ರಂಜಾನ್ ಹಬ್ಬದ ಅಂಗವಾಗಿ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಶ್ರದ್ಧಾ-ಭಕ್ತಿಯಿಂದ ಶನಿವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ರಂಜಾನ್ ಹಬ್ಬದ ಅಂಗವಾಗಿ ವಿಶೇಷ ದಿರಿಸಿನಲ್ಲಿ ಮೈದಾನಕ್ಕೆ ಆಗಮಿಸಿದ್ದ ಮುಸ್ಲಿಮರು ಪರಸ್ಪರ ಆಲಿಂಗನ ಮಾಡುವ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿದರು.

ಹುಬ್ಬಳ್ಳಿ: ರಂಜಾನ್ ಹಬ್ಬದ ಅಂಗವಾಗಿ ಇಲ್ಲಿಯ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಶ್ರದ್ಧಾ-ಭಕ್ತಿಯಿಂದ ಶನಿವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಮುಸ್ಲಿಂ ಸಮಾಜದ ಧರ್ಮಗುರು ಮೌಲಾನಾ ಜಹೀರ್ ಉದ್ದೀನ್ ಖಾಜಿ ಸಾನ್ನಿಧ್ಯದಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿ, ನಾಡಿನ ಒಳಿತಿಗೆ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಕುರಾನ್ ಪಠಣದೊಂದಿಗೆ ವಿಶೇಷ ಪ್ರಾರ್ಥನೆ ನಡೆಸಿ ವಿಶ್ವದೆಲ್ಲೆಡೆ ಸುಖ, ಶಾಂತಿ ಮತ್ತು ನೆಮ್ಮದಿ ನೆಲೆಸಲಿ, ನಾಡಿನಲ್ಲಿ ಉತ್ತಮ ಮಳೆ- ಬೆಳೆಯಾಗಿ ರೈತರು ಸುಭಿಕ್ಷವಾಗಿರಲಿ, ಸಾಮರಸ್ಯ ಮತ್ತು ಸಹಬಾಳ್ವೆ ವೃದ್ಧಿಸಲಿ ಎಂದು ಹಾರೈಸಿದರು.

ರಂಜಾನ್ ಹಬ್ಬದ ಅಂಗವಾಗಿ ವಿಶೇಷ ದಿರಿಸಿನಲ್ಲಿ ಮೈದಾನಕ್ಕೆ ಆಗಮಿಸಿದ್ದ ಮುಸ್ಲಿಮರು ಪರಸ್ಪರ ಆಲಿಂಗನ ಮಾಡುವ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿದರು. ಇದೇ ವೇಳೆ ಕೆಲ ಮುಖಂಡರು ಸಾರ್ವಜನಿಕರು ಷರಬತ್‌, ಹಣ್ಣು-ಹಂಪಲು ವಿತರಣೆ ಮಾಡಿದರು. ಆನಂತರ ಪ್ರತಿವರ್ಷದಂತೆ ಶಾಂತಿ, ಸೌಹಾರ್ದತೆ ದೃಷ್ಟಿಯಿಂದ ಮೂರುಸಾವಿರ ಮಠಕ್ಕೆ ತೆರಳಿ ಶ್ರೀಗಳ ಗದ್ದುಗೆಗೆ ನಮಸ್ಕರಿದರು.

ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತಾಫ್‌ ಹಳ್ಳೂರ, ದಾವಸಾಬ ನದಾಫ್‌, ಹುಡಾ ಮಾಜಿ ಅಧ್ಯಕ್ಷ ಅನ್ವರ ಮುಧೋಳ, ಮಜಾರ್‌ಖಾನ್, ಬಾಬಾಜಾನ್ ಮುಧೋಳ, ಆಸ್ಪಾಕ್ ಕುಮಟಾಕರ, ಶಫಿ ಮುದ್ದೇಬಿಹಾಳ, ಮುನಾರ ದೇವಗಿರಿ, ವೌಲಾಸೌಬ್ ನದಾಫ್‌ ಇದ್ದರು.

ಹಳೇಹುಬ್ಬಳ್ಳಿಯಲ್ಲಿ ಪ್ರಾರ್ಥನೆ: ಹಳೇಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿಯೂ ರಂಜಾನ್ ಹಬ್ಬದ ಅಂಗವಾಗಿ ವೌಲಾನಾ ನಯೀಮುದ್ದೀನ್ ಅಶ್ರಫಿ ಅವರ ನೇತೃತ್ವದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಅಂಜುಮನ್ ಇಸ್ಲಾಂ ಸಂಸ್ಥೆ ಮಾಜಿ ಉಪಾಧ್ಯಕ್ಷ ಅಲ್ತಾಫ್‌ ಕಿತ್ತೂರ, ಬಶೀರ್ ಹಳ್ಳೂರ, ರಫೀಕ್ ಬಂಕಾಪುರ, ಅಹ್ಮದ್‌ರಜಾ ಕಿತ್ತೂರು, ಗೈಬು ಹೊನ್ಯಾಳ, ಶೋಯಬ್ ಮಿರ್ಜಾ, ಯೂಸೂಫ್‌ ಬಳೆವಾಲೆ, ಜಾಕೀರ್ ಖತೀಬ್, ಮೊಹಮ್ಮದ್‌ ರೆಹಮಾನ್ ಕಿತ್ತೂರು, ಇಮಾಮಸಾಬ್ ಮಡ್ಕಿ ಇದ್ದರು.