ಮಹಿಳೆಯರು ಸ್ವಾವಲಂಬಿಗಳಾಗಲು ಪ್ರತಿಮಾ ಸಲಹೆ

| Published : Nov 09 2024, 01:07 AM IST

ಸಾರಾಂಶ

ಹೊಲಿಗೆ ತರಬೇತಿ ಪಡೆದ ಮಹಿಳೆಯರು ಅದರಲ್ಲಿ ಕೌಶಲ್ಯ ಸಾಧಿಸಬೇಕು. ಕೌಶಲ್ಯದಿಂದ ಆರ್ಥಿಕವಾಗಿ ಜೀವನಮಟ್ಟವನ್ನು ಉತ್ತಮಪಡಿಸಿಕೊಳ್ಳಬಹುದು. ಯಾರ ಬಳಿಯೂ ಉದ್ಯೋಗಕ್ಕೆ ಅಂಗಲಾಚದೆ ಸ್ವತಂತ್ರ ಮತ್ತು ಸ್ವಾವಲಂಬಿಯಾಗಿ ಜೀವನ ನಡೆಸಬಹುದು.

ಕನ್ನಡಪ್ರಭ ವಾರ್ತೆ ಮಂಡ್ಯ

ಗ್ರಾಮೀಣ ಭಾಗದ ಮಹಿಳೆಯರು ಹೊಲಿಗೆ, ಕಸೂತಿ ಕೆಲಸದ ತರಬೇತಿ ಪಡೆಯುವ ಮೂಲಕ ಸ್ವಾವಲಂಬಿ ಜೀವನ ನಿರ್ವಹಣೆ ಮಾಡಬೇಕೆಂದು ಮಂಡ್ಯ ಷುಗರ್ ಸಿಟಿ ಲಯನ್ಸ್ ಸರ್ವಿಸ್ ಫೌಂಡೇಷನ್ ಕಾರ್ಯದರ್ಶಿ ಲಯನ್ ಪ್ರತಿಮಾ ರಮೇಶ್ ತಿಳಿಸಿದರು.

ಕೀಲಾರದ ಕ್ಷೀರಸಾಗರ ಸಾಂಸ್ಕೃತಿಕ ಭವನದಲ್ಲಿ ಕ್ಷೀರಸಾಗರ ಮಿತ್ರಕೂಟ ಹಾಗೂ ಮಂಡ್ಯ ಷುಗರ್ ಸಿಟಿ ಲಯನ್ಸ್ ಸರ್ವಿಸ್ ಫೌಂಡೇಷನ್ ವತಿಯಿಂದ ನಡೆಯುತ್ತಿರುವ ಉಚಿತ ಹೊಲಿಗೆ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ ೩ನೇ ತಂಡದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ಹೊಲಿಗೆ ತರಬೇತಿ ಪಡೆದ ಮಹಿಳೆಯರು ಅದರಲ್ಲಿ ಕೌಶಲ್ಯ ಸಾಧಿಸಬೇಕು. ಕೌಶಲ್ಯದಿಂದ ಆರ್ಥಿಕವಾಗಿ ಜೀವನಮಟ್ಟವನ್ನು ಉತ್ತಮಪಡಿಸಿಕೊಳ್ಳಬಹುದು. ಯಾರ ಬಳಿಯೂ ಉದ್ಯೋಗಕ್ಕೆ ಅಂಗಲಾಚದೆ ಸ್ವತಂತ್ರ ಮತ್ತು ಸ್ವಾವಲಂಬಿಯಾಗಿ ಜೀವನ ನಡೆಸಬಹುದು ಎಂದು ನುಡಿದರು.

ಹೊಲಿಗೆ ತರಬೇತಿ ಕಲಿತಿರುವ ಬಹುತೇಕ ಮಹಿಳೆಯರು ತಮ್ಮ ಹಾಗೂ ತಮ್ಮ ಮಕ್ಕಳ ಬಟ್ಟೆಗಳನ್ನು ತಾವೇ ಹೊಲಿದು ಕೊಳ್ಳುತ್ತಿರುವುದನ್ನು ಕೇಳಿ ಸಂತೋಷವಾಯಿತು. ಲಯನ್ಸ್ ಸಂಸ್ಥೆಯ ಮೂಲಕವೂ ಈ ಕೇಂದ್ರಕ್ಕೆ ಇನ್ನೂ ಹೆಚ್ಚಿನ ನೆರವು ನೀಡುವುದಾಗಿ ತಿಳಿಸಿದರು.

ಕ್ಷೀರಸಾಗರ ಮಿತ್ರಕೂಟದ ಪೋಷಕ ಡಿ.ಶಿವರಾಜು ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಸ್ಥೆಯು ಸಣ್ಣದಾಗಿ ಪ್ರಾರಂಭವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಇಡೀ ಜಿಲ್ಲೆಯಲ್ಲಿ ಮನೆ ಮಾತಾಗಿದೆ. ಪ್ರಸ್ತುತ ಸಂಸ್ಥೆಯು ಬೆಳ್ಳಿ ಹಬ್ಬ ಆಚರಣೆಯ ಸಂದರ್ಭದಲ್ಲಿ ಇಡೀ ವರ್ಷಪೂರ್ತಿ ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಸ್ನಾತಕೋತ್ತರ ಪದವಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಗ್ರಾಮದ ಅನಿತಾ ಮತ್ತು ಕೃಷ್ಣೇಗೌಡ ಅವರ ಮಗಳು ಡಾ.ತನ್ಮಯಿ ಕೃಷ್ಣ ಹಾಗೂ ಕ್ಷೀರಸಾಗರ ಮಿತ್ರಕೂಟದ ಸಂಸ್ಥಾಪಕ ಸದಸ್ಯ ಕೆ.ಸಿ.ಉಪೇಂದ್ರಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಆರ್.ಶಿವಶಂಕರ್, ಲಯನ್ ನಿತ್ಯಾನಂದ, ಕೆ.ಅರ್.ರಾಧಾ ಪುರುಷೋತ್ತಮ, ಬಿ.ಜೆ.ಪಿ.ಮುಖಂಡರಾದ ಕೆ.ಚಂದ್ರಶೇಖರ್, ಮಿತ್ರಕೂಟದ ಗೌರವಾಧ್ಯಕ್ಷ ಕೆ.ಪಿ.ವೀರಪ್ಪ, ಅಧ್ಯಕ್ಷರಾದ ಕೆ.ಜಯಶಂಕರ್, ಕಾರ್ಯದರ್ಶಿ ಕಾಳಮ್ಮನ ನಾಗೇಶ್ ಸಂಚಾಲಕ ಕೆ.ಎಂ.ಕೃಷ್ಣೇಗೌಡ, ಆಡಳಿತ ಮಂಡಳಿ ಸದಸ್ಯರಾದ ಕೆ.ಅರ್.ರಮೇಶ್, ಕೆ.ವಿ.ಮಂಚೇಗೌಡ, ಚೌಡೇಗೌಡ, ಕೆ.ಎಚ್.ರಮೇಶ್, ಕೆ.ಎಂ.ಶಿವಣ್ಣ, ಹೊಲಿಗೆ ತರಬೇತಿ ಶಿಕ್ಷಕಿ ವಿನುತ. ಇದ್ದರು.