ಮಂಡ್ಯ ವಿವಿ ವಿಲೀನಕ್ಕೆ ರಾಜಕಾರಣಿಗಳಿಗೇ ಹೆಚ್ಚು ಆಸಕ್ತಿ: ರಮೇಶ್‌ರಾಜು

| Published : Mar 13 2025, 12:48 AM IST

ಮಂಡ್ಯ ವಿವಿ ವಿಲೀನಕ್ಕೆ ರಾಜಕಾರಣಿಗಳಿಗೇ ಹೆಚ್ಚು ಆಸಕ್ತಿ: ರಮೇಶ್‌ರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಮುಚ್ಚುವ ಆತಂಕ ಬೇಡ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದರೂ, ಮಾಜಿ ಶಾಸಕ ಮರಿತಿಬ್ಬೇಗೌಡ ಹಾಗೂ ಶಾಸಕ ರಮೇಶ್ ಬಂಡಿಸಿದ್ದೇಗೌಡ ವಿಲೀನಕ್ಕೆ ಮುಂದಾಗಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ವಿವಿ ಸ್ಥಾಪನೆ ಮಾಡಿದಾಗ ಧ್ವನಿ ಎತ್ತದ ಇವರು ವಿಲೀನಕ್ಕೆ ಮಾತ್ರ ತಮ್ಮ ದನಿಗೂಡಿಸುತ್ತಿದ್ದಾರೆ. ಮಂಡಯ ಕ್ಷೇತ್ರ ಶಾಸಕ ರವಿಕುಮಾರ್ ಗಣಿಗ ಅವರು ಮಾತ್ರ ವಿಲೀನಕ್ಕೆ ವಿರೋಧದ ಧ್ವನಿ ಎತ್ತುವ ಮೂಲಕ ಉಳಿಸಲು ಪ್ರಯತ್ನಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯ ಅಧಿಕಾರಸ್ಥ ರಾಜಕಾರಣಿಗಳು ಮಂಡ್ಯ ವಿಶ್ವವಿದ್ಯಾಲಯವನ್ನು ಕಳೆದುಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಭಾರತೀಯ ಕಿಸಾನ್ ಸಂಘದ ಪ್ರಾಂತ ಅಧ್ಯಕ್ಷ ಹಾಡ್ಯ ರಮೇಶ್‌ರಾಜು ಬೇಸರ ವ್ಯಕ್ತಪಡಿಸಿದರು.

ಜನಪ್ರತಿನಿಧಿಗಳಾದವರು ಕೇಂದ್ರ ಮತ್ತು ರಾಜ್ಯಸರ್ಕಾರದಿಂದ ಜಿಲ್ಲೆಗೆ ಅಗತ್ಯವಾಗಿ ಬೇಕಾಗಿರುವ ಎಲ್ಲವನ್ನೂ ತರುವಂತಹ ಬದ್ಧತೆ ಬೆಳೆಸಿಕೊಳ್ಳಬೇಕೇ ಹೊರತು, ಇರುವುದನ್ನು ಕಳೆದುಕೊಳ್ಳುವಂತಹ ಸ್ಥಿತಿಗೆ ಮುಂದಾಗಿರುವುದು ದುರಾದೃಷ್ಟಕರ ಸಂಗತಿ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ಜಿಲ್ಲೆ ಒದಗಿರುವ ವಿಶ್ವವಿದ್ಯಾಲಯವನ್ನು ಮಾಜಿ ಶಾಸಕ ಮರಿತಿಬ್ಬೇಗೌಡ ಹಾಗೂ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರಿಗೆ ಮೈಸೂರಿ ವಿವಿಗೆ ವಿಲೀನ ಮಾಡಲು ಒಲವು ತೋರಿರುವಷ್ಟು ಆಸಕ್ತಿಯನ್ನು ಉಳಿಸಿಕೊಳ್ಳುವಲ್ಲಿ ತೋರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಚ್ಚುವ ಆತಂಕ ಬೇಡ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದರೂ, ಮಾಜಿ ಶಾಸಕ ಮರಿತಿಬ್ಬೇಗೌಡ ಹಾಗೂ ಶಾಸಕ ರಮೇಶ್ ಬಂಡಿಸಿದ್ದೇಗೌಡ ವಿಲೀನಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಸರ್ಕಾರದಲ್ಲಿ ವಿವಿ ಸ್ಥಾಪನೆ ಮಾಡಿದಾಗ ಧ್ವನಿ ಎತ್ತದ ಇವರು ವಿಲೀನಕ್ಕೆ ಮಾತ್ರ ತಮ್ಮ ದನಿಗೂಡಿಸುತ್ತಿದ್ದಾರೆ. ಮಂಡಯ ಕ್ಷೇತ್ರ ಶಾಸಕ ರವಿಕುಮಾರ್ ಗಣಿಗ ಅವರು ಮಾತ್ರ ವಿಲೀನಕ್ಕೆ ವಿರೋಧದ ಧ್ವನಿ ಎತ್ತುವ ಮೂಲಕ ಉಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.

ಮೈಸೂರು, ಧಾರವಾಡ, ಬೆಂಗಳೂರು, ಮಂಗಳೂರು ವಿವಿಗಳು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ವೇತನ ನೀಡಲು ಕಷ್ಟ ಪಡುತ್ತಿವೆ. ಕೇಂದ್ರ ಸರ್ಕಾರ ಸಹಾಯಕ್ಕೆ ಬರುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಒತ್ತಾಯಿಸಿದ್ದು, ಕಷ್ಟದಲ್ಲಿದೆ ಎಂದು ಎಲ್ಲ ವಿಶ್ವವಿದ್ಯಾಲಯಗಳನ್ನು ಮುಚ್ಚುವುದೇ ಪರಿಹಾರವೇ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು.

ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಮಾತನಾಡಿ, ರಾಜ್ಯ ಸರ್ಕಾರ ರೈತರಿಗೆ ನೇರವಾಗಿ ತಲುಪುತ್ತಿದ್ದ ಕೃಷಿ ಸವ್ಮಾನ್ ಯೋಜನೆ ನಿಲ್ಲಿಸಿದ್ದಾರೆ. ಹಾಲಿನ ದರ ಕಡಿತಗೊಳಿಸಿದ್ದಾರೆ. ಇದೀಗ ರೈತರ ಮಕ್ಕಳ ವಿದ್ಯಾಭ್ಯಾಸವನ್ನೂ ಕಸಿಯುವ ಕೆಲಸವಾಗುತ್ತಿದೆ. ಆರ್ಥಿಕ ಸಂಕಷ್ಟವಿದೆ ಎಂದು ವಿವಿ ವಿಲೀನಕ್ಕೆ ಮುಂದಾದ ಸರ್ಕಾರ ಸಾಲದಲ್ಲಿದೆ ಎಂದು ಸರ್ಕಾರ ನಡೆಸುವುದನ್ನು ನಿಲ್ಲಿಸುವರೇ ಎಂದು ಕುಟುಕಿದರು.

ಹೆಮ್ಮಿಗೆ ಚಂದ್ರಶೇಖರ್, ಅಪ್ಪಾಜಿಗೌಡ, ಅಚ್ಯುತ್, ಆರಾಧ್ಯ ಗೋಷ್ಠಿಯಲ್ಲಿದ್ದರು.