ರಾಜ್ಯದಲ್ಲಿ 52 ಲಕ್ಷ ನೇಕಾರ ಸಮಾಜದ ಜನರಿದ್ದು, ಸ್ವಂತ ಬಲದಿಂದ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಶಕ್ತಿ ಹೊಂದಿದ್ದು, ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ನಮ್ಮ ಸಮಾಜಕ್ಕೆ ಕನಿಷ್ಠ 5-6 ಕ್ಷೇತ್ರಗಳಲ್ಲಿ ಟಿಕೆಟ್ ನೀಡಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಡಿ. ಲಕ್ಷ್ಮಿನಾರಾಯಣ ಹೇಳಿದರು.
ರಾಣಿಬೆನ್ನೂರು: ರಾಜ್ಯದಲ್ಲಿ 52 ಲಕ್ಷ ನೇಕಾರ ಸಮಾಜದ ಜನರಿದ್ದು, ಸ್ವಂತ ಬಲದಿಂದ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಶಕ್ತಿ ಹೊಂದಿದ್ದು, ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ನಮ್ಮ ಸಮಾಜಕ್ಕೆ ಕನಿಷ್ಠ 5-6 ಕ್ಷೇತ್ರಗಳಲ್ಲಿ ಟಿಕೆಟ್ ನೀಡಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಡಿ. ಲಕ್ಷ್ಮಿನಾರಾಯಣ ಹೇಳಿದರು. ನಗರದ ಯರೇಕುಪ್ಪಿ ರಸ್ತೆಯ ಶ್ರೀ ನೀಲಕಂಠೇಶ್ವರ ದೇವಸ್ಥಾನದ ಕಾಕಿ ಜನಸೇವಾ ಸಂಸ್ಥೆಯ ಗಣೇಶೋತ್ಸವ ಮಂಟಪದಲ್ಲಿ ಶನಿವಾರ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟ ಹಾಗೂ ಶ್ರೀ ದೇವರ ದಾಸಿಮಯ್ಯ ಉತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ನೇಕಾರ ಸಂತ ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತ್ಯುತ್ಸವದ ಅಂಗವಾಗಿ ಏರ್ಪಡಿಸಿದ್ದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಹತ್ತಾರು ಕೋಟಿ ಅನುದಾನ ನೀಡಿ ದಾಸಿಮಯ್ಯ ಹುಟ್ಟೂರಿನಲ್ಲಿ ಮೂಲಸೌಲಭ್ಯಗಳಿಗೆ ಆದ್ಯತೆ ನೀಡಿದರು ಎಂದರು.ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಯಡಿಯೂರಪ್ಪ ಸಿಎಂ ಆಗಿದ್ದ ಸಮಯದಲ್ಲಿ ನಾಡಿನ ರೈತ ಮತ್ತು ನೇಕಾರ ಎರಡು ಕಣ್ಣುಗಳು ಎಂದು ಪರಿಭಾವಿಸಿ ನೇಕಾರರಿಗೆ ಉಚಿತ ವಿದ್ಯುತ್ ನೀಡಿದ್ದರು ಎಂದರು. ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ ಮಾತನಾಡಿ, ಸಮಾನತೆ ಕೂಗು ಹಿಂದಿನಿಂದಲೂ ಬಂದಿದೆ. ನೇಕಾರ ದ್ವನಿ ಹೆಚ್ಚಿಸುವ ಕೆಲಸವಾಗಬೇಕಿದೆ ಎಂದರು. ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ದೇವರ ದಾಸಿಮಯ್ಯ ಉತ್ಸವ ಸಮಿತಿ ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ ಮಾತನಾಡಿದರು. ನಗರದ ದೊಡ್ಡಪೇಟೆ ವಿರಕ್ತ ಮಠದ ಗುರುಬಸವ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಹನುಮಂತಪ್ಪ ಮುಕ್ತೇನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನೇಕಾರ ಮಹಿಳಾ ಸಮುದಾಯಗಳ ಒಕ್ಕೂಟದ ಅಧ್ಯಕ್ಷೆ ರಾಜೇಶ್ವರಿ ಏಕಬೋಟೆ, ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ಹನುಮಂತಪ್ಪ ಅಮಾಸಿ, ಪಟ್ಟಸಾಲಿ ಸಮಾಜದ ಅಧ್ಯಕ್ಷ ರಮೇಶ ಗುತ್ತಲ, ಪದ್ಮಸಾಲಿ ಸಮಾಜದ ಅಧ್ಯಕ್ಷ ಕರಬಸಣ್ಣ ಕಡ್ಲಿಬಾಳ, ಜಿಲ್ಲಾ ದೇವಾಂಗ ಸಮಾಜದ ಅಧ್ಯಕ್ಷ ಬಸವರಾಜ ಮೈಲಾರ, ತೋಗಟವೀರ ಸಮಾಜದ ಅಧ್ಯಕ್ಷ ಕೃಷ್ಣಪ್ಪ ಬ್ಯಾಡಗಿ, ವೆಂಕಟೇಶ ಕಾಕಿ, ಶಿವಾನಂದ ಸಾಲಗೇರಿ, ಲಕ್ಷ್ಮಿಕಾಂತ ಹುಲಗೂರ, ಹರೀಶಕುಮಾರ, ವೆಂಕಟೇಶ ಕಾಕಿ ಅತಿಥಿಗಳಾಗಿ ಆಗಮಿಸಿದ್ದರು. ಶಿಕ್ಷಕಿ ಲಕ್ಷ್ಮಿ ಅಡಕಿ ಉಪನ್ಯಾಸ ನೀಡಿದರು. ಯುವರಾಜ ಬಾರಾಟಕ್ಕಿ, ಗಿರೀಶ ಗುಳೇದಗುಡ್ಡ, ಮಂಜುನಾಥ ಹೊಸಪೇಟೆ, ರಮೇಶ ಗುತ್ತಲ, ಹನುಮಂತಪ್ಪ ಕಾಕಿ, ಲಿಂಗರಾಜ ಬೂದನೂರ ಮತ್ತಿತರರಿದ್ದರು.
ಇದಕ್ಕೂ ಪೂರ್ವದಲ್ಲಿ ನಗರದ ದೊಡ್ಡಪೇಟೆ ಅಂಬಾಭವಾನಿ ದೇವಸ್ಥಾನದ ಬಳಿಯಿಂದ ಹೊರಟ ದೇವರ ದಾಸಿಮಯ್ಯ ಭಾವಚಿತ್ರದ ಮೆರವಣಿಗೆ ಎಡಿಬಿ ಸರ್ಕಲ್, ಎಂ.ಜಿ. ರಸ್ತೆ, ದುರ್ಗಾ ಸರ್ಕಲ್, ಕುರುಬಗೇರಿ ಕ್ರಾಸ್, ಕಾಕಿಗಲ್ಲಿ, ನಾಡಿಗ್ಗೇರ ಓಣಿ, ಹಳೇ ಪಿ.ಬಿ.ರಸ್ತೆ, ದೇವರ ದಾಸಿಮಯ್ಯ ಸರ್ಕಲ್ ಮಾರ್ಗವಾಗಿ ಸಮಾರಂಭದ ಸ್ಥಳಕ್ಕೆ ಬಂದು ಸೇರಿತು.