ಸಾರಾಂಶ
ರೈತರ ಸಮಸ್ಯೆಗಳಿಗೆ ಸ್ಪಂದಿಸುವುದೇ ಮೆಸ್ಕಾಂ ಜವಾಬ್ದಾರಿ: ನಂದಿಹೊಸಳ್ಳಿ ಬಳಿ ನೂತನ ಮೆಸ್ಕಾಂ ಕೇಂದ್ರ ಆರಂಭ
ಕನ್ನಡಪ್ರಭ ವಾರ್ತೆ, ಬೀರೂರು.ಜಿಲ್ಲೆಯ 6 ತಾಲೂಕುಗಳಲ್ಲೂ ವಿದ್ಯುತ್ ಸಂಬಂಧಿತ ಯಾವುದೇ ಸಮಸ್ಯೆ ಇಲ್ಲ. ಆದರೆ ಬಯಲುಸೀಮೆ ಕಡೂರು ತಾಲೂಕಿನಲ್ಲಿ ಅತಿ ಹೆಚ್ಚು ವಿದ್ಯುತ್ ಪೂರೈಕೆ ಸಮಸ್ಯೆ ಎದುರಾಗಿರುವುದಕ್ಕೆ ಅನಧಿಕೃತ ಪಂಪ್ ಸೆಟ್ ಗಳೇ ಕಾರಣ ಎಂದು ಚಿಕ್ಕಮಗಳೂರು ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಎಂ.ಎಸ್. ಮಂಜುನಾಥ್ ತಿಳಿಸಿದರು.ಬೀರೂರು ಮೆಸ್ಕಾಂ ಉಪವಿಭಾಗದ ಕಚೇರಿಯಲ್ಲಿ ಶುಕ್ರವಾರ ನಡೆದ ಜನ ಸಂಪರ್ಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೈತರು ಬೇಸಿಗೆಯಲ್ಲಿ ತಮ್ಮ ತೋಟ ಮತ್ತು ಬೆಳೆಗಳನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿರುವುದು ನಮ್ಮ ಅರಿವಿಗಿದೆ. ಆದರೆ ನಿಮಗೆ ಸಿಗಬೇಕಾದ ವಿದ್ಯುತ್ನ್ನು ಅನಧಿಕೃತ ಬಳಕೆದಾರರು ಉಪಯೋಗಿಸಿದರೆ ನಾವು ನಿಮಗೆ ಹೇಗೆ ಪೂರ್ಣ ಪ್ರಮಾಣದ ವಿದ್ಯುತ್ ನೀಡಲು ಸಾಧ್ಯ. ಮೊದಲು ಅನಧಿಕೃತ ಪಂಪ್ ಸೆಟ್ ಗಳನ್ನು ಅಕ್ರಮದಿಂದ ಸಕ್ರಮ ಮಾಡಿಕೊಂಡರೆ ಮಾತ್ರ ನಾವು ನಮ್ಮ ಪ್ರಸರಣ ಕಂಪನಿಯಿಂದ ಇಂತಿಷ್ಟು ವಿದ್ಯುತ್ ಅವಶ್ಯಕತೆ ಇದೆ ಎಂದು ಡಿಮ್ಯಾಂಡ್ ಇಡಲು ಸಾಧ್ಯ ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.ಸಭೆ ಆರಂಭ ಗೊಳ್ಳುತ್ತಿದ್ದಂತೆಯೇ ರೈತ ಸಂಘದ ಸೋಮಶೇಖರ್ ಮಾತನಾಡಿ, ಸರ್ಕಾರ ರೈತರ ಪಂಪ್ ಸೆಟ್ ಗಳಿಗೆ 7 ಗಂಟೆ ವಿದ್ಯುತ್ಗೆ ಆದೇಶ ಮಾಡಿದೆ. ಆದರೆ ಕೇವಲ 4ಗಂಟೆ ವಿದ್ಯುತ್ ನೀಡುತ್ತಿಲ್ಲ. ಬೇಸಿಗೆ ಸಮೀಪಿಸುತ್ತಿದೆ. ಈಗಲೇ ವಿದ್ಯುತ್ ನೀಡುತ್ತಿಲ್ಲ, ಇನ್ನೆರಡು ತಿಂಗಳು ರೈತರಿಗೆ ಹೀಗೆ ವಿದ್ಯುತ್ ಕಡಿತ ಮಾಡಿದರೆ ರೈತರು ಆತ್ಮಹತ್ಯೆ ಗುರಿ ತಲುಪುತ್ತಾರೆ. ಬೆಳೆದ ಫಸಲನ್ನು ಉಳಿಸಿಕೊಳ್ಳಲು ಹರಸಾಹಸ ಪಡುವ ಹಾಗೇ ಮಾಡುವುದನ್ನು ಸರಿಪಡಿಸಿ ಎಂದರು.