ಸಾರಾಂಶ
ದೊಡ್ಡಬಳ್ಳಾಪುರ: ಬೆಂಗಳೂರಿನಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯನ್ನು ಕೂಡಲೇ ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ತಾಲೂಕಿನ ಕೆರೆಗಳ ಸಂರಕ್ಷಣಾ ಹೋರಾಟ ಸಮಿತಿಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಬಾಯಿಗೆ ಕಪ್ಪುಪಟ್ಟಿ ಧರಿಸಿ, ಮೌನ ಪ್ರತಿಭಟನೆ ನಡೆಸಲಾಯಿತು.
ಧರಣಿ ಬಳಿಕ ಮಾಹಿತಿ ನೀಡಿದ ರೈತ ಮುಖಂಡ ವಸಂತ್ ಕುಮಾರ್, ಚಿಕ್ಕ ತುಮಕೂರು ಹಾಗೂ ಮಜಾರಹೊಸಹಳ್ಳಿ ಗ್ರಾಮಗಳ ಕೆರೆಗಳು ಕಾರ್ಖಾನೆಗಳ ತ್ಯಾಜ್ಯ ನೀರಿನಿಂದ ಸಂಪೂರ್ಣ ಕಲುಷಿತಗೊಂಡಿದ್ದು, ಸತತ ಒತ್ತಾಯಗಳ ನಂತರವೂ ಸೂಕ್ತ ಕ್ರಮ ಕೈಗೊಳ್ಳದ ಹಿನ್ನಲೆ ಮೌನ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.ಮಾಲಿನ್ಯ ನಿಯಂತ್ರಣ ಮಂಡಳಿಯು ದೊಡ್ಡಬಳ್ಳಾಪುರದಿಂದ 40 ಕಿ.ಮೀಗೂ ಹೆಚ್ಚು ದೂರವಿದೆ. ಯಾವುದೇ ರೀತಿಯ ದೂರು ನೀಡಿದರೂ ಸಕಾಲದಲ್ಲಿ ಸ್ಪಂದಿಸುವುದಿಲ್ಲ. ಈ ಹಿಂದೆ ಆರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ನೇತೃತ್ವದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ದೊಡ್ಡಬಳ್ಳಾಪುರಕ್ಕೆ ವರ್ಗಾಯಿಸಬೇಕು ಆಗ್ರಹಿಸಲಾಗಿತ್ತು. ಜಿಲ್ಲಾಧಿಕಾರಿಗಳು ಮೌಖಿಕವಾಗಿ ಸೂಚನೆ ನೀಡಿದ್ದರೂ ಈವರೆಗೆ ಯಾವುದೇ ಪ್ರಗತಿ ಆಗಿಲ್ಲ. ಮುಂದಿನ 15 ದಿನಗಳ ಒಳಗಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯು ದೊಡ್ಡಬಳ್ಳಾಪುರಕ್ಕೆ ವರ್ಗಾವಣೆ ಮಾಡಬೇಕು. ತಪ್ಪಿದಲ್ಲಿ ಆಮರಣಾಂತಿಕ ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಪರ ಜಿಲ್ಲಾಧಿಕಾರಿ ಅಮರೇಶ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ವೇಳೆ ನಾಗರಾಜ್ಬಾಬು, ಸಂತೋಷ್, ವಿಜಯ್ ಕುಮಾರ, ಮುನಿಕೃಷ್ಣಪ್ಪ, ಆಂಜಿನಪ್ಪ, ಗಿಡ್ಡೇಗೌಡ ,ಮುನಿಯಪ್ಪ ,ಗೋಪಾಲಕೃಷ್ಣ, ರಾಜಣ್ಣ ಮತ್ತಿತರರಿದ್ದರು.8ಕೆಡಿಬಿಪಿ5-ದೊಡ್ಡಬಳ್ಳಾಪುರಕ್ಕೆ ಮಾಲಿನ್ಯ ನಿಯಂತ್ರಣ ಮಂಡಲಿ ಕಚೇರಿ ಸ್ಥಳಾಂತರಕ್ಕೆ ಆಗ್ರಹಿಸಿ ರೈತರು ಮೌನ ಪ್ರತಿಭಟನೆ ನಡೆಸಿದರು.