ಜ. 21ಕ್ಕೆ ಶಿರಸಿಯಲ್ಲಿ ಹವ್ಯಕ ಮಹಾ ಸಭಾದಿಂದ ‘ಪ್ರತಿಬಿಂಬ’

| Published : Jan 12 2024, 01:46 AM IST

ಸಾರಾಂಶ

ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಕಾಸರಗೋಡು, ಬೆಂಗಳೂರು ಜಿಲ್ಲೆಗಳಲ್ಲಿ ಪ್ರಾಂತ್ಯದ ಸ್ಪರ್ಧೆ ನಡೆಸಿ ವಿಜೇತರನ್ನು ಬೆಂಗಳೂರಿನಲ್ಲಿ ನಡೆಯುವ ಪ್ರತಿಬಿಂಬ ಮೆಘಾ ಫೈನಲ್‌ಗೆ ಆಹ್ವಾನಿಸಿ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶ ಮಹಾಸಭೆಯದ್ದು.

ಶಿರಸಿ:

ಅಖಿಲ ಹವ್ಯಕ ಮಹಾ ಸಭಾದಿಂದ ಹವ್ಯಕ ಸಮಾಜದ ಪ್ರತಿಭೆಗಳ ಅನಾವರಣ, ಸಾಧನೆಗೆ ಸಮ್ಮಾನ, ವಿದ್ಯಾ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮ ಜ. 21ರಂದು ನಗರದ ಲಯನ್ಸ್‌ ಶಾಲೆಯ ಸಭಾಭವನದಲ್ಲಿ ಬೆಳಗ್ಗೆ 9.30ರಿಂದ ಸಂಜೆ 6ರ ತನಕ ನಡೆಯಲಿದೆ ಎಂದು ಮಹಾಸಭೆ ನಿರ್ದೇಶಕ ಶಶಾಂಕ ಹೆಗಡೆ ಶೀಗೇಹಳ್ಳಿ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಪ್ರತಿಬಿಂಬ ಕಾರ್ಯಕ್ರಮದಲ್ಲಿ ಅನೇಕ ವಿಶೇಷತೆಗಳಿವೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಕಾಸರಗೋಡು, ಬೆಂಗಳೂರು ಜಿಲ್ಲೆಗಳಲ್ಲಿ ಪ್ರಾಂತ್ಯದ ಸ್ಪರ್ಧೆ ನಡೆಸಿ ವಿಜೇತರನ್ನು ಬೆಂಗಳೂರಿನಲ್ಲಿ ನಡೆಯುವ ಪ್ರತಿಬಿಂಬ ಮೆಘಾ ಫೈನಲ್‌ಗೆ ಆಹ್ವಾನಿಸಿ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶ ಮಹಾಸಭೆಯದ್ದಾಗಿದೆ. ಪ್ರಾಂತ್ಯವಾರು ಪ್ರತಿಬಿಂಬದ ಭಗವದ್ಗೀತೆ, ಭಾವಗೀತೆ, ರಂಗೋಲಿ, ಸಂಪ್ರದಾಯ ಗೀತೆ, ಪಾಯಸ ಕುಡಿಯುವ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಬಹುಮಾನ ಪಡೆದ ಸ್ಪರ್ಧಿಗಳನ್ನು ಪ್ರತಿಬಿಂಬಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದರು.ವಿವಿಧ ಸ್ಪರ್ಧೆ:6 ವರ್ಷದ ಒಳಗಿನ ಮಕ್ಕಳಿಗೆ ಛದ್ಮವೇಷ, ಶ್ಲೋಕ ಪಠಣ, ಚೆಂಡು ಎಸೆತ, 7ರಿಂದ 12 ವರ್ಷದೊಳಗಿನ ಮಕ್ಕಳಿಗೆ 10ನೇ ಅಧ್ಯಾಯದ 15 ಶ್ಲೋಕ, ಹಬ್ಬದ ಕುರಿತಾದ ಚಿತ್ರಕಲೆ, ಕೆರೆದಡ, 13ರಿಂದ 18 ವರ್ಷದ ವರೆಗೆ ಭಾವಗೀತೆ, ಆಶು ಭಾಷಣ, ಸಂಗೀತ ಖುರ್ಚಿ, 18 ವರ್ಷ ಮೇಲ್ಪಟ್ಟು ಸಾಮಾನ್ಯ ವಿಭಾಗದಲ್ಲಿ ಹವಿ ರುಚಿ ಹಲ್ವಾ, 3 ಜನಕ್ಕೆ ಅವಕಾಶ ಇರುವ ಸಂಪ್ರದಾಯ ಗೀತೆ, ಚುಕ್ಕಿ ರಂಗೋಲಿ, ಆರತಿತಟ್ಟೆ, ಪಾಯಸ ಕುಡಿಯುವ ಸ್ಪರ್ಧೆ ನಡೆಯಲಿದೆ. ಚಿತ್ರಕಲೆ ಸ್ಪರ್ಧೆಗೆ ಬಣ್ಣ ಸ್ಪರ್ಧಿಗಳೇ ತರಬೇಕು, ಮನೆಯಲ್ಲಿ ಹಲ್ವಾ, ಆರತಿ ತಟ್ಟೆ ತಯಾರಿಸಿ ತರಬಹುದು, ಎಲ್ಲ ಸ್ಪರ್ಧೆಗಳಿಗೆ ಹವ್ಯಕರಿಗೆ ಮಾತ್ರ ಅವಕಾಶ ಎಂದು ತಿಳಿಸಿದರು.

