ಸಾರಾಂಶ
ಬಳ್ಳಾರಿ: ರಂಗತೋರಣ ಸಂಸ್ಥೆ ಪ್ರತಿವರ್ಷ ನೀಡುವ ರಾಜ್ಯಮಟ್ಟದ ಸಾಂಸ್ಕೃತಿಕ ಸಾರ್ವಭೌಮ ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕಾರಕ್ಕೆ 2022ನೇ ಸಾಲಿಗೆ ನಾಡಿನ ಗ್ರಾಮೀಣ ರಂಗಭೂಮಿಯ ಸರದಾರ ಶೇಷಗಿರಿಯ ಪ್ರಭು ಗುರಪ್ಪನವರ ಹಾಗೂ 2023ನೇ ಸಾಲಿಗೆ ರಂಗಭೂಮಿ ಕಲಾವಿದೆ ಡಿ. ಹನುಮಕ್ಕ ಅವರನ್ನು ಆಯ್ಕೆ ಮಾಡಿದೆ.
ಜುಲೈ 28ರಂದು ಬಳ್ಳಾರಿಯಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ ತಿಳಿಸಿದರು.ಗಮಕ ಕಲಾನಿಧಿ ಜೋಳದರಾಶಿ ದೊಡ್ಡನಗೌಡರ ಸ್ಮರಣೆಯಲ್ಲಿ ರಂಗತೋರಣ ಸಾಂಸ್ಕೃತಿಕ ಸಂಸ್ಥೆಯು 2016ರಿಂದ ರಂಗತೋರಣ ಪುರಸ್ಕಾರ ನೀಡುತ್ತಿದೆ. ರಂಗತೋರಣದೊಂದಿಗೆ ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನ ಹಾಗೂ ಗೌಡರೇ 1960ರಲ್ಲಿ ಸ್ಥಾಪಿಸಿದ್ದ ಶ್ರೀರಾಮೇಶ ಟ್ರಸ್ಟ್ ಸಹಯೋಗದಲ್ಲಿ ರಾಜ್ಯಮಟ್ಟದ ಪುರಸ್ಕಾರವನ್ನು ನಾಡಿನ ಹಿರಿಯ ರಂಗಕರ್ಮಿಗಳಿಗೆ ಪ್ರದಾನ ಮಾಡಲಾಗುತ್ತಿದೆ. ಪುರಸ್ಕಾರವು ₹25 ಸಾವಿರ ನಗದು, ಆಕರ್ಷಕ ಪ್ರಶಸ್ತಿ ಫಲಕ ಒಳಗೊಂಡಿದೆ ಎಂದು ವಿವರಿಸಿದರು. ಪ್ರತಿಷ್ಠಾನ ಅಧ್ಯಕ್ಷ ಜೋಳದರಾಶಿ ಪೊಂಪನಗೌಡ ಸುದ್ದಿಗೋಷ್ಠಿಯಲ್ಲಿದ್ದರು.
ಪ್ರಶಸ್ತಿ ಪುರಸ್ಕೃತರ ಪರಿಚಯ:ಗ್ರಾಮೀಣ ರಂಗ ಸರದಾರ ಶೇಷಗಿರಿಯ ಪ್ರಭು ಗುರಪ್ಪನವರ:
ಇವರು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶೇಷಗಿರಿ ಗ್ರಾಮದವರು. ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಾಗಿ ಆರಂಭಗೊಂಡ ಶ್ರೀ ಗಜಾನನ ಯುವ ಮಂಡಳಿ ತನ್ನ 35 ವರ್ಷಗಳ ನಿರಂತರ ಚಟುವಟಿಕೆಗಳಿಂದ ‘ಶೇಷಗಿರಿ ಕಲಾ ತಂಡ’ ಎಂದೇ ಹೆಸರಾಗಿದೆ. ಉತ್ತಮ ಸಾಮಾಜಿಕ ಚಿಂತನೆಯ ಹೊಸ ಅಲೆಯ ನಾಟಕಗಳನ್ನು ಹೆಸರಾಂತ ನಿರ್ದೇಶಕರಿಂದ ತಯಾರಿಸಿ ಪ್ರದರ್ಶಿಸುತ್ತಿರುವುದು ಪ್ರಸಂಶನೀಯ. ಈ ತಂಡದ ಕಾರ್ಯ ಚಟುವಟಿಕೆ ಹಿಂದಿನ ಶಕ್ತಿ ಪ್ರಭು ಗುರಪ್ಪನವರು.