜ್ಯ ಸರ್ಕಾರ ಒಳ ಮೀಸಲಾತಿ ಹಂಚಿಕೆಗೆ ಗಣತಿ ಮಾಡುತ್ತಿದೆ. ಆದರೆ, ಜಾತಿ ಸಮೀಕ್ಷೆ ಸಮಯದಲ್ಲಿ ಎಸ್. ಅರುಣ್ ಕುಮಾರ್ ಮತ್ತು ಬಿ.ಆರ್. ಭಾಸ್ಕರ್ ಪ್ರಸಾದ್ ಅವರು ಸಭೆ ನಡೆಸುವಾಗ ಸಂವಿಧಾನ ಪೀಠಿಕೆ ಬಗ್ಗೆ ಹಗುರವಾಗಿ ಮಾತಾಡಿದ್ದಾರೆ. ಬಲಗೈ ಸಮಾಜದ ನಾಯಕರನ್ನು ಗುರಿಯಾಗಿಸಿಕೊಂಡು ಅವಾಚ್ಯ ಶಬ್ದಗಳಿಂದ ಬೈಯ್ದು ಅವಮಾನಿಸಿದ್ದಾರೆ ಎಂದು ಅವರು ದೂರಿದರು.ಈ ವೇಳೆ ಮಾಜಿ ಮೇಯರ್ ಪುರುಷೋತ್ತಮ್, ವಕೀಲ ಎಂ.ವಿ. ಚಂದ್ರಶೇಖರ್, ಮುಖಂಡರಾದ ಎಚ್.ಎಸ್. ಪುಟ್ಟರಸ, ಎ.ಆರ್. ಕಾಂತರಾಜು, ಜ್ಞಾನಪ್ರಕಾಶ್, ಕೆ. ಗಂಗಾಧರ್, ಎಂ. ಕುಮಾರಸ್ವಾಮಿ, ಎಂ.ಕೆ. ರೇವಣ್ಣ, ಶಿವಶಂಕರಮೂರ್ತಿ, ಎಸ್.ಪಿ. ಮಹೇಶ, ವಿಷ್ಣುವರ್ಧನ್, ಮಹದೇವ, ಪುಟ್ಟರಾಜು, ಅನಂತ್ ನಾಗ್, ಸದಾನಂದ, ನಟರಾಜು, ಪುನೀತ್, ಶಂಕರ್, ಮೋಹನ್ ರಾಜು, ಶ್ರೀನಿವಾಸಪ್ರಸನ್ನ, ಪ್ರಮೋದ್, ಜೆ.ಎಂ. ಶಿವಶಂಕರಮೂರ್ತಿ, ಎಂ.ಕೆ. ರೇವಣ್ಣ, ಶ್ರೀನಿವಾಸ, ಎಂ. ಪುಟ್ಟರಾಜು, ಮಹೇಶ್, ನಿತಿನ್ ಪುಟ್ಟಸ್ವಾಮಿ ಮೊದಲಾದವರು ಇದ್ದರು.