ಕನ್ನಡಪ್ರಭ ವಾರ್ತೆ ಆಲೂರುಹಲವು ವರ್ಷಗಳ ಬೇಡಿಕೆಯಾದ ಪಾಳ್ಯ ಹೋಬಳಿಯ ದಾನಿಹಳ್ಳಿ ಗ್ರಾಮದಲ್ಲಿ ನೂತನವಾಗಿ ೨೦ ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುವ ವಿದ್ಯುತ್ ವಿತರಣಾ ಕೇಂದ್ರಕ್ಕೆ ಶಾಸಕ ಸಿಮೆಂಟ್ ಮಂಜು ಭೂಮಿಪೂಜೆ ನೆರವೇರಿಸಲಾಯಿತು. ನಂತರ ಮಾತನಾಡಿದ ಶಾಸಕರು, ತಾಲೂಕಿನಲ್ಲಿ ಶೇ. ೮೦ಕ್ಕೂ ಹೆಚ್ಚು ರೈತರಿದ್ದಾರೆ. ಇವರಿಗೆ ನಿರಂತರವಾಗಿ ವಿದ್ಯುತ್ ಮತ್ತು ನೀರು ದೊರಕಿಸಿದರೆ ಸ್ವಾವಲಂಬಿ ಜೀವನ ನಡೆಸುತ್ತಾರೆ. ಈಗ ನೂತನವಾಗಿ ವಿದ್ಯುತ್ ವಿತರಣೆ ಕೇಂದ್ರ ಮಾಡುತ್ತಿರುವುದರಿಂದ ಬಹುತೇಕ ಪಾಳ್ಯ ಹೋಬಳಿಗೆ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡಲು ಅವಕಾಶ ಒದಗುತ್ತದೆ. ಇದಕ್ಕೆ ಸಹಕಾರ ನೀಡಿದ ಇಂಧನ ಸಚಿವ ಕೆ. ಜೆ. ಜಾರ್ಜ್‌ರವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅತಿ ಶೀಘ್ರದಲ್ಲಿ ಕೊಡಗಿಹಳ್ಳಿ ಕೇಂದ್ರದಲ್ಲಿ ವಿತರಣೆ ಕೇಂದ್ರ ತೆರೆಯಲು ಈಗಾಗಲೇ ಇಂಧನ ಸಚಿವರಲ್ಲಿ ಮನವಿ ಮಾಡಿದ್ದು, ಜಾಗದ ಸಮಸ್ಯೆ ಬಗೆಹರಿದಿದೆ. ಸದ್ಯದಲ್ಲೆ ಭೂಮಿಪೂಜೆ ನೆರವೇರಿಸುತ್ತೇನೆ ಎಂದರು. ಬ್ಯಾಬ ಅರಣ್ಯ ಪ್ರದೇಶದಲ್ಲಿರುವ ಪುನರ್ವಸತಿ ಕುಟುಂಬಗಳು, ಎಪಿಎಂಸಿ ಮಾರುಕಟ್ಟೆ ತೆರೆಯುವುದು ಸೇರಿದಂತೆ ತಾಲೂಕಿನ ರೈತರ ಸಮಸ್ಯೆಗಳನ್ನು ಅತಿ ಶೀಘ್ರದಲ್ಲಿ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.ಸಮಾರಂಭದಲ್ಲಿ ಸೆಸ್ಕ್ ಕಾರ್ಯ ನಿರ್ವಾಹಕ ಎಂಜಿನಿಯರ್ ಶಿವಾನಂದ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರವಿಕುಮಾರ್‌, ಪಾಳ್ಯ ಸೆಸ್ಕ್ ಜೆಇ ಶಶಿಕಿರಣ್, ತಾಪಂ ಕಾರ್ಯ ನಿರ್ವಹಣಾದಿಕಾರಿ ಸುಬ್ರಹ್ಮಣ್ಯ, ಡೆಪ್ಯೂಟಿ ತಹಸೀಲ್ದಾರ್‌ ಪ್ರಭಾಕರ್‌, ವಿಜಯಕುಮಾರ್‌, ನೇತ್ರಾವತಿ, ಉಮಾರವಿಪ್ರಕಾಶ್, ಎ. ಎಚ್. ರಮೇಶ್, ರಘು ಪಾಳ್ಯ, ಕೃಷ್ಣಮೂರ್ತಿ, ಪಿಡಿಒ ದರ್ಶನ್ ಉಪಸ್ಥಿತರಿದ್ದರು.