ಸಾರಾಂಶ
ಪುತ್ತೂರು: ರಸ್ತೆಗಳ ದುರಸ್ತಿ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಹಣ ಬಿಡುಗಡೆ ಮಾಡದಿರುವ ಕಾರಣದಿಂದಾಗಿ ಹೊಂಡ ಗುಂಡಿಗಳಿಂದ ತುಂಬಿರುವ ರಸ್ತೆಗಳ ದುರಸ್ತಿ ಕಾರ್ಯ ನಡೆಯುತ್ತಿಲ್ಲ. ಗುಂಡಿಗಳನ್ನು ಮುಚ್ಚಲು ಡಾಂಬರು ರಸ್ತೆಗೆ ಮಣ್ಣು ಹಾಕುವ ಪರಿಸ್ಥಿತಿ ನೋಡಿದಾಗ ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂಬ ಸಂದೇಶ ನೀಡುತ್ತಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಸಹಜ. ಈ ಸಂದರ್ಭದಲ್ಲಿ ರಸ್ತೆಗಳು ಗುಂಡಿ ಬೀಳುವುದು ಸಹಜ. ನಾದುರಸ್ತಿಯಾದ ರಸ್ತೆಗಳನ್ನು ತಾತ್ಕಾಲಿಕವಾದರೂ ಗುಂಡಿ ಮುಚ್ಚುವ ಕೆಲಸ ಸರ್ಕಾರ, ಸ್ಥಳೀಯಾಡಳಿತ ಸಂಸ್ಥೆಗಳು ಮಾಡಬೇಕು. ಆದರೆ ರಾಜ್ಯ ಸರಕಾರ ಪ್ರಾಕೃತಿಕ ವಿಕೋಪದ ಅಡಿಯಲ್ಲಿ ಯಾವುದೇ ಅನುದಾನ ಕೊಟ್ಟಿಲ್ಲ ಎಂದು ಆರೋಪಿಸಿದರು.ಹಿಂದೆ ಯಾವುದೇ ಸರ್ಕಾರ ಇದ್ದಾಗ ಪ್ರಾಕೃತಿಕ ವಿಕೋಪ ಆದಾಗ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ನಲ್ಲಿ ಬೇರೆ ಬೇರೆ ಅನುದಾನ ಬರುತ್ತಿತ್ತು. ಸುಮಾರು ೧೬೫೦ ಕಿ.ಮೀ ಗ್ರಾಮೀಣ ರಸ್ತೆಗಳಿದ್ದು, ಇದರಲ್ಲಿ ಸುಮಾರು ೯೯ ಕಿ.ಮೀ ವಾಹನ ಓಡಾಡಕ್ಕೆ ನಾದುರಸ್ತಿಗೊಂಡಿದ್ದು, ಇದಕ್ಕೆ ಸುಮಾರು ೮ ಕೋಟಿ ರು. ಅನುದಾನ ಬೇಕೆಂದು ಅಧಿಕಾರಿಗಳು ಪ್ರಸ್ತಾವನೆ ಕಳುಹಿಸಿದ್ದಾರೆ. ಆದರೆ ಇಷ್ಟರ ಒಂದು ಚಿಕ್ಕಾಸು ಅನುದಾನವನ್ನು ಸರಕಾರ ಬಿಡುಗಡೆ ಮಾಡಿಲ್ಲ ಎಂದರು.ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಪುತ್ತೂರು ವಿಧಾನಸಭಾ ಕ್ಷೇತ್ರದ ಪುತ್ತೂರು ತಾಲೂಕಿನಲ್ಲಿ ಸುಮಾರು ೧೨೪ ಕಿ.ಮೀ. ಬಂಟ್ವಾಳದಲ್ಲಿ 50 ಕಿ.ಮೀ, ೮೫ ಕಿ.ಮೀ ರಾಜ್ಯ ಹೆದ್ದಾರಿ ಇದೆ. ಗುಂಡಿಬಿದ್ದ ರಸ್ತೆಗಳಿಗೆ ವರ್ಷಂಪ್ರತಿ ಬರುವ ನಿರ್ವಾಹಣ ವೆಚ್ಚದ ಹಣ ಬಂದಿದೆ ಹೊರತು ಯಾವುದೇ ವಿಶೇಷ ಅನುದಾನ ಬಂದಿಲ್ಲ ಎಂದರು.
ರಸ್ತೆ ಗುಂಡಿಗೆ ಮಣ್ಣು ಹಾಕುವ ಬದಲು ತಾತ್ಕಾಲಿಕವಾಗಿ ಕ್ರೆಷರ್ ಹುಡಿ, ಜೆಲ್ಲಿ ಹಾಕಿ ದುರಸ್ತಿ ಮಾಡಬಹುದಿತ್ತು. ಗುಂಡಿ ಮುಚ್ಚಲು ಕೂಡಾ ಈ ಸರಕಾರಕ್ಕೆ ಯೋಗ್ಯತೆ ಇಲ್ಲ ಎಂದು ಆರೋಪಿಸಿದರು.ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ, ಜಿಲ್ಲಾ ಕಾರ್ಯದರ್ಶಿ ವಿದ್ಯಾ ಗೌರಿ, ಶಕ್ತಿ ಕೇಂದ್ರದ ಪ್ರಮುಖರಾಗಿರುವ ನಾಗೇಂದ್ರ ಬಾಳಿಗ, ಶಶಿಧರ್ ನಾಯಕ್ ಇದ್ದರು.