ವೀರಶೈವ ಲಿಂಗಾಯತರನ್ನು ವಿಘಟಿಸಲು ರಾಜಕೀಯ ಹುನ್ನಾರ

| Published : May 28 2025, 11:58 PM IST

ವೀರಶೈವ ಲಿಂಗಾಯತರನ್ನು ವಿಘಟಿಸಲು ರಾಜಕೀಯ ಹುನ್ನಾರ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಆಗಿದ್ದು, ರಾಜಕೀಯ ಕಾರಣಗಳಿಗಾಗಿ ಸಮುದಾಯ ಒಳ ಪಂಗಡಗಳಾಗಿ ಕವಲು ದಾರಿಯಲ್ಲಿ ಸಾಗಿದೆ. ಇದರಿಂದ ಸಮುದಾಯದ ಶಕ್ತಿ ಕುಂದಿಸುವ ಕೆಲಸ ನಡೆಯುತ್ತಿದೆ ಎಂದು ಬಾಳೆಹೊನ್ನೂರು ಮಠದ ರಂಭಾಪುರಿ ಪ್ರಸನ್ನ ರೇಣುಕ ವೀರಸೋಮೇಶ್ವರರಾಜ ದೇಶಿಕೇಂದ್ರ ಶಿವಾಚಾರ್ಯರು ಕಳವಳ ವ್ಯಕ್ತಪಡಿಸಿದರು.

ದೊಡ್ಡಬಳ್ಳಾಪುರ: ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಆಗಿದ್ದು, ರಾಜಕೀಯ ಕಾರಣಗಳಿಗಾಗಿ ಸಮುದಾಯ ಒಳ ಪಂಗಡಗಳಾಗಿ ಕವಲು ದಾರಿಯಲ್ಲಿ ಸಾಗಿದೆ. ಇದರಿಂದ ಸಮುದಾಯದ ಶಕ್ತಿ ಕುಂದಿಸುವ ಕೆಲಸ ನಡೆಯುತ್ತಿದೆ ಎಂದು ಬಾಳೆಹೊನ್ನೂರು ಮಠದ ರಂಭಾಪುರಿ ಪ್ರಸನ್ನ ರೇಣುಕ ವೀರಸೋಮೇಶ್ವರರಾಜ ದೇಶಿಕೇಂದ್ರ ಶಿವಾಚಾರ್ಯರು ಕಳವಳ ವ್ಯಕ್ತಪಡಿಸಿದರು.

ತಾಲೂಕು ವೀರಶೈವ, ಲಿಂಗಾಯತ ಸಮಾಜ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಇಷ್ಟಲಿಂಗ ಪೂಜೆ ಹಾಗೂ ಭಾವೈಕ್ಯ ಧರ್ಮ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು ಮೊದಲ ಸ್ಥಾನದಲ್ಲಿದೆ. ವೀರಶೈವ, ಲಿಂಗಾಯತ ಸೇರಿದಂತೆ ಎಲ್ಲಾ ಒಳಪಂಗಡಗಳು ಒಂದಾಗಿ ಸಮುದಾಯದ ಘನತೆ ಹೆಚ್ಚಿಸಬೇಕಿದೆ. ಬೇರ್ಪಟ್ಟು ಏನೂ ಸಾಧಿಸಲು ಆಗುವುದಿಲ್ಲ. ಸಂಘಟಿತರಾಗಿದ್ದಾರೆ ಮಾತ್ರ ಎಲ್ಲವನ್ನೂ ಸಾಧಿಸಲು ಸಾಧ್ಯ. ಆದರೆ ಒಳಪಂಗಡಗಳನ್ನು ಬೇರೆ ಮಾಡುವ ಜನರ ಮಾತಿಗೆ ಬೆಲೆ ನೀಡಬೇಡಿ ಎಂದು ಕಿವಿಮಾತು ಹೇಳಿದರು.

