ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:

ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳ ಸೇವೆ ತುಂಬಾ ಕಳಪೆ ಮಟ್ಟದಲ್ಲಿ ಕೂಡಿದ್ದು ಸರ್ಕಾರಗಳು ಇದರ ಬಗ್ಗೆ ಗಮನ ವಹಿಸಬೇಕು. ಹಿಂದನ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರವರ ಸಾರಥ್ಯದಲ್ಲಿ ಉತ್ತಮ ಗುಣಮಟ್ಟದ ಸರ್ಕಾರಿ ಸೇವೆಗಳು ಲಭ್ಯವಿರಲಿಲ್ಲ ಎಂದು ರಾಜ್ಯದ ಜನರು ದೂರುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ಮೇಲೆ ಸಂಸದ ಡಾ.ಕೆ.ಸುಧಾಕರ್ ಕಿಡಿಕಾರಿದರು.

ನಗರದಲ್ಲಿ ಜೀವನ ಆರ್ ಆರ್ ಆಸ್ಪತ್ರೆಯ ಹೊರ ರೋಗಿಗಳ ವಿಶ್ರಾಂತಿ ಕೊಠಡಿಯ ಉದ್ಘಾಟನೆಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಇನ್ನು ನೂತನ ಸಚಿವ ಯು.ಟಿ.ಖಾದರ್ ಅವರು ಆರೋಗ್ಯ ಸಚಿವರಾಗಿ ಖಾತೆಯನ್ನು ಸಮರ್ಥವಾಗಿ ಹೇಗೆ ನಿರ್ವಹಿಸುತ್ತಾರೆ ಎಂದು ನೋಡೋಣ? ಎಂದರು. ಜಿಲ್ಲೆಗೆ ಉತ್ತಮ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಹಿರಿಯ ಸ್ತ್ರೀರೋಗ ತಜ್ಞ ಡಾ.ಐ.ಎಸ್.ರಾವ್ ರವರು ತಮ್ಮ ಜೀವನ್ ಆಸ್ಪತ್ರೆಯ ಸೇವೆಯ ಮುಂದುವರಿದ ಭಾಗವಾಗಿ, ಜೀವನ ಆರ್ ಆರ್ ಆಸ್ಪತ್ರೆ ಎಂಬ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಗಳನ್ನು ಒಳಗೊಂಡು ಆರಂಭ ಮಾಡಿದ್ದಾರೆ. ಈ ಆಸ್ಪತ್ರೆಯನ್ನು ಡಾ.ಐ.ಎಸ್.ರಾವ್ ರವರ ತಂದೆ ಶತಾಯುಷಿ ಐ.ಎಂ.ರಾವ್ ರವರು ಲೋಕಾರ್ಪಣೆ ಗೊಳಿಸಿದ್ದು, ಇದು ಜಿಲ್ಲೆಯ ಜನರಿಗೆ ಮತ್ತೊಂದು ಸಂತಸ ಮತ್ತು ಆರೋಗ್ಯ ರಕ್ಷಣೆಗೆ ಕೊಡುಗೆಯಾಗಿದೆ ಎಂದರು.

ಬೆಂಗಳೂರಿನಲ್ಲೂ ಇಂತಹ ಆಸ್ಪತ್ರೆ ಇಲ್ಲವೇನೋ ಎನ್ನುವ ಮಟ್ಟಿಗೆ ಕಾರ್ಪೋರೇಟ್ ಮಾದರಿಯಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿದ್ದಾರೆ. ನೂರು ಬೆಡ್ ಆಸ್ಪತ್ರೆ ಇದಾಗಿದ್ದು 16 ಬೆಡ್ ಎನ್ ಐ ಸಿ ಯು ಕಾಲೇಜು ಘಟಕ ಹೊಂದಿರುವ ಸುಸಜ್ಜಿತ ಆಸ್ಪತ್ರೆ ಇದಾಗಿದೆ.ದ್ದು, ಇಂತಹ ಭವ್ಯವಾದ ಕಟ್ಟಡ ನಿರ್ಮಿಸಿ ಜನರ ಆರೋಗ್ಯ ರಕ್ಷಣೆಗೆ ಮುಂದಾಗಿರುವ ಡಾ.ಐ.ಎಸ್.ರಾವ್ ಮತ್ತು ಡಾ. ರಾಜಲಕ್ಷ್ಮಿಯವರಿಗೆ ಒಳ್ಳೆಯದಾಗಲಿ ಎಂದು ಶುಭ ಕೋರಿದರು.

ಆರೋಗ್ಯ ಸಮತೋಲನಕ್ಕೆ ಯೋಗ ಸಹಕಾರಿ


ಯೋಗ ದಿನಾಚರಣೆ ಬಗ್ಗೆ ಮಾತನಾಡಿದ ಸಂಸದರು, ಯೋಗದಿಂದ ಆರೋಗ್ಯ ಪಡೆಯುವ ಭಾಗ್ಯವನ್ನು ಪ್ರಧಾನಿ ಮೋದಿಯವರು ವಿಶ್ವಕ್ಕೆ ಪರಿಚಯಿಸಿದರು. ಇಂದಿನ ದಿನಮಾನದಲ್ಲಿ ವಿದೇಶಿಯರು ಭಾರತದ ಯೋಗಾಭ್ಯಾಸವನ್ನು ಪರಿಪೂರ್ಣವಾಗಿ ಕಲಿತು ತಮ್ಮ ಜೀವನಕ್ಕೆ ಅಳವಡಿಕೆ ಮಾಡಿಕೊಳ್ಳುವುದಲ್ಲದೆ ವೃತ್ತಿ ಪರವಾಗಿಯೂ ಆದಾಯದ ಮೂಲವನ್ನಾಗಿ ಪರಿಗಣಿಸಿದ್ದಾರೆ. ಯೋಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಮಾರು ನೂರು ದೇಶಗಳಲ್ಲಿ ಆಚರಣೆಗೆ ತಂದಿದ್ದಾರೆ. ಆರೋಗ್ಯ ಮೆದುಳು ಸಮತೋಲನ ಮಾಡಿಕೊಳ್ಳಲು ಯೋಗ ಸಹಕಾರಿ ಎಂದು ತಿಳಿಸಿದರು.

ಈ ವೇಳೆ ಡಾ.ಐ.ಎಸ್.ರಾವ್, ಡಾ. ರಾಜಲಕ್ಷ್ಮಿ ಮತ್ತಿತರರು ಇದ್ದರು.

ಸಿಕೆಬಿ-6

ನಗರದಲ್ಲಿ ಜೀವನ ಆರ್ ಆರ್ ಆಸ್ಪತ್ರೆಯ ಹೊರ ರೋಗಿಗಳ ವಿಶ್ರಾಂತಿ ಕೊಠಡಿಯನ್ನು ಸಂಸದ ಡಾ.ಕೆ. ಸುಧಾಕರ್ ಉದ್ಘಾಟಿಸಿದರು