ಸಾರಾಂಶ
ಯಾವುದೇ ಅಭಿವೃದ್ಧಿ ಪೂರಕವಾದ ಯೋಜನೆಗಳು ಬಂದರೆ ಡೋಂಗಿ ಪರಿಸರವಾದಿಗಳಿಂದ ಹಿನ್ನಡೆಯಾಗುತ್ತಿದೆ ಎಂದು ಉಚ್ಚ ನ್ಯಾಯಾಲಯದ ನ್ಯಾಯವಾದಿ ರವೀಂದ್ರ ಕೊಲ್ಲೆ ತಿಳಿಸಿದರು.
ಅಂಕೋಲಾ: ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಜಿಲ್ಲೆ ಕೈಗಾರಿಕೆಯಲ್ಲಿ ಆರೋಗ್ಯ ಕ್ಷೇತ್ರ ಸೇರಿದಂತೆ ಅಭಿವೃದ್ಧಿಯಲ್ಲಿ ಹಿಂದುಳಿದೆ. ಡೋಂಗಿ ಪರಿಸರವಾದಿಗಳ ಅನಗತ್ಯ ಹೋರಾಟದಿಂದಾಗಿ ಅಂಕೋಲಾ- ಹುಬ್ಬಳ್ಳಿ ರೈಲ್ವೆ ಯೋಜನೆ ಇನ್ನೂವರೆಗೆ ಜಾರಿಯಾಗಲು ಸಾಧ್ಯವಾಗಿಲ್ಲ ಎಂದು ಉಚ್ಚ ನ್ಯಾಯಾಲಯದ ನ್ಯಾಯವಾದಿ ರವೀಂದ್ರ ಕೊಲ್ಲೆ ತಿಳಿಸಿದರು.
ಸ್ಥಳೀಯ ಕೆಎಲ್ಇ ಶಿಕ್ಷಣ ಮಹಾವಿದ್ಯಾಲಯ, ಅಂಕೋಲಾದ ರೋಟರಿ ಕ್ಲಬ್, ಉತ್ತರ ಕನ್ನಡ ಜಿಲ್ಲಾ ನೋಟರಿ ಸಂಘ, ವಕೀಲರ ಸಂಘದ ಸಹಯೋಗದಲ್ಲಿ ಕೆಎಲ್ಇ ಕಾಲೇಜಿನ ಸಭಾಭವನದಲ್ಲಿ ಉತ್ತರ ಕನ್ನಡ ಜಿಲ್ಲಾ ಸುಸ್ಥಿರ ವಿಕಾಸ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಬೇರೆ ರಾಜ್ಯಗಳಲ್ಲಿ ಅಭಿವೃದ್ಧಿಯ ಪೂರಕವಾದ ಸಾಧ್ಯವಾಗುವಂತಹ ಸೌಲಭ್ಯ ಕಲ್ಪಿಸುವ ವ್ಯವಸ್ಥೆ ನಮ್ಮಲ್ಲಿ ಯಾಕೆ ಇಲ್ಲ. ಯಾವುದೇ ಅಭಿವೃದ್ಧಿ ಪೂರಕವಾದ ಯೋಜನೆಗಳು ಬಂದರೆ ಡೋಂಗಿ ಪರಿಸರವಾದಿಗಳಿಂದ ಹಿನ್ನಡೆಯಾಗುತ್ತಿದೆ. ಇಂತಹ ವ್ಯವಸ್ಥೆಯನ್ನು ಮೆಟ್ಟಿ ನಿಲ್ಲುವಂತ ದೃಢ ನಿರ್ಧಾರ ಯುವಕರು ಕೈಗೊಳ್ಳಬೇಕಿದೆ. ಜತೆಗೆ ರಾಜಕಾರಣಿಗಳ ಇಚ್ಛಾಶಕ್ತಿಯು ಬದಲಾದರೆ ಮಾತ್ರ ಅಭಿವೃದ್ಧಿ ಸಾದ್ಯವಿದೆ ಎಂದರು.ಭಟ್ಕಳದ ಜ್ಞಾನೇಶ್ವರಿ ಬಿಇಡಿ ಕಾಲೇಜಿನ ಪ್ರಾಚಾರ್ಯ ವೀರೇಂದ್ರ ಶಾನಭಾಗ, ರೋಟರಿ ಕ್ಲಬ್ ಅಂಕೋಲಾ ಅಧ್ಯಕ್ಷ ವಿನೋದ ಶಾನಭಾಗ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಭಾಸ್ಕರ ನಾರ್ವೇಕರ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ಡಾ. ವಿನಾಯಕ ಜಿ. ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಬಿಇಡಿ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಉಪನ್ಯಾಸಕ ಡಾ. ಪುಷ್ಪಾ ನಾಯ್ಕ ಸ್ವಾಗತಿಸಿದರು. ಉಪನ್ಯಾಸಕಿ ಪೂರ್ವಿ ಹಲ್ಗೆಕರ ವಂದಿಸಿದರು. ನ್ಯಾಯವಾದಿ ಉಮೇಶ ನಾಯ್ಕ ನಿರೂಪಿಸಿದರು.ಈ ಸಂದರ್ಭದಲ್ಲಿ ಅಂಕೋಲಾ ನಾಗರಿಕರ ಪರವಾಗಿ ನ್ಯಾಯವಾದಿ ರವೀಂದ್ರ ಕೊಲ್ಲೆ ಅವರನ್ನು ಸನ್ಮಾನಿಸಲಾಯಿತು.