ಎಸ್.ಎಂ. ಸೈಯದ್

ಗಜೇಂದ್ರಗಡ: ಈತನ ತಂದೆ- ತಾಯಿ ಕಡುಬಡವರು. ಕೃಷಿ ಕಾಯಕ ಮಾಡುತ್ತಾರೆ. ವಿದ್ಯಾರ್ಥಿಗೆ ಓದಿನಲ್ಲಿ ಎಲ್ಲಿಲ್ಲದ ಆಸಕ್ತಿ. ಟ್ಯೂಷನ್‌ ಹೋಗಲು ಹಣಕಾಸಿನ ಅಡಚಣೆ. ಆದರೂ ಈತ ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ಗದಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ.

ತಾಲೂಕಿನ ಇಟಗಿ ಗ್ರಾಮದ ಪಿಎಂಶ್ರೀ ಆದರ್ಶ ವಿದ್ಯಾಲಯದ ವಿದ್ಯಾರ್ಥಿ ಪ್ರವೀಣಕುಮಾರ ಸೊಬಗಿನ (೬೨೫ಕ್ಕೆ ೬೨೨ ಅಂಕ) ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ. ಸೂಡಿ ಗ್ರಾಮದ ಕಡುಬಡತನದಲ್ಲಿ ಜನಿಸಿರುವ ಪ್ರವೀಣಕುಮಾರ ಈರಪ್ಪ ಸೊಬಗಿನ ಮನೆಯ ಹಿರಿಯ ಮಗ. ತಂದೆ ೨ನೇ ತರಗತಿಯ ವರೆಗೆ ಓದಿದ್ದಾರೆ. ತಾಯಿ ಅನಕ್ಷರಸ್ಥೆ.

ಈ ಶಾಲೆಯಲ್ಲಿ ಒಟ್ಟು ೭೮ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ನೂರಕ್ಕೆ ನೂರು ಫಲಿತಾಂಶವಾಗಿದೆ. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಮುಖ್ಯೋಪಾಧ್ಯಾಯರು, ಎಸ್‌ಡಿಎಂಸಿ ಹಾಗೂ ಸಹ ಶಿಕ್ಷಕರು ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಉತ್ತಮ ಫಲಿತಾಂಶ: ಶಿಸ್ತು ಹಾಗೂ ಅಧ್ಯಯನದ ಬಗೆಗಿನ ಇಚ್ಛಾಶಕ್ತಿಯಿಂದಾಗಿ ಉತ್ತಮ ಸಾಧನೆ ಮಾಡುವ ವಿದ್ಯಾರ್ಥಿ ಎಂದು ಗುರುತಿಸಿಕೊಂಡಿದ್ದ ಪ್ರವೀಣಕುಮಾರ ಸೊಬಗಿನ ನಿರೀಕ್ಷೆಯಂತೆ ಉತ್ತಮ ಫಲಿತಾಂಶ ಮಾಡಿದ್ದಾನೆ ಎಂದು ಪಿಎಂಶ್ರೀ ಆದರ್ಶ ವಿದ್ಯಾಲಯದ ಮುಖ್ಯೋಪಾಧ್ಯಾಯರಾದ ಫರೀದಾಬೇಗಂ ಡಾಲಾಯತ್ ತಿಳಿಸಿದರು.


ಖುಷಿ ತಂದಿದೆ: ನಾವು ರೈತರು ಮಗನಿಗೆ ಚೆನ್ನಾಗಿ ಓದು ಎಂದು ಹೇಳುತ್ತಿದ್ದೆವು ಅಷ್ಟೇ. ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವುದು ಖುಷಿ ತಂದಿದೆ. ಎಂಜಿನಿಯರ್ ಓದುವ ಕನಸು ಹೊತ್ತಿರುವ ಮಗನಿಗೆ ಕೈಲಾದಷ್ಟು ಓದಿಸುತ್ತೇವೆ ಎಂದು ಸಾಧನೆಗೈದ ವಿದ್ಯಾರ್ಥಿಯ ತಾಯಿ ಲಲಿತಾ ಈರಪ್ಪ ಸೊಬಗಿನ ತಿಳಿಸಿದರು.ಎಸ್ಸೆಸ್ಸೆಲ್ಸಿಯಲ್ಲಿ ಮುಂಡರಗಿ ತಾಲೂಕು ಜಿಲ್ಲೆಗೆ ಪ್ರಥಮ: ಹರ್ಷ

ಮುಂಡರಗಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕು ಉತ್ತಮ ಫಲಿತಾಂಶ ಗಳಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ಹಾಗೂ ಶಿಕ್ಷಕರು ಶ್ರಮಿಸಿದ್ದರ ಫಲವಾಗಿ ಮುಂಡರಗಿ ತಾಲೂಕು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ ಎಂದು ಶಿಕ್ಷಣಾಭಿಮಾನಿ, ಯುವ ಮುಖಂಡ ಆನಂದಗೌಡ ಪಾಟೀಲ ಹರ್ಷ ವ್ಯಕ್ತಪಡಿಸಿದ್ದಾರೆ.ಈ ಕುರಿತು ಗುರುವಾರ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳಿಗಾಗಿ ಶಾಲಾ ಅವಧಿಯ ನಂತರ ವಿಶೇಷ ತರಗತಿ ನಡೆಸಿ ಪಾಠ ಮಾಡಿಸಿದ್ದಾರೆ. ವಿವಿಧ ಪ್ರಶ್ನೆಪತ್ರಿಕೆ ಬಿಡಿಸುವ ಕಾರ್ಯಾಗಾರ ಏರ್ಪಡಿಸಿದ್ದಾರೆ. ಮನೆ ಮನೆ ಭೇಟಿ ನೀಡಿ ವಿದ್ಯಾರ್ಥಿಗಳು ಓದುವ ಕುರಿತು ವಿಚಾರಿಸಿದ್ದಾರೆ. ವಿದ್ಯಾರ್ಥಿಗಳಿಗೆ ಏನಾದರೂ ಗೊಂದಲವಿದ್ದರೆ ಅದನ್ನು ಸ್ಥಳದಲ್ಲಿಯೇ ಪರಿಹರಿಸಿದ್ದಾರೆ.ಬರದೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪಲ್ಲವಿ ಹಳ್ಳಿಕೇರಿಗೆ ಮನವೊಲಿಸಿ ಪರೀಕ್ಷಗೆ ಹಾಜರಾಗುವಂತೆ ಮಾಡಿದ್ದರ ಪರಿಣಾಮ ಇಂದು ಆ ವಿದ್ಯಾರ್ಥಿನಿ ಉತ್ತಮ ಫಲಿತಾಂಶ ಪಡೆದಿದ್ದಾಳೆ. ಈ ಎಲ್ಲ ಸಾಧನೆಗೆ ಕಾರಣೀಕರ್ತರಾದ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಎಲ್ಲ ಶಿಕ್ಷಕರರನ್ನು ಅಭಿನಂದಿಸಿದ್ದಾರೆ.