ಗಡಿಭಾಗದಲ್ಲಿ ಕನ್ನಡ ಕಟ್ಟುವಲ್ಲಿ ಕೆಎಲ್‌ಇ ಕೊಡುಗೆ ಅಪಾರ

| Published : Jan 07 2024, 01:30 AM IST

ಸಾರಾಂಶ

ಸಂಸ್ಥೆಯು ಹಿಂದಿನಿಂದಲೂ ಕನ್ನಡ ಉಳಿಸಿ - ಬೆಳೆಸುವ ಕಾರ್ಯ ಮಾಡುತ್ತಾ ಬಂದಿದೆ. ಕನ್ನಡ ಸಂಸ್ಕೃತಿ, ಪರಂಪರೆ ಇಂದಿನ ಯುವಜನತೆಗೆ ಪರಿಚಯಿಸುವ ಕಾರ್ಯ ಮಾಡುತ್ತಿರುವುದು ಪ್ರಶಂಸನೀಯ ಎಂದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕೆಎಲ್‌ಇ ಸಂಸ್ಥೆಯು ಗಡಿಭಾಗದಲ್ಲಿ ಕನ್ನಡ ಕಟ್ಟುವ ಕೆಲಸ ಮಾಡಿದೆ. ಕರ್ನಾಟಕ ಏಕೀಕರಣಕ್ಕಾಗಿ ಅಹೋರಾತ್ರಿಯಾಗಿ ಶ್ರಮಿಸಿದೆ. ಬೆಳಗಾವಿ ಕನ್ನಡದ ಭದ್ರಕೋಟೆಯಾಗಿ ಕಾರ್ಯನಿರ್ವಹಿಸಿದೆ. ಇಂದು ಬೆಳಗಾವಿ ಕನ್ನಡ ಕಂಪು ವಾತಾವರಣ ಪಸರಿಸಿದ್ದರೆ ಕೆಎಲ್‌ಇ ಸಂಸ್ಥೆಯ ಕೊಡುಗೆ ಅನನ್ಯವೆನಿಸಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

ನಗರದ ಕೆಎಲ್‌ಇ ಸಂಸ್ಥೆಯ ರಾಜಾಲಖಮಗೌಡ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ನುಡಿ ವೈಭವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಂಸ್ಥೆಯು ಹಿಂದಿನಿಂದಲೂ ಕನ್ನಡ ಉಳಿಸಿ - ಬೆಳೆಸುವ ಕಾರ್ಯ ಮಾಡುತ್ತಾ ಬಂದಿದೆ. ಕನ್ನಡ ಸಂಸ್ಕೃತಿ, ಪರಂಪರೆ ಇಂದಿನ ಯುವಜನತೆಗೆ ಪರಿಚಯಿಸುವ ಕಾರ್ಯ ಮಾಡುತ್ತಿರುವುದು ಪ್ರಶಂಸನೀಯ ಎಂದರು.

ಖ್ಯಾತ ಕವಿ ಡಾ.ಡಿ.ಎಸ್. ಕರ್ಕಿ, ಡಾ. ಚಂದ್ರಶೇಖರ ಕಂಬಾರ ಅಧ್ಯಯನ ಮಾಡಿ ಕನ್ನಡ ಸಾಹಿತ್ಯದಲ್ಲಿ ಶ್ರೇಷ್ಠ ಸಾಹಿತಿಗಳನ್ನಾಗಿ ರೂಪಿಸಿದೆ. ಈ ಸಾಹಿತಿಗಳಿಂದ ಅನೇಕ ಪ್ರಕಾರಗಳ ಸಾಹಿತ್ಯ ಕೃಷಿ ಮಾಡುವುದರ ಮೂಲಕ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ್ದಾರೆ. ಕನ್ನಡ ಭಾಷೆಯನ್ನು ಪ್ರೀತಿಸಬೇಕು. ನಮ್ಮ ತಾಯಿಯ ಭಾಷೆ ನಾವು ಪ್ರೀತಿಸದಿದ್ದರೆ ಮತ್ತಾರು ಪ್ರೀತಿಸಲು ಸಾಧ್ಯ ಎಂದರು.

ಆರ್‌ಎಲ್‌ಎಸ್‌ ಕಾಲೇಜಿನಲ್ಲಿ ಪ್ರತಿವರ್ಷ ಜನಪದ ಉತ್ಸವ, ಕನ್ನಡ ಹಬ್ಬಗಳನ್ನು ಆಚರಿಸುವುದರ ಮೂಲಕ ಕನ್ನಡದ ಅಸ್ಮೀತೆಯ ಸಾಕ್ಷಿಯಾಗಿ ನಿಂತಿದೆ. ಇಂತಹ ಕನ್ನಡದ ಕಾರ್ಯಕ್ರಮಗಳು ಮತ್ತೆ ಮತ್ತೆ ಜರುಗಲೇಬೇಕು. ಕನ್ನಡ ವಾತಾವರಣ ನಿರ್ಮಿಸುವ ಕೆಲಸ ನಿಮ್ಮಂಥ ವಿದ್ಯಾರ್ಥಿಗಳಿಂದ ಅನುದಿನವು ಜರುಗಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ವಿಪ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಪ್ರತಿ ಕನ್ನಡಿಗರಲ್ಲಿ ಕನ್ನಡ ಭಾಷೆಯ ಅವಿಭಾಜ್ಯ ಅಂಗವಾಗಬೇಕು. ಪ್ರಾದೇಶಿಕ ಭಾಷೆ ಪ್ರೀತಿಸುವದರ ಜೊತೆಗೆ ಅನ್ಯ ಭಾಷೆಗಳ ಮೇಲೆ ಪ್ರಭುತ್ವ ಸಾಧಿಸಬೇಕು. ಗತಕಾಲದ ಕನ್ನಡದ ವೈಭವ ನಾವೆಲ್ಲರೂ ಇಂದು ಮುಂದುವರೆಸಿ ಇಂದಿನ ಯುವ ಜನತೆಯು ಅಳವಡಿಸಿಕೊಳ್ಳಬೇಕು. ಕರ್ನಾಟಕ ನಾಮಕರಣವಾಗಿ ಐವತ್ತು ವರ್ಷಾಗಳಾಯಿತು. ಕನ್ನಡ ಧ್ವನಿ ಗಡಿಭಾಗದಲ್ಲೇ ಪ್ರತಿಧ್ವನಿಸುತ್ತದೆ. ಇಂತಹ ಮಹಾವಿದ್ಯಾಲಯದಲ್ಲಿ ಕನ್ನಡಪರ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವದರ ಮೂಲಕ ಕನ್ನಡ ಭಾಷೆಯು ಬೆಳೆಸಿ-ಉಳಿಸಿಕೊಳ್ಳಲು ಕಂಕಣ ಬದ್ದರಾಗಬೇಕು ಎಂದರು.

ಹಾವೇರಿ ವಿವಿಯ ಮೌಲ್ಯಮಾಪನ ಕುಲಸಚಿವೆ ಡಾ.ವಿಜಯಲಕ್ಷ್ಮೀ ತಿರ್ಲಾಪುರ ಮಾತನಾಡಿ, ಜನಪದ ಭಾಷೆಯು ಶ್ರೀಮಂತವಾದುದು. ಕನ್ನಡ ಸಂಸ್ಕೃತಿಯು ಗ್ರಾಮೀಣರ ಉಡುಗೆ - ತೊಡುಗೆ, ನಡೆ - ನುಡಿಗಳಲ್ಲಿ, ಆಚಾರ-ವಿಚಾರಗಳಲ್ಲಿ ಕಂಡು ಬರುತ್ತದೆ. ಕನ್ನಡ ಸಾಹಿತ್ಯ ಪರಂಪರೆ ಮಹತ್ವ ತಿಳಿಸಿದರು. ಜಾನಪದ ಆಚರಣೆಗಳನ್ನು ಆಚರಿಸುವುದರ ಮೂಲಕ ಆರೋಗ್ಯ ಸುಧಾರಣೆಯಾಗಲು ಸಾಧ್ಯವಿದೆ. ಜಾನಪದರ ಹಾಡುಗಳನ್ನು ಜೀವಂತವಾಗಿಡಲು ಇಂದಿನ ವಿದ್ಯಾರ್ಥಿಗಳು ಜನಪದ ಹಾಡುಗಳನ್ನು ಅನುಸರಿಸಿಕೊಳ್ಳಬೇಕು ಎಂದು ಹೇಳಿದರು.

ಕಾಲೇಜು ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಲಿಂಗೌಡ ದೇಸಾಯಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ರಾಣಿ ಚನ್ನಮ್ಮಾ ಬ್ಯಾಂಕಿನ ಅಧ್ಯಕ್ಷೆ ಆಶಾ ಪ್ರಭಾಕರ ಕೋರೆ, ವಿ.ಸಿ. ಕಾಮಗೋಳ ಇದ್ದರು. ಪ್ರಾಚಾರ್ಯೆ ಡಾ.ಜ್ಯೋತಿ ಕವಳೇಕರ ಸ್ವಾಗತಿಸಿದರು. ಮಹಾದೇವಿ ಹುಣಶೀಬೀಜ ವಂದಿಸಿದರು. ಕೆ.ಎಲ್.ಇ. ಸಂಗೀತಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಎಸ್.ಬಿ.ಬನ್ನಿಮಟ್ಟಿ ಮತ್ತು ಶಿಲ್ಪಾ ರುದ್ರನ್ನವರ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು. ತದನಂತರದಲ್ಲಿ ಸಂಗೀತ, ನೃತ್ಯ, ಚಿಂತನೆ ಮೊದಲಾದ ಕನ್ನಡ ಕುರಿತು ಸಮಾರಂಭಗಳು ಜರುಗಿದವು. ಇದಕ್ಕಿಂತಲೂ ಪೂರ್ವದಲ್ಲಿ ನಾಡದೇವಿ ಭುವನೇಶ್ವರ ಭವ್ಯ ಮೆರವಣಿಗೆಗೆ ಡಾ ಪ್ರಭಾಕರ ಕೋರೆಯವರು ಚಾಲನೆ ನೀಡಿದರು. ಕನ್ನಡ ಹಬ್ಬದಲ್ಲಿ ಅನೇಕ ಮಳಿಗೆಗೆಳನ್ನು ತೆರೆಯಲಾಗಿತ್ತು.