ಸಾರಾಂಶ
ಗಜೇಂದ್ರಗಡ: ಪಟ್ಟಣದ ಕೋಟೆನಾಡಿನಲ್ಲಿ ನಡೆಯುವ ೧೦ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ತಾಯಿ ಭುವನೇಶ್ವರಿ ಭಾವಚಿತ್ರ ಹಾಗೂ ಸಮ್ಮೇಳಾನಾಧ್ಯಕ್ಷ ಪ್ರೊ. ಚಂದ್ರಶೇಖರ ವಸ್ತ್ರದ ಅವರ ಮೆರವಣಿಗೆ ಸೋಮವಾರ ವೈಭವದಿಂದ ನಡೆಯಿತು.
ಇಲ್ಲಿನ ಮೈಸೂರು ಮಠದಿಂದ ಆರಂಭವಾದ ಮೆರವಣಿಗೆಯಲ್ಲಿ ಅಲಂಕೃತ ಕನ್ನಡ ರಥದಲ್ಲಿ ವಿರಾಜಮಾನರಾಗಿ ಆಸೀನರಾಗಿದ್ದ ಸಮ್ಮೇಳನಾಧ್ಯಕ್ಷ ಪ್ರೊ. ಚಂದ್ರಶೇಖರ ವಸ್ತ್ರದ ಹಾಗೂ ವಿಶೇಷವಾದ ಕನ್ನಡಮಾತೆ ಭುವನೇಶ್ವರಿ ರಥವು ನುಡಿ ಜಾತ್ರೆಯ ಸಂಭ್ರಮ ಹೆಚ್ಚಿಸಿತು.ಸಾಹಿತ್ಯದ ಸೊಗಡು, ಕನ್ನಡದ ವೈಭವ, ಜಾನಪದ ಕಲಾತಂಡಗಳ ಮೆರಗು, ಕನ್ನಡದ ಬಾವುಟ, ಸಿರಿಗನ್ನಡಂ ಗೆಲ್ಗೆ, ಸಿರಿಕನ್ನಡಂ ಬಾಳ್ಗೆ ಚಿತ್ರಗಳನ್ನು ಮಹಿಳೆಯರು ಕೈಯಲ್ಲಿ ಹಿಡಿದುಕೊಂಡು ಸಾಗಿದರು. ಕನ್ನಡಪರ ಸಂಘಟನೆ ಕಾರ್ಯಕರ್ತರು ಮತ್ತು ಸಾಹಿತ್ಯಾಸಕ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಮೈಸೂರುಮಠದಿಂದ ಆರಂಭವಾದ ಮೆರವಣಿಗೆಗೆ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಕನ್ನಡ ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು. ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಹಾಗೂ ಕಸಾಪ ತಾಲೂಕಾಧ್ಯಕ್ಷ ಅಮರೇಶ ಗಾಣಗೇರ ಅವರು ಪುಷ್ಪಾರ್ಚನೆ ಮಾಡಿದ ಬಳಿಕ ಮೆರವಣಿಗೆ ಬಸವೇಶ್ವರ ವೃತ್ತ, ದುರ್ಗಾವೃತ್ತ, ಜೋಡುರಸ್ತೆ, ಕೆ.ಕೆ. ವೃತ್ತ ಮಾರ್ಗವಾಗಿ ಇಲ್ಲಿನ ಜಗದ್ಗರು ತೋಂಟದಾರ್ಯ ಸಿಬಿಎಸ್ಸಿ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮದ ಭವ್ಯ ವೇದಿಕೆಗೆ ಬಂದು ತಲುಪಿತು.ತಾಪಂ ಮಾಜಿ ಉಪಾಧ್ಯಕ್ಷ ಶಶಿಧರ ಹೂಗಾರ, ಪುರಸಭೆ ಉಪಾಧ್ಯಕ್ಷೆ ಸವಿತಾ ಬಿದರಳ್ಳಿ, ಪುರಸಭೆ ಸ್ಥಾಯಿ ಸಮಿತಿ ಚೇರ್ಮನ್ ಮುದಿಯಪ್ಪ ಮುಧೋಳ, ಮುಖಂಡರಾದ ಸಿದ್ದಪ್ಪ ಬಂಡಿ, ರಫೀಕ್ ತೋರಗಲ್ಲ, ರಾಜು ಸಾಂಗ್ಲೀಕರ, ವಿ.ಬಿ. ಸೋಮನಕಟ್ಟಿ, ಎಚ್.ಎಸ್. ಸೋಂಪುರ, ವೀರಣ್ಣ ಶೆಟ್ಟರ, ಚಂಬಣ್ಣ ಚವಡಿ, ಶರಣು ಪೂಜಾರ, ಸಿದ್ದಣ್ಣ ಚೋಳಿನ, ಶ್ರೀಧರ ಬಿದರಳ್ಳಿ, ಅರಿಹಂತ ಬಾಗಮಾರ, ಅಜ್ಜಪ್ಪ ವಂದಕುದರಿ, ರವಿ ಗಡೇದವರ, ಪುಂಡಲೀಕ ಕಲ್ಲಿಗನೂರ, ಗುಲಾಮ್ ಹುನಗುಂದ, ನಿಂಗಪ್ಪ ಕಾಶಪ್ಪನವರ, ಎಸ್.ಐ. ಪತ್ತಾರ, ದುರಗಪ್ಪ ಮುಧೋಳ, ಬಿ.ಎ. ಹಾದಿಮನಿ, ಡಾ. ಎಂ.ಎ. ಹಾದಿಮನಿ ಇದ್ದರು.