ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆ 2ನೇ ಹಂತದಲ್ಲಿ ನಡೆಯಲಿದ್ದು, ತಕ್ಷಣದಿಂದಲೇ ಮಾದರಿ ಚುನಾವಣೆ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ. ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಬಿಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗ ಲೋಕಸಭಾ ಚುನಾವಣೆಗೆ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಮಾರ್ಚ್ 28 ಗುರುವಾರದಂದು ಅಧಿಸೂಚನೆ ಹೊರಡಿಸಲಾಗುವುದು. ಏಪ್ರಿಲ್ 4 ರಂದು ಗುರುವಾರ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದೆ. ಏ. 5 ರಂದು ಶುಕ್ರವಾರ ನಾಮಪತ್ರ ಪರಿಶೀಲನೆ ನಡೆಸಲಾಗುವುದು. ಏ.8 ರಂದು ಸೋಮವಾರ ನಾಮಪತ್ರ ಹಿಂಪಡೆಯುಲು ಕೊನೆಯ ದಿನ. ಏಪ್ರಿಲ್ 26 ರಂದು ಶುಕ್ರವಾರ ಮತದಾನ ಹಾಗೂ ಜೂನ್ 4 ರಂದು ಮಂಗಳವಾರ ಮತಗಳ ಎಣಿಕೆ ನಡೆಯಲಿದೆ. ಚಿತ್ರದುರ್ಗ (ಪರಿಶಿಷ್ಟ ಜಾತಿ) ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಿಲ್ಲೆಯ ಮೊಳಕಾಲ್ಮುರು, ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ ಹಾಗೂ ತುಮಕೂರು ಜಿಲ್ಲೆಯ ಸಿರಾ ಮತ್ತು ಪಾವಗಡ ಸೇರಿದಂತೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಬರಲಿವೆ ಎಂದರು.
18,41,937 ಮಂದಿ ಮತದಾರರು:ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳು ಹಾಗೂ ತುಮಕೂರು ಜಿಲ್ಲೆಯ ಸಿರಾ ಮತ್ತು ಪಾವಗಡ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಒಟ್ಟು 18,41,937 ಮತದಾರರು ಇದ್ದಾರೆ. ಇದರಲ್ಲಿ 91,9064 ಪುರುಷರು ಹಾಗೂ 92,2769 ಮಹಿಳೆಯರು, 104 ಇತರೆ ಮತದಾರರು ಇದ್ದಾರೆ.
ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 14,18,211 ಮತದಾರರು ಇದ್ದಾರೆ. ಇದರಲ್ಲಿ 704896 ಪುರುಷ , 713228 ಮಹಿಳಾ ಹಾಗೂ 87 ಮಂದಿ ಇತರೆ ಮತದಾರರು ಇದ್ದಾರೆ. ತುಮಕೂರು ಜಿಲ್ಲೆಯ ಸಿರಾ ವಿಧಾನ ಕ್ಷೇತ್ರದಲ್ಲಿ 113788 ಪುರುಷರು ಹಾಗೂ 112898 ಮಹಿಳಾ ಮತದಾರರು ಹಾಗೂ 8 ಇತರೆ ಮತದಾರರು ಸೇರಿದಂತೆ ಒಟ್ಟು 226694 ಮತದಾರರು ಇದ್ದಾರೆ. ಪಾವಗಡ ವಿಧಾನ ಸಭಾ ಕ್ಷೇತ್ರದಲ್ಲಿ 100380 ಪುರುಷ ಮತದಾರರು, 96643 ಮಹಿಳಾ ಮತದಾರರು ಹಾಗೂ 9 ಇತರೆ ಮತದಾರರು ಸೇರಿದಂತೆ ಒಟ್ಟು 197032 ಮತದಾರರು ಇದ್ದಾರೆ.ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳು ಹಾಗೂ ತುಮಕೂರು ಜಿಲ್ಲೆಯ ಸಿರಾ ಮತ್ತು ಪಾವಗಡ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಒಟ್ಟು 2167 ಮತಗಟ್ಟೆಗಳು ಇವೆ. ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಲ್ಲಿ 285 ಮತಗಟ್ಟೆಗಳು, ಚಳ್ಳಕೆರೆ-260, ಚಿತ್ರದುರ್ಗ-288, ಹಿರಿಯೂರು-287, ಹೊಸದುರ್ಗ-242, ಹೊಳಲ್ಕೆರೆ-299 ಸೇರಿದಂತೆ ಚಿತ್ರದುರ್ಗ ಜಿಲ್ಲೆಯಲ್ಲಿ 1661 ಮತಗಟ್ಟೆಗಳು ಇವೆ. ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ 266 ಮತಗಟ್ಟೆಗಳು ಹಾಗೂ ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ 240 ಮತಗಟ್ಟೆಗಳು ಇವೆ ಎಂದು ತಿಳಿಸಿದರು.
