ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಇಂದಿನ ಒತ್ತಡ ಮಯ ಜೀವನ ಮತ್ತು ಬದಲಾದ ಆಹಾರ ಪದ್ಧತಿಯಿಂದ ಬಿಪಿ, ಶುಗರ್, ಅಸ್ತಮಾ, ಬೊಜ್ಜು, ಕ್ಯಾನ್ಸರ್ ಅಂತಹ ಮಾರಕ ಕಾಯಿಲೆಗಳು ಹೆಚ್ಚಾಗುತ್ತಿವೆ. ನಮ್ಮ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಬದಲಿಸಿಕೊಂಡು ಪ್ರತಿದಿನ ಯೋಗ, ಧ್ಯಾನ, ಪ್ರಾಣಾಯಾಮಗಳನ್ನು ರೂಢಿಸಿಕೊಳ್ಳುವ ಮೂಲಕ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಶಾಸಕ ಲಕ್ಷ್ಮಣ ಸವದಿ ತಿಳಿಸಿದರು.ಪಟ್ಟಣದ ಕೆಎಲ್ಇ ಸಂಸ್ಥೆಯ ಎಸ್ಎಸ್ಎಂಎಸ್ ಮಹಾವಿದ್ಯಾಲಯದ ಆವರಣದಲ್ಲಿ ತಾಲೂಕು ಆಡಳಿತ, ಪತಂಜಲಿ ಯೋಗ ಸಮಿತಿ ಹಾಗೂ ವಿವಿಧ ಶಾಲಾ ಕಾಲೇಜುಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯೋಗ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗದೆ, ಪ್ರತಿದಿನ ಒಂದು ಗಂಟೆ ನಮ್ಮ ದೇಹ ಮತ್ತು ಮನಸ್ಸಿನ ಆರೋಗ್ಯಕ್ಕಾಗಿ ಮೀಸಲೀಡಬೇಕು. ಪ್ರತಿದಿನ ತಪ್ಪದೇ ಯೋಗ ಅಭ್ಯಾಸ ರೂಡಿಸಿಕೊಳ್ಳುವ ಮೂಲಕ ಆರೋಗ್ಯವೇ ಭಾಗ್ಯ ಎಂಬ ಸಂಪತ್ತು ಕಾಪಾಡಿಕೊಳ್ಳಬೇಕು. ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಯೋಗ ದಿವ್ಯ ಔಷಧಿಯಾಗಿದೆ. ಪ್ರತಿದಿನ ಯೋಗವನ್ನು ರೂಡಿಸಿಕೊಳ್ಳುವ ಮೂಲಕ ಆರೋಗ್ಯವಂತ ಸಮಾಜ ಕಟ್ಟಲು ಕೈಜೋಡಿಸಬೇಕು ಎಂದು ಹೇಳಿದರು.
ಅಂತಾರಾಷ್ಟ್ರೀಯ ಯೋಗಪಟು ಭವರ ಲಾಲ್ ಆರ್ಯ ಮಾತನಾಡಿ, ಮಾನವನ ದೇಹ ಮತ್ತು ಮನಸ್ಸಿಗೆ ಯೋಗ ಶ್ರೇಷ್ಠವಾದ ಉಡುಗೊರೆ. ಪತಂಜಲಿ ಯೋಗ ಪೀಠದ ಬಾಬಾ ರಾಮದೇವ್ ರವರ ಕನಸಿನಂತೆ ಯೋಗ ವಿಶ್ವಮಯವಾಗಬೇಕು. ಆರೋಗ್ಯವಂತ ಮತ್ತು ಸದೃಢ ಸಮಾಜ ಕಟ್ಟಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಯೋಗವನ್ನು ರೂಡಿಸಿಕೊಂಡು, ಸಾತ್ವಿಕ ಆಹಾರ, ಶುದ್ಧವಾದ ನೀರು ಮತ್ತು ಆಮ್ಲಜನಕ ಸೇವನೆ ಮಾಡಿದಾಗ ಆರೋಗ್ಯವಂತ ಸಮಾಜ ಕಟ್ಟಲು ಸಾಧ್ಯವಿದೆ ಎಂದು ಹೇಳುವ ಮೂಲಕ ಯೋಗ ಪ್ರಾತ್ಯಕ್ಷತೆ ಮಾರ್ಗದರ್ಶನ ನೀಡಿದರು.ಈ ವೇಳೆ ಉದ್ಯಮಿ, ಸಮಾಜಸೇವಕ ರಫೀಕ್ ಡಾಂಗೆಗೆ ಸಮಾಜ ಸೇವ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಯೋಗ ಶಿಕ್ಷಕರಿಗೆ ಸನ್ಮಾನಿಸಲಾಯಿತು.
ಪುರಸಭೆ ಅಧ್ಯಕ್ಷ ಶಿವಲೀಲಾ ಬೂಟಾಳಿ, ಉಪಾಧ್ಯಕ್ಷ ಭುವನೇಶ್ವರಿ ಯಕ್ಕಂಚಿ, ಹಿರಿಯ ವೈದ್ಯ ಮಲ್ಲಿಕಾರ್ಜುನ ಹಂಜಿ, ತಹಸೀಲ್ದಾರ್ ಸಿದ್ದರಾಯ ಬೋಸಗಿ, ತಾಪಂ ಅಧಿಕಾರಿ ಶಿವಾನಂದ ಕಲ್ಲಾಪುರ, ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ, ಅಭಿಯಂತರು ವೀರಣ್ಣ ವಾಲಿ, ಪ್ರವೀಣ್ ಹುಣಸಿಕಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಮೋರಟಗಿ, ಸಿಪಿಐ ಸಂತೋಷ ಹಳ್ಳೂರ, ಪತಂಜಲಿ ಯೋಗ ಪೀಠದ ಎಸ್.ಕೆ.ಹೊಳೆಪ್ಪನವರ, ಎ.ಬಿ.ಪಾಟೀಲ, ಶಿವಾನಂದ ಬುರ್ಲಿ, ಸುರೇಶ ಚಿಕ್ಕಟ್ಟಿ, ಶಿವಾನಂದ ಮಾಲಗಾವಿ, ರಾಮಣ್ಣ ದರಿಗೌಡ, ದೇವಿಂದ್ರ ಬಿಸ್ವಾಗರ, ಡಾ.ವಿನಾಯಕ ಚಿಂಚೋಳಿ ಮಠ, ರೋಹಿಣಿ ಯಾದವಾಡ, ಅಂಬಿಕಾ ಹೂಟಿ, ಉಜ್ವಲ ಹಿರೇಮಠ ಸೇರಿ ಯೋಗ ಶಿಬಿರಾರ್ಥಿಗಳು, ತಾಲೂಕು ಅಧಿಕಾರಿಗಳು, ವಿವಿಧ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಯೋಗ ದಿನಾಚರಣೆ ಪ್ರಾತ್ಯಕ್ಷತೆಯಲ್ಲಿ ಪಾಲ್ಗೊಂಡಿದ್ದರು.ದಾವಣಗೆರೆ ಬೆಣ್ಣೆ ದೋಸೆ ಸವಿದ ವಿದ್ಯಾರ್ಥಿಗಳು:ಅಥಣಿ ಪಟ್ಟಣದ ಶ್ರೀ ಶಿವಯೋಗಿ ಮುರುಘೇಂದ್ರ ಸ್ವಾಮಿ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ತಾಲೂಕುಮಟ್ಟದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಮುಗಿದ ನಂತರ ಶಾಸಕ ಲಕ್ಷ್ಮಣ ಸವದಿ ಉಪಹಾರದ ವ್ಯವಸ್ಥೆ ಮಾಡಿದ್ದರು.
ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಜನರು ದಾವಣಗೆರೆ ಬೆಣ್ಣೆ ದೋಸೆ ಸವಿದು ಶಾಸಕರ ಕಾರ್ಯ ಪ್ರಶಂಶಿಸಿದರು.