ಪೊಲೀಸರ ಸೇವೆ ಸ್ಮರಣೀಯ: ನ್ಯಾ.ಮಂಜುನಾಥ ನಾಯಕ್‌

| Published : Oct 22 2025, 01:03 AM IST

ಸಾರಾಂಶ

ಸ್ವಾತಂತ್ರ್ಯ ನಂತರ ದೇಶದಲ್ಲಿ ಈವರೆಗೆ ಒಟ್ಟು 36000 ಪೊಲೀಸ್‌ ಸಿಬ್ಬಂದಿ, ಸೇನೆಯ ಹೋರಾಟದಲ್ಲಿ 23000 ಸೈನಿಕರು ಪ್ರಾಣತ್ಯಾಗ ಮಾಡಿದ್ದಾರೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್‌ ತಿಳಿಸಿದರು.

ಶಿವಮೊಗ್ಗ: ಸ್ವಾತಂತ್ರ್ಯ ನಂತರ ದೇಶದಲ್ಲಿ ಈವರೆಗೆ ಒಟ್ಟು 36000 ಪೊಲೀಸ್‌ ಸಿಬ್ಬಂದಿ, ಸೇನೆಯ ಹೋರಾಟದಲ್ಲಿ 23000 ಸೈನಿಕರು ಪ್ರಾಣತ್ಯಾಗ ಮಾಡಿದ್ದಾರೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್‌ ತಿಳಿಸಿದರು.

ನಗರದ ಪೊಲೀಸ್‌ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಮಂಗಳವಾರ ಏರ್ಪಡಿಸಿದ್ದ ಪೊಲೀಸ್‌ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮ ಆರಕ್ಷಕರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ದೇಶದ ಗಡಿಕಾಯುವ ಸೈನಿಕರ ಸ್ಮರಣೀಯ ಸೇವೆಯನ್ನು ಮೀರಿ, ಅತೀ ಒತ್ತಡದಲ್ಲಿ, ಯಾವುದೇ ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರ ಸೇವೆ ಅತ್ಯಂತ ಮೌಲಿಕವಾದುದು ಮತ್ತು ಸ್ಮರಣೀಯವಾದುದು ಎಂದರು.

ಯಾವುದೇ ಸಂದರ್ಭದಲ್ಲಿ ಸದಾ ಸನ್ನದ್ಧರಾಗಿದ್ದು ಕಾರ್ಯನಿರ್ವಹಿಸುವ ಪೊಲೀಸರ ಸೇವೆ ಅಭಿನಂದನೀಯವಾದುದ್ದು ಹಾಗೂ ಸೈನಿಕರ ಸೇವೆಗಿಂತ ಮಹತ್ವದ್ದಾಗಿದೆ. ಪೊಲೀಸ್‌ ಸಿಬ್ಬಂದಿಗೆ ದೊರೆಯುವ ಗೌರವ ಅವರ ಕುಟುಂಬದ ಎಲ್ಲಾ ಸದಸ್ಯರಿಗೂ ದೊರೆಯುವಂತಾಗಬೇಕು. ಕೇವಲ ವೇತನ-ಭತ್ಯೆಗಳಿಂದ ಅವರನ್ನು ಸಮಾಧಾನಿಸುವುದು ಸಾಧ್ಯವಾಗದು. ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಶಿವಮೊಗ್ಗ ಅತಿಸೂಕ್ಷ್ಮ ಪ್ರದೇಶ. ಆದಾಗ್ಯೂ ಶಿವಮೊಗ್ಗ ಜಿಲ್ಲೆಯ ಶಾಂತಿಯುತ ವಾತಾವರಣಕ್ಕೆ ಪೊಲೀಸ್‌ ಇಲಾಖೆಯ ಸೇವೆ ಅನುಪಮವಾದುದು ಎಂದು ಹೇಳಿದರು.

ಕಾಯಕನಿಷ್ಠೆ ಮೆರೆಯುವ, ಕೇವಲ ಆರೋಪಗಳಿಂದಷ್ಟೇ ಗುರುತಿಸಲಾಗುವ ಪೊಲೀಸರು ಪ್ರಶಂಸೆ -ಪುರಸ್ಕಾರಗಳನ್ನು ನಿರೀಕ್ಷಿಸದೇ ಎದುರಾಗಬಹುದಾದ ಎಲ್ಲಾ ಸಂದರ್ಭ-ಸವಾಲುಗಳಿಗೆ ಒಗ್ಗಿಕೊಳ್ಳುವ ಅನಿವಾರ್ಯವಿದೆ. ಅದಕ್ಕಾಗಿ ಚಿಂತಿಸುವ, ಚರ್ಚಿಸುವ ದೃತಿಗೆಡುವ ಅಗತ್ಯವಿಲ್ಲ. ನೀಡುವ ಸೇವೆಯನ್ನು ಪ್ರಾಮಾಣಿಕವಾಗಿ, ಆತ್ಮಸಂತೃಪ್ತಿಗಾಗಿ ಮಾಡಬೇಕು. ಅದು ಮನಸಿಗೆ ಹೆಚ್ಚಿನ ಸಮಾಧಾನ ನೀಡಲಿದೆ ಎಂದರು.