ಶೇಷಗಿರಿ ಕಲಾ ತಂಡದ ಅಧ್ಯಕ್ಷರಾಗಿ, ನಟ-ನಿರ್ದೇಶಕ, ರಂಗ ಸಂಘಟಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಕಪ್ಪು ನೆಲದ ಕೆಂಪು ಕಥೆ’ಯಿಂದ ಇಂದಿನ ಬಹುಚರ್ಚಿತ ‘ಚಾವುಂಡರಾಯ’, ‘ಜನಶತ್ರು’ ನಾಟಕಗಳು ಶೇಷಗಿರಿಯಿಂದ ಹಾವೇರಿ, ಬೆಂಗಳೂರು, ಮುಂಬೈನಲ್ಲೂ ಪ್ರದರ್ಶನಗೊಂಡಿವೆ.ಬಣ್ಣದ ಬದುಕಿನ ಬೆಂಕಿ ಕಿಡಿ ಡಿ.ಹನುಮಕ್ಕ:
ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿಯ ಡಿ.ಹನುಮಕ್ಕ ಹಿರಿಯ ರಂಗಭೂಮಿ ಕಲಾವಿದ ದುರ್ಗಾದಾಸ ಪುತ್ರಿ.ಕೇವಲ 9ನೇ ತರಗತಿ ಓದಿದ ಹನುಮಕ್ಕ ಹೆಗ್ಗೋಡಿನ ನೀನಾಸಂ ಪದವೀಧರೆ. ಬಿ.ವಿ. ಕಾರಂತ, ಕೆ.ವಿ. ಸುಬ್ಬಣ್ಣ, ಸಿಜಿಕೆ, ಸಿ.ಬಸವಲಿಂಗಯ್ಯ, ಮೇಕಪ್ ನಾಣಿ, ಕೀರ್ತಿನಾಥ ಕುರ್ತಕೋಟಿ, ಯು.ಆರ್. ಅನಂತಮೂರ್ತಿ, ಕಿ.ರಂ. ನಾಗರಾಜ ಮಾರ್ಗದರ್ಶನದಲ್ಲಿ ನೀನಾಸಂ ತಿರುಗಾಟ, ಸಾಣೆಹಳ್ಳಿ ಶಿವಸಂಚಾರ ನಾಟಕ ತಂಡಗಳು ಹನುಮಕ್ಕನವರ ಕಲಾ ಪ್ರತಿಭೆಗೆ ಪುಟವಿಟ್ಟವು. ತುಘಲಕ್, ಅಗ್ನಿ ಮತ್ತು ಮಳೆ, ಬೆರಳ್ಗೆ ಕೊರಳ್, ನಾಗಮಂಡಲ, ಚೀರಬಂದೆವಾಡೆ, ಸ್ಮಶಾನ ಕುರುಕ್ಷೇತ್ರ, ಚಾಳೇಶ, ಜೋಕುಮಾರಸ್ವಾಮಿ, ಬೇಲಿ ಮತ್ತು ಹೊಲ, ಶರೀಫ, ಒಡಲಾಳ, ಸೂರ್ಯಶಿಕಾರಿ, ಸೊನ್ನಲಿಗೆ ಸಿದ್ಧರಾಮ, ಪಳೆಯಂಕರು, ಮನ್ವಂತರ, ಗಾಂಧಿ ಬಂದ, ಮೌನ ಕೋಗಿಲೆ ಮೊದಲಾದ ಚರಿತ್ರಾರ್ಹ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಬೆರಳ್ಗೆ ಕೊರಳ್ ನಾಟಕದ ದ್ರೋಣಾಚಾರ್ಯ, ಶರೀಫ ನಾಟಕದ ಗೋವಿಂದ ಭಟ್ಟ ಪುರುಷ ಪಾತ್ರಗಳಲ್ಲಿಯೂ ಅಭಿನಯಿಸಿಯೂ ಸೈ ಎನಿಸಿದ್ದಾರೆ.
ರಾಜ್ಯ, ರಾಷ್ಟ್ರೀಯ ನಾಟಕಗಳಲ್ಲಿ ಪಾಲ್ಗೊಂಡ ಹನುಮಕ್ಕಗೆ ಮುಂಬೈ ಕನ್ನಡ ಸಂಘ ಸ್ಪರ್ಧೆಯಲ್ಲಿ ಮತ್ತು ರಾಜ್ಯ ನಾಟಕ ಸ್ಪರ್ಧೆಯಲ್ಲಿ ಎರಡು ಬಾರಿ ಅತ್ಯುತ್ತಮ ನಟಿ ಪ್ರಶಸ್ತಿ, ಕನ್ನಡ ಕಲಾ ಸಂಘದ ಟಿ.ಪಿ. ಕೈಲಾಸಂ ಪ್ರಶಸ್ತಿ, ಕೊಟ್ಟೂರು ನಾಗರಿಕರಿಂದ, ಕೂಡ್ಲಿಗಿ ಪೊಲೀಸ್ ಇಲಾಖೆಯಿಂದ ರಂಗ ಗೌರವ, 2017ರ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸಂದಿವೆ.