ಸಾರಾಂಶ
ತಾಲೂಕಿನ ಎಲ್ಲ ಅಂಗನವಾಡಿ ಕೇಂದ್ರಗಳು ಮೂಲಭೂತ ಸೌಕರ್ಯ ಹಾಗೂ ಶಾಲಾಪೂರ್ವ ಶಿಕ್ಷಣ ಕಲಿಕೆಯಲ್ಲಿ ಇಡೀ ದೇಶಕ್ಕೆ ಮಾದರಿ ಆಗಿವೆ ಎಂದು ಶಿವಮೊಗ್ಗ ಜಿಲ್ಲೆಯ ಸಂಪನ್ಮೂಲ ತಂಡದ ಮುಖ್ಯಸ್ಥೆ ರೇಣುಕಾ ಎಸ್. ಹೇಳಿದರು.
ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಶಿವಮೊಗ್ಗ ಜಿಲ್ಲಾ ತಂಡ ಭೇಟಿ, ಸಮಾಲೋಚನೆ ಕನ್ನಡಪ್ರಭ ವಾರ್ತೆ ಯಲಬುರ್ಗಾ
ತಾಲೂಕಿನ ಎಲ್ಲ ಅಂಗನವಾಡಿ ಕೇಂದ್ರಗಳು ಮೂಲಭೂತ ಸೌಕರ್ಯ ಹಾಗೂ ಶಾಲಾಪೂರ್ವ ಶಿಕ್ಷಣ ಕಲಿಕೆಯಲ್ಲಿ ಇಡೀ ದೇಶಕ್ಕೆ ಮಾದರಿ ಆಗಿವೆ ಎಂದು ಶಿವಮೊಗ್ಗ ಜಿಲ್ಲೆಯ ಸಂಪನ್ಮೂಲ ತಂಡದ ಮುಖ್ಯಸ್ಥೆ ರೇಣುಕಾ ಎಸ್. ಹೇಳಿದರು.ತಾಲೂಕಿನ ನಾನಾ ಅಂಗನವಾಡಿ ಕೇಂದ್ರಗಳಿಗೆ ಜಿಲ್ಲೆಯ ಶಾಲಾ ಪೂರ್ವ ಶಿಕ್ಷಣ ವ್ಯವಸ್ಥೆ ಕಾರ್ಯಕ್ರಮಗಳ ಕುರಿತು ವೀಕ್ಷಣೆಗಾಗಿ ಶಿವಮೊಗ್ಗ ಜಿಲ್ಲೆಯಿಂದ ಭೇಟಿ ನೀಡಿದ್ದ ಅವರು ಮಾತನಾಡಿದರು.
ಕೊಪ್ಪಳ ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಅಪೌಷ್ಟಿಕ ನಿವಾರಣೆಗೆ ಒತ್ತು ಕೊಟ್ಟಿದ್ದಾರೆ. ಮಕ್ಕಳ ಬಲವರ್ಧನೆಗೆ ಶ್ರಮಿಸಿರುವ ಕಾರ್ಯ ಶ್ಲಾಘನೀಯವಾಗಿದ್ದು, ಇಲ್ಲಿಯ ಕೇಂದ್ರಗಳ ರೀತಿ ಶಿವಮೊಗ್ಗ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಲು ವರದಿ ತಯಾರಿಸುತ್ತೇವೆ ಎಂದರು.ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೆಟದಪ್ಪ ಮಾಳೆಕೊಪ್ಪ ಮಾತನಾಡಿ, ಯಲಬುರ್ಗಾ ಹಾಗೂ ಕುಕುನೂರು ತಾಲೂಕಿನ ಎಲ್ಲ ಅಂಗನವಾಡಿಗಳಿಂದಲೇ ಕಲಿಕೆ ಆರಂಭಿಸಿದ್ದೇವೆ. ಶಾಲಾ ಶಿಕ್ಷಣದ ಪೂರ್ವದಲ್ಲಿ ಕಲಿಕೆಯೆಡೆಗೆ ಮಗುವಿನ ಆಸಕ್ತಿ ಹೆಚ್ಚಿಸುವುದು, ವಯಸ್ಸಿಗೆ ಹಾಗೂ ಸಾಮರ್ಥ್ಯಕ್ಕೆನುಗುಣವಾಗಿ ಮಗುವಿಗೆ ಅಗತ್ಯ ಜ್ಞಾನ ನೀಡುವುದು, ಸಾಮಾಜಿಕವಾಗಿ ಬೆರೆಯುವಿಕೆ, ಔಪಚಾರಿಕ ಶಿಕ್ಷಣಕ್ಕೆ ಮಾನಸಿಕವಾಗಿ ಹಾಗೂ ಬೌದ್ಧಿಕವಾಗಿ ಮಗುವನ್ನು ಸಿದ್ಧಗೊಳಿಸುವಿಕೆ ಪ್ರಕ್ರಿಯೆ ಅಂಗನವಾಡಿ ಕಾರ್ಯಕರ್ತೆಯರಿಂದ ನಡೆಸಲಾಗುತ್ತಿದೆ ಎಂದು ಹೇಳಿದರು.
ಇಲ್ಲಿಯ ಅಂಗನವಾಡಿ ಸಿಬ್ಬಂದಿಗೆ ೬ ಹಂತದ ತರಬೇತಿ ನೀಡಲಾಗಿದ್ದು, ಸ್ಥಳೀಯವಾಗಿ ಸಿಗುವ ಸಂಪನ್ಮೂಲ ಬಳಸಿಕೊಂಡು ಮಕ್ಕಳಿಗೆ ಬಣ್ಣ, ಪ್ರಾಣಿ, ಆಕಾರಗಳ ಗುರುತಿಸುವಿಕೆ, ಗಣಿತದ ಆಕಾರಗಳ ಗ್ರಹಿಸುವಿಕೆ ಮುಂತಾದವುಗಳನ್ನು ತಿಳಿಸಿಕೊಡಲಾಗುತ್ತದೆ. ಯಲಬುರ್ಗಾ ತಾಲೂಕಿನಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ದೂರ ಆಗುತ್ತಿದ್ದು, ಅಂಗನವಾಡಿ ಕೇಂದ್ರಗಳಿಗೆ ನೀಡುವ ಪೂರಕ ಪೌಷ್ಟಿಕ ಆಹಾರ ಒಳ್ಳೆಯ ಗುಣಮಟ್ಟದಿಂದ ಕೂಡಿದೆ ಎಂದು ತಂಡದ ಸದಸ್ಯರಿಗೆ ವಿವರಿಸಿದರು.ಈ ಸಂದರ್ಭ ಅಂಗನವಾಡಿ ಮೇಲ್ವಿಚಾರಕಿಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ ಇದ್ದರು.