ಉದ್ಘಾಟನೆ, ಸಮ್ಮಾನ:ಅಂದು ಬೆಳಗ್ಗೆ 9.30ಕ್ಕೆ ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಮಹಾಸಭೆ ಉಪಾಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ವಹಿಸುವರು. ಅತಿಥಿಗಳಾಗಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ, ಸಮಾಜ ಸೇವಕ ಅನಂತಮೂರ್ತಿ ಹೆಗಡೆ, ಲಯನ್ಸ್‌ ಉಪಾಧ್ಯಕ್ಷ ಕೆ.ಬಿ. ಲೋಕೇಶ ಹೆಗಡೆ ಪ್ರಗತಿ ಭಾಗವಹಿಸುವರು. ಬಳಿಕ ವಿವಿಧ ಸ್ಪರ್ಧೆಗಳು ಆರಂಭವಾಗಲಿದೆ.ಸಂಜೆ 4ಕ್ಕೆ ಭಾರ್ಗವ ಹೆಗಡೆ ತಂಡದಿಂದ ಸಿತಾರ ವಾದನ ನಡೆಯಲಿದ್ದು, ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಹಾಸಭೆಯ ಉಪಾಧ್ಯಕ್ಷ ಶ್ರೀಧರ ಜೆ. ಭಟ್ಟ ಕೆಕ್ಕಾರು ವಹಿಸಿಕೊಳ್ಳುವರು. ಅತಿಥಿಗಳಾಗಿ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಶಿವರಾಮ ಹೆಬ್ಬಾರ್, ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಲಯನ್ಸ ಅಧ್ಯಕ್ಷ ಪ್ರಭಾಕರ ಹೆಗಡೆ ಭಾಗವಹಿಸಲಿದ್ದಾರೆ. ಇದೇ ವೇಳೆ ಮಕ್ಕಳ ತಜ್ಞ ಡಾ. ಎನ್.ಆರ್. ಹೆಗಡೆ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಾರಾಯಣ ಪಿ. ಭಾಗವತ್, ಕೃಷಿಕ, ಸಿತಾರ ವಾದಕ ಭಾರ್ಗವ ಹೆಗಡೆ ಶೀಗೇಹಳ್ಳಿ ಹಾಗೂ ಯಕ್ಷಗಾನ ಕಿಶೋರ ಕಲಾವಿದೆ ತುಳಸಿ ಹೆಗಡೆ ಅವಳನ್ನು ಸಮ್ಮಾನಿಸಲಾಗುತ್ತಿದೆ ಎಂದು ತಿಳಿಸಿದರು.ಈ ವೇಳೆ ಪ್ರತಿಬಿಂಬದ ಸಂಚಾಲಕ ವಿ.ಎಂ. ಹೆಗಡೆ ಹಲಗೇರಿ, ಕೆ.ಬಿ.ಲೋಕೇಶ ಹೆಗಡೆ ಇತರರು ಇದ್ದರು.