ಸಾರಾಂಶ
ಕೃಷ್ಣವಿಲಾಸ ರಸ್ತೆ, ದಿವಾನ್ಸ್ ರಸ್ತೆಗಳಿಂದ ಲೋಕಾಯುಕ್ತ ಕಚೇರಿಗಳಿಗೆ ಸಂಪರ್ಕಿಸುವ ರಸ್ತೆಯ ನಾಲ್ಕು ದಿಕ್ಕುಗಳಿಂದಲೂ ಬ್ಯಾರಿಕೇಡ್
ಕನ್ನಡಪ್ರಭ ವಾರ್ತೆ ಮೈಸೂರು
ಮುಡಾ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಚಾರಣೆಗೆ ಹಾಜರಾದ ಹಿನ್ನೆಲೆಯಲ್ಲಿ ಮೈಸೂರಿನ ದಿವಾನ್ಸ್ ರಸ್ತೆಯಲ್ಲಿರುವ ಲೋಕಾಯುಕ್ತ ಮೈಸೂರು ವಿಭಾಗದ ಎಸ್ಪಿ ಕಚೇರಿ ಸುತ್ತಮುತ್ತ ಬುಧವಾರ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.ಅಲ್ಲದೇ, ಕೃಷ್ಣವಿಲಾಸ ರಸ್ತೆ, ದಿವಾನ್ಸ್ ರಸ್ತೆಗಳಿಂದ ಲೋಕಾಯುಕ್ತ ಕಚೇರಿಗಳಿಗೆ ಸಂಪರ್ಕಿಸುವ ರಸ್ತೆಯ ನಾಲ್ಕು ದಿಕ್ಕುಗಳಿಂದಲೂ ಬ್ಯಾರಿಕೇಡ್ ಅಳವಡಿಸಿ ಬಂದ್ ಮಾಡುವ ಮೂಲಕ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಅಲ್ಲದೆ, ಎಂ.ಎನ್. ತಿಮ್ಮಯ್ಯ ವೃತ್ತದಲ್ಲಿ ಪೊಲೀಸರು ಬಂದೋಬಸ್ತ್ ಮಾಡಿದ್ದರು.
ಡಿಸಿಪಿ ಎಂ. ಮುತ್ತುರಾಜು, ದೇವರಾಜ ಉಪ ವಿಭಾಗದ ಎಸಿಪಿ ಶಾಂತಮಲ್ಲಪ್ಪ, ಅಧಿಕಾರಿಗಳು ಮತ್ತು ಸಿಬ್ಬಂದಿ, ಸಿಎಆರ್, ಕೆ.ಎಸ್.ಆರ್.ಪಿ., ಕಮಾಂಡೊ ಪಡೆ ಸಿಬ್ಬಂದಿ ಭದ್ರತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.