ಇದಕ್ಕೆ ಉತ್ತರಿಸಿದ ಮೆಸ್ಕಾಂ.ಎಸ್.ಇ ಮಂಜುನಾಥ್. ನಮಗೆ ಬಂದಂತಹ ವಿದ್ಯುತ್ ನ್ನು ಸಮನಾಗಿ ವಿತರಿಸಲು ಅಡಚಣೆಯಾಗುತ್ತವೆ. ಇಂತಹ ಸಂದರ್ಭದಲ್ಲಿ ವ್ಯತ್ಯಾಸವಾಗಬಹುದು ಎಂದರು.ಯಗಟಿ ಹೋಬಳಿ ಪರ್ವತನಹಳ್ಳಿ ಈಶ್ವರಪ್ಪ ಮಾತನಾಡಿ, ಈ ಹಿಂದೆ 100ಕೆವಿ ಟಿಸಿಯನ್ನು ಗ್ರಾಮದಲ್ಲಿ ಕೂಡಿಸಿದ್ದರು ಆಗ, ಸುಮಾರು 33 ಐಪಿ ಸೆಟ್ ಓಡುತ್ತಿದ್ದವು, ರೈತರು ಆರಾಮಾಗಿದ್ದರು. ಆದರೆ ಅದನ್ನು ತೆಗೆದು 63ಕೆವಿಗೆ ಬದಲಾಯಿಸಿದರ ಪರಿಣಾಮ 13 ಐಪಿ ಸೆಟ್ ಪಂಪ್ ಸೆಟ್ ಸರಿಯಾಗಿ ಕೆಲಸ ಮಾಡುತ್ತಿಲ್ಲ.ಇದರಿಂದ ರೈತರು ಆತ್ಮಹತ್ಯೆ ದಾರಿ ತು ಳಿಯು ವಂತಾಗಿದೆ. ಈ ವಿಚಾರವಾಗಿ ಅನೇಕ ಬಾರಿ ಅರ್ಜಿ ನೀಡಿದರು ಪ್ರಯೋಜನವಾಗಿಲ್ಲ ಎಂದರು. ಕಡೂರಿನ ಕಾರ್ಯ ನಿರ್ವಾಹಕ ಇಂಜಿನಿಯರ್ ಲಿಂಗರಾಜ್, ಕಡೂರಿನ ಯಳಗೊಂಡನಹಳ್ಳಿ, ಕೆ.ಬಸವನಹಳ್ಳಿ, ಚೌಳಹಿರಿ ಯೂರು ಗ್ರಾಮಗಳಲ್ಲಿ 3ಹೊಸ ಮೆಸ್ಕಾಂ ವಿದ್ಯುತ್ ವಿತರಣಾ ಕೇಂದ್ರಗಳು ಶೀಘ್ರವೇ ಉದ್ಘಾಟನೆಯಾಗುವ ಸಂಭವವಿದ್ದು, ಓವರ್ ಲೋಡ್ ತಪ್ಪಿದರೇ ನಿಮಗೆ ಪೂರ್ಣಪ್ರಮಾಣದ ವಿದ್ಯುತ್ ನೀಡಲಾಗುವುದು. ನಿಮ್ಮ ಸಮಸ್ಯೆಗೆ ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಮೆಸ್ಕಾಂ ಬಗ್ಗೆ ನಂಬಿಕೆ ಇಡಿ ಎಂದರು.ಎಮ್ಮೆದೊಡ್ಡಿ ರೈತ ವೆಂಕಟೇಶ್ ಮಾತನಾಡಿ, ಎಮ್ಮೆದೊಡ್ಡಿ ಭಾಗಕ್ಕೆ ಬುಕ್ಕಸಾಗರ ವಿದ್ಯುತ್ ಫೀಡರ್ ನಿಂದ ವಿದ್ಯುತ್ ನೀಡಲಾಗಿದೆ. ಆದರೆ ಸರಿಯಾದ ವೋಲ್ಟೇಜ್ ಬರುತ್ತಿಲ್ಲ. ಅಳವಡಿಸಿರುವ ಲೈನ್ ಗಳು ಅದರ ಟೆಂಪರ್ ಕಳೆದುಕೊಂಡು ಪುಡಿಯಾಗುವ ಪರಿಸ್ಥಿತಿ ತಲುಪಿವೆ. ಇದನ್ನು ಬದಲಾಯಿಸಿ ಎಂದು ಮನವಿ ಮಾಡಿದಾಗ ಮೆಸ್ಕಾ ಎಇ ವಿಜಯಕುಮಾರ್, ಶೀಘ್ರ ಸ್ಥಳ ಪರಿಶೀಲನೆ ನಡೆಸಿ ನಿಮ್ಮ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಉಳಿದಂತೆ ಲೈನ್ ಮೆನ್ ಗಳು ಸಮಸ್ಯೆ ತಿಳಿಸಲು ಫೊನ್ ಎತ್ತುವುದಿಲ್ಲ. ರೈತರಿಗೆ ಸ್ಪಂದಿಸಲ್ಲ, ಬೇಜವಾಬ್ದಾರಿ ವರ್ತನೆ ತೋರುತ್ತಾರೆ ಎಂದು ರೈತರು ದೂರಿದರು. ಲೈನ್ ಮ್ಯಾನ್ ಗಳು ಆಯಾ ಗ್ರಾಮಗಳ ವಿದ್ಯುತ್ ಸಮಸ್ಯೆ ಬಗೆಹರಿಸಲು ಪರದಾಡುತ್ತಾರೆ. ಆದರೆ ಮೇಲಿನಿಂದ ಕಾರ್ಯಬಾರದ ಒತ್ತಡ ಮತ್ತಿತರ ಕಚೇರಿ ಸಮಸ್ಯೆಗಳಿಗೆ ಹೀಗಾಗಬಹುದು. ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಆಗದಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.ಲಿಂಗದಹಳ್ಳಿ, ಹೊಗರೇಹಳ್ಳಿ , ಬಳ್ಳಿಗನೂರು ಗ್ರಾಮದ ಕೆಲವು ರೈತರು ನಮ್ಮ ಭಾಗಕ್ಕೆ ಬೀರೂರು ಮತ್ತು ತರೀಕೆರೆ ಭಾಗ ದಿಂದ ವಿದ್ಯುತ್ ನೀಡಲಾಗುತ್ತಿದೆ. ಆದರೆ ಅದು ಸಮರ್ಪಕವಾಗಿ ಸಿಗದೆ ನಾವು ಬೆಳೆದ ಬೆಳೆ ಒಣಗುವ ಸ್ಥಿತಿ ಎದುರಾದರೇ, ಇನ್ನೊದೆಡೆ ರಾತ್ರಿ ವೇಳೆ ವಿದ್ಯುತ್ ನೀಡಿದರೇ ನಾವು ಹೇಗೆ ತೋಟಗಳಿಗೆ ನೀರು ಹಾಯಿಸಲು ಸಾಧ್ಯ. ಸಮಯ ಬದಲಾವಣೆ ಆದರೆ ಒಳಿತು ಎಂದರು.ಈ ಸಂದರ್ಭದಲ್ಲಿ ಮೆಸ್ಕಾಂ ಎಇ ವಿಜಯಕುಮಾರ್, ಹಿರೇನಲ್ಲೂರು ಜೆಇ ಕಿಶೋರ್ರಾಜ್, ತಾಂತ್ರಿಕ ಇಂಜಿನಿಯರ್ ಯತೀಶ್, ಕುಸುಮಾ, ಓಂಕಾರಮ್ಮ, ಹಾಗೂ ರೈತ ಸಂಘದ ಪದಾಧಿಕಾರಿಗಳು, ಮತ್ತು ಗ್ರಾಹಕರು ಇದ್ದರು.
28 ಬೀರೂರು 1 ಬೀರೂರಿನ ಮೆಸ್ಕಾಂ ಕಚೇರಿಯಲ್ಲಿ ಶುಕ್ರವಾರ ಚಿಕ್ಕಮಗಳೂರು ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಎಂ.ಎಸ್. ಮಂಜುನಾಥ್ರವರ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ ನಡೆಯಿತು. ಕಡೂರಿನ ಕಾರ್ಯ ನಿರ್ವಾಹಕ ಇಂಜಿನಿಯರ್ ಲಿಂಗರಾಜ್, ಮೆಸ್ಕಾಂ ಎಇ ವಿಜಯಕುಮಾರ್, ಹಿರೇನಲ್ಲೂರು ಜೆಇ ಕಿಶೋರ್ರಾಜ್ ಇದ್ದರು.