ಒಳ ಪಂಗಡಗಳ ಹೆಸರಿನಲ್ಲಿ ವೀರಶೈವ, ಲಿಂಗಾಯತರನ್ನು ಬೇರೆ ಮಾಡುವ ಹುನ್ನಾರ ನಡೆಯುತ್ತಿವೆ. ಸಮುದಾಯದ ಹಿರಿಯರಾದ ಶ್ಯಾಮನೂರು ಶಿವಶಂಕರಪ್ಪ, ಶಂಕರ ಬಿದರಿ ಅವರು ವೀರಶೈವ, ಲಿಂಗಾಯತ ಎರಡೂ ಒಂದೇ ಎಂದು ಪ್ರತಿಪಾದಿಸಿದ್ದಾರೆ. ವೀರಶೈವ ಲಿಂಗಾಯತ ಧರ್ಮ ಎಲ್ಲಾ ಧರ್ಮಗಳ ಸಾರವನ್ನೂ ಒಳಗೊಂಡಿದೆ. ದೇಶಕ್ಕೆ ಸಂವಿಧಾನ ಇದ್ದಂತೆ, ವೀರಶೈವ ಲಿಂಗಾಯತ ಸಮುದಾಯಕ್ಕೆ ರೇಣುಕಾಚಾರ್ಯರ ಹಾಗೂ ಬಸವಣ್ಣನವರ ತತ್ವ ಸಿದ್ಧಾಂತಗಳ ಸಂವಿಧಾನವಿದೆ ಎಂದರು.

ಲಿಂಗ ಧರಿಸಿದರೆ ಸಾಲದು, ಅದಕ್ಕೆ ಸಲ್ಲಬೇಕಾದ ಮನ್ನಣೆ ನೀಡಬೇಕು. ಇಷ್ಟಲಿಂಗ ಪೂಜೆ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದ್ದರೆ ಸಮುದಾಯ ಒಗ್ಗೂಡಲು ನೆರವಾಗಲಿದೆ ಎಂದು ಯಡಿಯೂರು ಮಠದ ರೇಣುಕ ಶಿವಾಚಾರ್ಯರು ಸಲಹೆ ನೀಡಿದರು.

ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಸಚ್ಚಿದಾನಂದಮೂರ್ತಿ, ತಾಲೂಕು ವೀರಶೈವ ಸೇವಾ ಅಭಿವೃದ್ಧಿ ಟ್ರಸ್ಟ್ (ಬಸವ ಭವನ) ಕಾರ್ಯದರ್ಶಿ ಬಸವರಾಜು, ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿ, ತಾವರೆಕೆರೆ ಮಠದ ಅಭಿನವಸಿದ್ದಲಿಂಗ ಶಿವಾಚಾರ್ಯಸ್ವಾಮೀಜಿ, ನಾಗಲಾಪುರ ಮಠದ ತೇಜೇಶಲಿಂಗ ಶಿವಾಚಾರ್ಯಸ್ವಾಮೀಜಿ, ಶಾಸಕ ಧೀರಜ್ ಮುನಿರಾಜು, ಮಾಜಿ ಶಾಸಕ ಟಿ.ವೆಂಕಟರಮಣಯ್ಯ,ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಂಕರ ಬಿದರಿ, ಉಪಾಧ್ಯಕ್ಷ ಹರೀಶ್ ಆರಾಧ್ಯ, ಯುವ ಘಟಕದ ಅಧ್ಯಕ್ಷ ಮನೋಹರ್ ಅಬ್ಬಿಗೆರೆ, ಸಮುದಾಯದ ಜಿ.ಮರಿಸ್ವಾಮಿ, ಶಿವನಂಜಪ್ಪ, ಲೋಕೇಶ್ವರ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕದ ಜಿಲ್ಲಾ ಅಧ್ಯಕ್ಷ ಲೋಕೇಶ್, ತಾಲೂಕು ಅಧ್ಯಕ್ಷ ಸುಜಯ್‌ಕುಮಾ‌ರ್, ಮೋಹನ್‌ಕುಮಾರ್, ಖಜಾಂಚಿ ಈರಣ್ಣ, ಜಿಲ್ಲಾ ನಿರ್ದೇಶಕ ಪಿ.ಪ್ರಭಾಕರ್ ಇದ್ದರು.

27ಕೆಡಿಬಿಪಿ2-

ದೊಡ್ಡಬಳ್ಳಾಪುರ ತಾಲೂಕು ವೀರಶೈವ ಲಿಂಗಾಯತ ಸಮಾಜದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಬಾಳೆನ್ನೂರು ಮಠದ ರಂಭಾಪುರಿ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು.