ನಗರದ ವಿವಿಧೆಡೆ ಕಳೆದ ಎರಡು ದಿನಗಳಿಂದ ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಗರದ ವಿವಿಧೆಡೆ ಕಳೆದ ಎರಡು ದಿನಗಳಿಂದ ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಇಂದಿರಾಗಾಂಧಿ ಲೇಔಟ್, ಕಲ್ಲಹಳ್ಳಿ, ವಿನೋಬನಗರ, ಹೊಸಮನೆ, ಗೋಪಾಲಗೌಡ ಬಡಾವಣೆ, ಶಿವಮೊಗ್ಗ ಗ್ಯಾಸ್ ಹಿಂಭಾಗ, ಸೋಮಯ್ಯ ಲೇಔಟ್ ಸೇರಿದಂತೆ ಬಹುತೇಕ ಕಡೆ ಬುಧವಾರದಿಂದ ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ಸಾರ್ವಜನಿಕರು ದೂರವಾಣಿ ಮೂಲಕ ಪಾಲಿಕೆ ಮತ್ತು ನಗರ ನೀರು ಸರಬರಾಜು ಇಲಾಖೆಗೆ ದೂರು ನೀಡುತ್ತಿದ್ದಾರೆ.

ಈ ಬಗ್ಗೆ ಕಾರ್ಯಪಾಲಕ ಅಭಿಯಂತರ ಜೀವನ್ ಪ್ರತಿಕ್ರಿಯೆ ನೀಡಿ, ತೀವ್ರ ಮಳೆ ಬಂದಾಗ ಶುದ್ಧೀಕರಣಕ್ಕೆ ಬೆರೆಸುವ ಔಷಧಗಳನ್ನು ಜಾಸ್ತಿ ಪ್ರಮಾಣದಲ್ಲಿ ಹಾಕಲಾಗುತ್ತದೆ. ಕಳೆದ ಎರಡು ದಿನಗಳಿಂದ ನೀರು ಶುದ್ಧೀಕರಣಕ್ಕೆ ಹೆಚ್ಚಿನ ಪ್ರಯತ್ನ ಪಡುತ್ತಿದ್ದೇವೆ. ಆದರೂ, ಸಹ ಮಳೆಯ ನೀರು ಬಣ್ಣ ಹೋಗುತ್ತಿಲ್ಲ.

ವಾಸ್ತವವಾಗಿ ಸಾರ್ವಜನಿಕರಿಗೆ ಆತಂಕ ಸಹಜ. ಒಂದೇ ದಿನದಲ್ಲಿ ನೀರು ತಿಳಿಯಾದ ಮೇಲೆ ಸರಿ ಹೋಗುತ್ತದೆ. ಇಂದಿನಿಂದ ಸರಿಯಾಗಿದೆ. ಸಾರ್ವಜನಿಕರು ಆತಂಕಪಡುವುದು ಬೇಡ ಎಂದು ತಿಳಿಸಿದ್ದಾರೆ.

ಸಾರ್ವಜನಿಕರಿಗೆ ನಗರ ನೀರು ಸರಬರಾಜು ವ್ಯವಸ್ಥೆ ಬಗ್ಗೆ ಭರವಸೆ ಇಲ್ಲ. ಯಾಕೆಂದರೆ ರಾಜಕಾರಣಿಗಳು, ಜನಪ್ರತಿನಿಧಿಗಳು ಹೇಳಿಕೆಗಷ್ಟೇ ಸೀಮಿತವಾಗಿದ್ದಾರೆ. ಅತ್ಯಾಧುನಿಕ ನೀರು ಸಂಗ್ರಹ ಘಟಕ, ಶುದ್ಧೀಕರಣ ಘಟಕ, ಅತ್ಯಾಧುನಿಕ ಲ್ಯಾಬ್ ಸೇರಿದಂತೆ ಅನೇಕ ವಿಷಯಗಳು ಈಡೇರದೇ ಬಾಕಿ ಇದೆ. ಸರ್ಕಾರದ ಹಣವಿಲ್ಲ ಎಂಬ ಕಾರಣಕ್ಕೆ ಶುದ್ಧ ಕುಡಿಯುವ ನೀರು ಕೊಡುವಲ್ಲಿಯೂ ಇಲಾಖೆ ವಿಫಲವಾಗಿದೆ ಎಂದರು.

ಸಾರ್ವಜನಿಕರಲ್ಲಿ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ನೀರಿನ ತೆರಿಗೆ ಹೆಚ್ಚಳವಾಗಿದೆ. ಆದರೆ, ಗುಣಮಟ್ಟದಲ್ಲಿ ಇಳಿಕೆಯಾಗಿದೆ. ಇದೇ ರೀತಿ ಮುಂದುವರೆದರೆ ಶುದ್ಧ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಮತ್ತು ಕಳಪೆ ಗುಣಮಟ್ಟದ ನೀರು ಸರಬರಾಜು ವಿರುದ್ಧ ಸಾರ್ವಜನಿಕರು ತೀವ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ.

ಕೂಡಲೇ ಮಹಾನಗರ ಪಾಲಿಕೆ ಆಯುಕ್ತರು ಮತ್ತು ಶಿವಮೊಗ್ಗ ಶಾಸಕರು ಹಾಗೂ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಗಮನಹರಿಸಬೇಕೆಂದು ಒತ್ತಾಯಿಸಿದ್ದಾರೆ.