ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ಶಿಕ್ಷಕರು ನಿವೃತ್ತಿ ಬಳಿಕ ಏಕಾಂತದಲ್ಲಿ ಅನುಭವಿಸುವ ಸಂಕಟದಂತೆ, ಕಲಾವಿದರೂ ರಂಗಸ್ಥಳದಲ್ಲಿ ಕಲಾಸೇವೆಗೈದು ವಯಸ್ಸಾದ ಬಳಿಕ ನಿವೃತ್ತರಾಗಿರುತ್ತಾರೆ. ಆ ಸಂದರ್ಭ ಅವರನ್ನು ಕುಟುಂಬದ ಸದಸ್ಯರಂತೆ ಮಾತಾಡಿಸುವ ಚಿಂತನೆ ನಿಜಕ್ಕೂ ಶ್ಲಾಘನೀಯ. ಈ ಸಂಪ್ರದಾಯ ನಿರಂತರವಾಗಿರಲಿ ಎಂದು ಉಡುಪಿ ಕಲಾ ರಂಗದ ಕಾರ್ಯದರ್ಶಿ ಮುರಲಿ ಕಡೇಕಾರ್ ಹೇಳಿದರು.

ಮೂಲ್ಕಿ: ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ಶಿಕ್ಷಕರು ನಿವೃತ್ತಿ ಬಳಿಕ ಏಕಾಂತದಲ್ಲಿ ಅನುಭವಿಸುವ ಸಂಕಟದಂತೆ, ಕಲಾವಿದರೂ ರಂಗಸ್ಥಳದಲ್ಲಿ ಕಲಾಸೇವೆಗೈದು ವಯಸ್ಸಾದ ಬಳಿಕ ನಿವೃತ್ತರಾಗಿರುತ್ತಾರೆ. ಆ ಸಂದರ್ಭ ಅವರನ್ನು ಕುಟುಂಬದ ಸದಸ್ಯರಂತೆ ಮಾತಾಡಿಸುವ ಚಿಂತನೆ ನಿಜಕ್ಕೂ ಶ್ಲಾಘನೀಯ. ಈ ಸಂಪ್ರದಾಯ ನಿರಂತರವಾಗಿರಲಿ ಎಂದು ಉಡುಪಿ ಕಲಾ ರಂಗದ ಕಾರ್ಯದರ್ಶಿ ಮುರಲಿ ಕಡೇಕಾರ್ ಹೇಳಿದರು. ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ನಿವೃತ್ತರಾಗಿರುವ 70 ವರ್ಷ ಮೀರಿದ ಕಲಾವಿದರ ಮನೆಗೆ ಭೇಟಿ ನೀಡಿ ಅವರೊಂದಿಗೆ ಒಂದಿಷ್ಟು ಹೊತ್ತು ಕಾಲ ಕಳೆಯುವ ಕಟೀಲು ಮೇಳದ ಅಭಿಮಾನಿಗಳ ಯಕ್ಷ ಕುಶಲೋಪರಿ-ಸುಹೃದಯಾನಕ್ಕೆ ಚಾಲನೆ ನೀಡಿ, ಕಲಾವಿದರಿಗೆ ನೀಡುವ ಶ್ರೀದೇವರ ಪ್ರಸಾದ, ಗೌರವ ಧನ ಇತ್ಯಾದಿಗಳನ್ನು ಕಟೀಲು ಮೇಳದ ಅಭಿಮಾನಿಗಳಿಗೆ ಹಸ್ತಾಂತರಿಸಿ, ಸುಹೃದ್‌ ಯಾನಕ್ಕೆ ಶುಭ ಹಾರೈಸಿದ ಅವರು ತಾನು ಕೂಡ ಹೀಗೆ ಹಿರಿಯ ಕಲಾವಿದರಲ್ಲಿಗೆ ಹೋದಾಗ ವಿದುರನ ಮನೆಗ ಕೃಷ್ಣ ಹೋದಂತೆ ಎಂಬಂತೆ ಕಲಾವಿದರ ಸಂಭ್ರಮವನ್ನು ಅನುಭವಿಸಿದವ. ಕಟೀಲು ಮೇಳಗಳು ಯಾವತ್ತಿಗೂ ತೆರೆದುಕೊಂಡ ಮುಕ್ತ ಮನಸ್ಸಿನಿಂದ ಬದಲಾವಣೆಗಳಿಗೆ, ಹೊಸತನಕ್ಕೆ, ಕಲಾವಿದರೆಡೆಗೆ ಕಾಳಜಿಗೆ, ಯಕ್ಷಗಾನ ಕಲೆಯ ಉಳಿವಿಗೆ ಪ್ರಯತ್ನ ಶೀಲವಾಗಿಯೇ ಇದೆ. ಕಟೀಲು ದೇಗುಲ ಇದಕ್ಕೆ ಪೂರಕವಾಗಿ ಅನೇಕ ಯೋಜನೆಗಳನ್ನು ಮಾಡುತ್ತಲೇ ಬಂದಿರುವುದು ಮಾದರಿ ಎಂದು ಹೇಳಿದರು.ಕಟೀಲು ಕ್ಷೇತ್ರದ ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ, ಕಟೀಲು ದೇವರ ಸೇವೆಯನ್ನು ಯಕ್ಷಗಾನ ಮೂಲಕ ಮಾಡಿದ ಕಲಾವಿದರ ಕುಶಲೋಪರಿಯ ಕಾರ್ಯ ನಿರಂತರವಾಗಬೇಕು. ಇಂತಹ ಯಕ್ಷಗಾನದ ಕಾರ್ಯವನ್ನು ಕಟೀಲು ದೇವಸ್ಥಾನ ನಾನಾ ರೀತಿಯಲ್ಲಿ ಮಾಡುತ್ತ ಬಂದಿದೆ ಎಂದು ಹೇಳಿದರು.

ಈ ಸಂದರ್ಭ ಕಟೀಲು ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಕೊಡೆತ್ತೂರುಗುತ್ತು ಸನತ್‌ ಕುಮಾರ ಶೆಟ್ಟಿ, ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಕಿಶೋರ್ ಕುಮಾರ್ ಶೆಟ್ಟಿ, ಬಿಪಿನ್‌ಚಂದ್ರ ಶೆಟ್ಟಿ, ಪ್ರವೀಣ್‌ದಾಸ್ ಭಂಡಾರಿ ಮತ್ತಿತರರಿದ್ದರು.