ಜಿಲ್ಲೆಯಲ್ಲಿ ಅತ್ಯುತ್ತಮ ಪೊಲೀಸ್‌ ಸೇವೆ ಒದಗಿಸುತ್ತಿರುವುದನ್ನು ಗಮನಿಸಲಾಗಿದೆ. ಪೊಲೀಸ್‌ ಕಾರ್ಯ ಕ್ಷೇತ್ರದ ವ್ಯಾಪ್ತಿಯಲ್ಲಿ ಹಳೆಯ ವ್ಯವಸ್ಥೆಯ ಜೊತೆಗೆ ಹೊಸವಿಧಾನ ಕಾರ್ಯತಂತ್ರಗಳ ಅಳವಡಿಕೆ ಅಗತ್ಯವಾಗಿದೆ. ಹೆಚ್ಚಳವಾಗುತ್ತಿರುವ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಅಳವಡಿಸಿಕೊಳ್ಳುವ ತುರ್ತು ಅಗತ್ಯವಿದೆ ಎಂದು ಹೇಳಿದರು.

ಜಿಪಂ ಸಿಇಒ ಎನ್.ಹೇಮಂತ್‌ ಮಾತನಾಡಿ, ಪೊಲೀಸರು ತಮ್ಮ ದಿನನಿತ್ಯದ ಕರ್ತವ್ಯದ ಜೊತೆಗೆ ವೈಯಕ್ತಿಕ ಬದುಕಿನ ಉನ್ನತಿಗೂ ಚಿಂತಿಸಬೇಕಾದ ಅಗತ್ಯವಿದೆ. ಅಂಚೆ ಸೇರಿದಂತೆ ವಿವಿಧ ವಿಮಾ ಕಂಪನಿಗಳಲ್ಲಿ ಅಲ್ಪಪ್ರಮಾಣದಲ್ಲಿ ವಾರ್ಷಿಕ ಶುಲ್ಕ ಪಾವತಿಸಿ, ಹೆಚ್ಚಿನ ಲಾಭ ಪಡೆಯುವ ವಿಮಾ ಸೌಲಭ್ಯವನ್ನು ಹೊಂದುವಂತೆ ಸಲಹೆ ನೀಡಿದರು.

ಮುಂದುವರಿದ ತಂತ್ರಜ್ಞಾನ ವ್ಯವಸ್ಥೆ ಇರುವ ಇಂದಿನ ದಿನಗಳಲ್ಲೂ ಪೊಲೀಸ್‌ ರಕ್ಷಣಾ ವ್ಯವಸ್ಥೆಯಲ್ಲಿ ಅನೇಕ ಸಮಸ್ಯೆ-ಸವಾಲುಗಳು ಎದುರಾಗುತ್ತಿವೆ. ದಿನದ 24 ಗಂಟೆಗಳೂ ಸೇವೆ ಸಲ್ಲಿಸಬೇಕಾದ ಸಂದರ್ಭ ಎದುರಾಗುತ್ತಿವೆ. ಆಗಾಗ್ಗೆ ಆರೋಗ್ಯ ಸಮಸ್ಯೆಯೂ ತಲೇದೋರುತ್ತಿದೆ. ಆದ್ದರಿಂದ ವೈಯಕ್ತಿಕ ಜೀವನದಲ್ಲಿ ಸದೃಢರಾಗಿರಬೇಕು. ಅಲ್ಲದೇ ಕೌಟುಂಬಿಕ ಜೀವನ ಸುಂದರವಾಗಿಸುವಂತೆ ನೋಡಿಕೊಳ್ಳಲು ಶ್ರಮಿಸಬೇಕಾದ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್‌ ಅವರು ಕಳೆದ ಒಂದು ವರ್ಷದ ಅವಧಿಯಲ್ಲಿ ದೇಶದಲ್ಲಿ ಕರ್ತವ್ಯನಿರತರಾದಾಗಲೇ ಮರಣಹೊಂದಿದ 191 ಮಂದಿ ಹುತಾತ್ಮ ಆರಕ್ಷಕರ ನಾಮವಾಚನ ಮಾಡಿದರು.

ಡಿವೈಎಸ್‌ಪಿ ಎ.ಜಿ.ಕಾರಿಯಪ್ಪ, ರಮೇಶ್‌, ಕೆಎಸ್‌ಆರ್‌ಪಿ ಕಮಾಂಡೆಂಟ್‌ ಯುವಕುಮಾರ್‌ ಸೇರಿದಂತೆ ಪೊಲೀಸ್‌ ಇಲಾಖೆಯ ವಿವಿಧ ಶ್ರೇಣಿಯ ಅಧಿಕಾರಿ-ಸಿಬ್ಬಂದಿ ಉಪಸ್ಥಿತರಿದ್ದರು.