ಸಹಾಯಕ ಚುನಾವಣಾಧಿಕಾರಿಗಳ ವಿವರ: ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ (ಎಸ್ಟಿ) ಸಹಾಯಕ ಚುನಾವಣಾಧಿಕಾರಿಯಾಗಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಸನಗೌಡ ಕೋಟೂರ, ಚಳ್ಳಕೆರೆ ವಿಧಾನಸಭಾ ಕ್ಷೇತ್ರ (ಎಸ್ಟಿ)ಕ್ಕೆ ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಬಿ.ಆನಂದ್, ಚಿತ್ರದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಉಪ ವಿಭಾಗಾಧಿಕಾರಿ ಎಂ.ಕಾರ್ತೀಕ್, ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಎನ್.ಹೆಚ್-48 ವಿಶೇಷ ಭೂ ಸ್ವಾಧೀನಾಧಿಕಾರಿ ಹೆಚ್.ಎನ್.ಶಿವೇಗೌಡ, ಹೊಸದುರ್ಗ ವಿಧಾನಸಭಾ ಕ್ಷೇತ್ರಕ್ಕೆ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ಹೊಳಲ್ಕೆರೆಗೆ ಭದ್ರಾ ಮೇಲ್ದಂಡೆ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿ ಟಿ.ವಿವೇಕಾನಂದ ಹಾಗೂ ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯಾಗಿ ಕೆಐಎಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿ ಸೋಮಪ್ಪ ಕಡಕೋಳ, ಪಾವಗಡ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯಾಗಿ ತುಮಕೂರು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ- ನರಸಿಂಹಮೂರ್ತಿ ಕಾರ್ಯನಿರ್ವಹಿಸುವರು ಎಂದು ತಿಳಿಸಿದರು.47 ಚೆಕ್ಪೋಸ್ಟ್ ಕಾರ್ಯನಿರ್ವಹಣೆ:
ಚುನಾವಣಾ ಅಕ್ರಮ ತಡೆಗಾಗಿ ಜಿಲ್ಲೆಯಲ್ಲಿ 35 ಚೆಕ್ಪೋಸ್ಟ್ ಹಾಗೂ ಶಿರಾ ಹಾಗೂ ಪಾವಗಡದಲ್ಲಿ ತಲಾ 6 ಚೆಕ್ಪೋಸ್ಟ್ ಸ್ಥಾಪನೆ ಸೇರಿದಂತೆ ಒಟ್ಟು 47 ಚೆಕ್ಪೋಸ್ಟ್ಗಳು ಕಾರ್ಯನಿರ್ವಹಣೆ ಮಾಡಲಿವೆ. ಹೊರರಾಜ್ಯದೊಂದಿಗೆ ಗಡಿ ಪ್ರದೇಶ ಹೊಂದಿರುವುದರಿಂದ ಸತ್ಯಸಾಯಿ ಹಾಗೂ ಅನಂತಪುರ ಗಡಿಭಾಗದಲ್ಲಿ ಅಂತರ ರಾಜ್ಯ ಚೆಕ್ಪೋಸ್ಟ್ ಸ್ಥಾಪನೆ ಮಾಡಲಾಗಿದೆ ಎಂದರು.ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2167 ಮತಗಟ್ಟೆಗಳು ಇದ್ದು, 3952 ಬ್ಯಾಲೆಟ್ ಯುನಿಟ್, 2721 ಕಂಟ್ರೋಲ್ ಯುನಿಟ್ ಹಾಗೂ 2867 ವಿವಿ ಪ್ಯಾಟ್ಗಳ ದಾಸ್ತಾನು ಮಾಡಲಾಗಿದೆ. 47 ಎಸ್ಎಸ್ಟಿ ತಂಡಗಳು, 8 ವಿಎಸ್ಟಿ ತಂಡಗಳು, 8 ವಿವಿಟಿ ತಂಡಗಳು ಹಾಗೂ 31 ಎಫ್ಎಸ್ಟಿ ತಂಡಗಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂಧರ್ ಕುಮಾರ್ ಮೀನಾ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಅಬಕಾರಿ ಉಪ ಆಯುಕ್ತ ಡಾ.ಬಿ.ಮಾದೇಶ್ ಸುದ್ದಿಗೋಷ್ಠಿಯಲ್ಲಿದ್ದರು.ಭಿತ್ತಿ ಚಿತ್ರ, ಬಂಟಿಗ್ಸ್ , ಹೋಲ್ಡಿಂಗ್ಸ್ ತೆರವಿಗೆ ಸೂಚನೆಚಿತ್ರದುರ್ಗ: ಲೋಕಸಭಾ ಚುನಾವಣೆ ವೇಳಾಪಟ್ಟಿ ಬಿಡುಗಡೆಯಾಗಿದ್ದು, ನೀತಿ ಸಂಹಿತೆ ತಕ್ಷಣದಿಂದಲೇ ಜಾರಿಗೆ ಬಂದಿದೆ. ಯಾವುದೇ ದೂರುಗಳಿಗೆ ಅವಕಾಶ ಬರದಂತೆ ಅಧಿಕಾರಿಗಳು ಚುನಾವಣೆ ಕಾರ್ಯ ನಿರ್ವಹಿಸುವಂತೆ ಲೋಕಸಭಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾ ಪಂಚಾಯಿತಿ ಸಿಇಓ, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರು, ಸಹಾಯಕ ಚುನಾವಣಾಧಿಕಾರಿಗಳು, ತಹಶೀಲ್ದಾರರು, ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು ಹಾಗೂ ಮುಖ್ಯಾಧಿಕಾರಿಗಳು, ಸರ್ಕಾರಿ, ವಿವಿಧ ಪಕ್ಷಗಳು ಹಾಗೂ ರಾಜಕೀಯ ವ್ಯಕ್ತಿಗಳಿಗೆ ಸಂಬಂಧಿಸಿದ ಅನಧಿಕೃತ ಗೋಡೆ ಬರಹ, ಬಿತ್ತಿ ಚಿತ್ರಗಳು, ಬ್ಯಾನರ್ ಹಾಗೂ ಬಂಟಿಗ್ ಸೇರಿದಂತೆ ಹೋರ್ಡಿಂಗ್ಗಳನ್ನು ತೆರವುಗೊಳಿಸಬೇಕು. ಈ ಕುರಿತು ಚುನಾವಣೆ ಆಯೋಗಕ್ಕೆ ಸೂಕ್ತ ನಮೂನೆಯಲ್ಲಿ ಸಕಾಲದಲ್ಲಿ ಮಾಹಿತಿ ಒದಗಿಸಬೇಕು ಎಂದು ಸೂಚಿಸಿದರು.ಅಂತಾರಾಜ್ಯ ಗಡಿಯ ಚೆಕ್ಪೋಸ್ಟ್ ಗಳು ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲಾ ವ್ಯಾಪ್ತಿಯಲ್ಲಿನ ಹಾಗೂ ವಿವಿಧ ಕಡೆ ನಿರ್ಮಿಸಲಾಗಿರುವ ಚೆಕ್ಪೋಸ್ಟ್ ಮಾ.17 ರಿಂದಲೇ ಕಾರ್ಯಾರಂಭ ಮಾಡಬೇಕು. ಸಹಾಯಕ ಚುನಾವಣಾಧಿಕಾರಿಗಳು ಹಾಗೂ ತಹಶೀಲ್ದಾರರು ಮತಗಟ್ಟೆಗಳಿಗೆ ಭೇಟಿ ನೀಡಿ ಸ್ಥಿತಿಗತಿ ಪರಿಶೀಲನೆ ನಡೆಸಬೇಕು. ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಚುನಾವಣೆ ಪ್ರಚಾರಕ್ಕಾಗಿ ಸುವಿಧಾ ತಂತ್ರಾಂಶದಲ್ಲಿಯೇ ಅರ್ಜಿ ಸಲ್ಲಿಸಬೇಕು. ಇದರ ಬಗ್ಗೆ ರಾಜಕೀಯ ಪ್ರತಿನಿಧಿಗಳಿಗೆ ಸೂಕ್ತ ಮಾಹಿತಿ ನೀಡಿ ಸರ್ಕಾರದ ಅನುದಾನದಲ್ಲಿ ನಿರ್ಮಿಸಲಾಗಿರುವ ಕಟ್ಟಡಗಳನ್ನು ಸುಪರ್ದಿಗೆ ಪಡೆಯಬೇಕು. ಈ ಸ್ಥಳಗಳಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದರು.85 ವರ್ಷ ದಾಟಿದವರು ಹಾಗೂ ವಿಕಲಚೇತನರು ಮನೆಯಿಂದಲೇ ಮತದಾನ ಮಾಡುವಂತಾಗಲು ಅರ್ಹರಿಗೆ 12ಡಿ ಫಾರಂ ವಿತರಿಸಬೇಕು. ಇಂತಹವರ ಪಟ್ಟಿ ಸಿದ್ಧಪಡಿಸಿ ಕೊಳ್ಳಬೇಕು. ವಿಧಾನ ಸಭಾ ಕ್ಷೇತ್ರವಾರು ಕಂಟ್ರೋಲ್ ರೂಮ್ಗಳನ್ನು ಸ್ಥಾಪಿಸಿ, ಕುಂದು ಕೊರತೆ, ಸಮಸ್ಯೆ ಹಾಗೂ ದೂರಗಳಿಗೆ ಸ್ಪಂದಿಸಬೇಕು. ಜಿಲ್ಲಾ ಮಟ್ಟದ ಅಧಿಕಾರಿ ಗಳು ಹಾಗೂ ಎಲ್ಲಾ ಇಲಾಖೆಗಳ ಸಿಬ್ಬಂದಿ ಚುನಾವಣೆ ಕಾರ್ಯವನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಬೇಕು. ಜಿಲ್ಲೆಯಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಎಲ್ಲರೂ ಸಹರಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.ಅಧಿಕಾರಿಗಳು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಗಾವಹಿಸಬೇಕು. ಧಾರ್ಮಿಕ ಹಾಗೂ ಮದುವೆ ಮುಂಜಿ ಸೇರಿದಂತೆ ಖಾಸಗಿ ಕಾರ್ಯಗಳಿಗೆ ಅನುಮತಿ ಅಗತ್ಯವಿಲ್ಲ. ಆದರೆ ಈ ಸ್ಥಳಗಳನ್ನು ರಾಜಕೀಯ ಚಟುವಟಿಕೆಗಾಗಿ ಬಳಸಲು ಅವಕಾಶವಿಲ್ಲ. ಹೀಗಾಗಿ ಇಂತಹ ಸ್ಥಳಗಳಲ್ಲಿ ರಾಜಕೀಯ ವ್ಯಕ್ತಿಗಳು ಚುನಾವಣೆ ಪ್ರಚಾರ ನಡೆಸ ದಂತೆ ನಿರ್ಬಂಧ ವಿಧಿಸಬೇಕು. ಸಿ-ವಿಜಿಲ್ ತಂತ್ರಾಂಶದ ಮೂಲಕ ಬರುವ ದೂರಗಳ ಬಗ್ಗೆ ತಕ್ಷಣ ಸ್ಪಂದನೆ ನೀಡಬೇಕು. ಚುನಾವಣೆ ಕಾರ್ಯದ ನೆಪ ಹೇಳಿ, ಬರ ನಿರ್ವಹಣೆ ಹಾಗೂ ಕುಡಿಯುವ ನೀರಿನ ಕೆಲಸಗಳ ಬಗ್ಗೆ ನಿರ್ಲಕ್ಷ್ಯ ವಹಿಸುವಂತಿಲ್ಲ. ಯಾವುದೇ ಹೊಸ ಕಾಮಗಾರಿಗಳ ಉದ್ಘಾಟನೆ, ನಿರ್ಮಾಣ, ಶಂಕುಸ್ಥಾಪನೆಗಳಿಗೆ ಅವಕಾಶವಿಲ್ಲ. ಹೊಸ ಟೆಂಡರ್ ಕರೆಯಲು ಅವಕಾಶವಿಲ್ಲ. ಈಗಾಗಲೇ ಚಾಲ್ತಿಯಲ್ಲಿ ಇರುವ ಟೆಂಡರ್ ಗಳ ಪ್ರಕ್ರಿಯೆಯನ್ನು ಅಂತಿಮಗೊಳಿಸಿ ಇರಿಸಿಕೊಳ್ಳಬೇಕು, ಆದರೆ ಕಾರ್ಯಾದೇಶ ನೀಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸ್ಪಷ್ಟಪಡಿಸಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಪ್ರತಿದಿನ ಅಧಿಕಾರಿಗಳು ಚುನಾವಣೆ ಅಕ್ರಮಗಳ ಸಂಬಂಧ ವಶಪಡಿಸಿಕೊಂಡ ವಸ್ತು, ಹಣ, ಮದ್ಯ ಹಾಗೂ ಪ್ರಚಾರ ಸಾಮಗ್ರಿಗಳ ಮಾಹಿತಿಯನ್ನು ಕೂಡಲೇ ನೀಡಬೇಕು. ಇವುಗಳನ್ನು ಒಟ್ಟುಗೂಡಿಸಿ ರಾಜ್ಯ ಚುನಾವಣೆ ಆಯೋಗಕ್ಕೆ ಮಾಹಿತಿ ನೀಡಲಾಗುವುದು. ಈಗಾಗಲೇ ಸ್ಥಾನಿಕ, ವಿಚಕ್ಷಣ, ವಿಡಿಯೋ ಹಾಗೂ ಸಂಚಾರಿ ಕಣ್ಗಾವಲು ತಂಡಗಳಿಗೆ ಅಧಿಕಾರಿಗಳನ್ನು ನೇಮಿಸಿಲಾಗಿದೆ ಎಂದು ತಿಳಿಸಿದರು.ಜಿಪಂ ಸಿಇಓ ಹಾಗೂ ಎಂಸಿಸಿ ನೋಡಲ್ ಅಧಿಕಾರಿ ಎಸ್.ಜೆ.ಸೋಮಶೇಖರ್, ಉಪವಿಭಾಗಧಿಕಾರಿ ಎಂ.ಕಾರ್ತಿಕ್ ಸೇರಿದಂತೆ ವಿವಿಧ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣೆ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.20 ಮಂದಿ ಗಡಿಪಾರಿಗೆ ಶಿಫಾರಸು: ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಮಾತನಾಡಿ, ಚೆಕ್ ಪೋಸ್ಟ್ ಹಾಗೂ ಸಂಚಾರಿ ಕಣ್ಗಾವಲು ತಂಡಗಳಿಗೆ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸ ಲಾಗಿದೆ. ಚುನಾವಣೆ ಅಕ್ರಮ ತಡೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಈಗಾಗಲೇ 596 ಸಮಾಜ ವಿದ್ರೋಹಿಗಳು, ರೌಡಿಗಳನ್ನು ವಶಕ್ಕೆ ಪಡೆಯಲಾಗಿದೆ. ಉಳಿದ ಪ್ರಕರಣಗಳಲ್ಲಿಯೂ ತಹಶೀಲ್ದಾರ್ ಶೀಘ್ರವಾಗಿ ನಿರ್ಧಾರ ಕೈಗೊಳ್ಳಬೇಕು. 20 ಜನರನ್ನು ಗಡಿಪಾರು ಮಾಡುವ ಸಂಬಂಧದ ಶಿಫಾರಸ್ಸನ್ನು ಚಿತ್ರದುರ್ಗ ವಿಭಾಗಾಧಿ ಕಾರಿಗಳಿಗೆ ಸಲ್ಲಿಸಲಾಗಿದೆ. ಶೀಘ್ರವೇ ಅವರು ಈ ಪ್ರಕರಣಗಳ ಕುರಿತು ಕ್ರಮ ಕೈಗೊಳ್ಳುವರು ಎಂದು ಹೇಳಿದರು.