ಅಳ್ನಾವರ:
ಸರ್ಕಾರದ ನಿರ್ದೇಶನದಂತೆ ಪ್ರತಿ ರೈತರಿಗೆ ಎಫ್ಐಡಿ, ಆಧಾರ್ ಕಾರ್ಡ್ ಮೇಲೆ ಯೂರಿಯಾ ರಸಗೊಬ್ಬರ ವಿತರಿಸುತ್ತಿದ್ದು ಪ್ರಸಕ್ತ ಮುಂಗಾರು ಹಂಗಾಮಿಗೆ ಅಗತ್ಯಕ್ಕೆ ತಕ್ಕಷ್ಟು ಬಿತ್ತನೆ ಬೀಜ ಮತ್ತು ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ಹೀಗಾಗಿ ರೈತರು ಆತಂಕ ಪಡುವ ಅಗತ್ಯವಿಲ್ಲವೆಂದು ಧಾರವಾಡ ಕೃಷಿ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಾಜಶೇಖರ ಅಣುಗೌಡರ ತಿಳಿಸಿದ್ದಾರೆ.ತಾಲೂಕಿನ ವಿವಿಧ ರಸಗೊಬ್ಬರ ವಿತರಕರ ಅಂಗಡಿಗಳಿಗೆ ಭೇಟಿ ನೀಡಿ ದಾಸ್ತಾನು ಪರಿಶೀಲಿಸಿದ ಅವರು, ಈ ಭಾಗದಲ್ಲಿ ಹಂಗಾಮಿಗೆ ಪೂರಕವಾದ ಹದಬರಿತ ಮಳೆಯಾಗಿದ್ದು ಬಿತ್ತನೆ ಕಾರ್ಯ ಮುಕ್ತಾಯದ ಹಂತಕ್ಕೆ ಬಂದಿದೆ. ಭತ್ತ ಈಗಾಗಲೇ ಮೊಳಕೆ ಒಡೆದು ಭೂಮಿಯ ಮೇಲ್ಭಾಗದಲ್ಲಿ ಕಾಣಿಸುತ್ತಿದೆ. ಹವಾಮಾನ ಉತ್ತಮವಾಗಿದೆ ಎಂದರು.ಅಳ್ನಾವರದ ರೈತ ಸಂಪರ್ಕ ಕೇಂದ್ರದಲ್ಲಿ ಸಾಕಷ್ಟು ಭತ್ತ, ಮೆಕ್ಕೆಜೋಳ, ತೊಗರಿ ಬಿತ್ತನೆ ಬೀಜವಿದ್ದು ರೈತರು ಆತಂಕಗೊಳ್ಳದೆ ಪಡೆಯಬಹುದು ಎಂದ ಅವರು, ಬೆಳೆಗಳಿಗೆ ಅಗತ್ಯಕ್ಕಿಂತ ಹೆಚ್ಚಿಗೆ ರಾಸಾಯನಿಕ ಗೊಬ್ಬರ ಬಳಕೆ ಮಾಡುವುದರಿಂದ ಭೂಮಿಯ ಫಲವತ್ತತೆ ಹಾಳಾಗುತ್ತದೆ. ಸಾವಯವ ಗೊಬ್ಬರದ ಕಡೆಗೆ ಆದ್ಯತೆ ನೀಡಿ ಗುಣಮಟ್ಟದ ಆಹಾರ ಧಾನ್ಯ ಬೆಳೆಯಲು ರೈತರು ಮುಂದಾಗಬೇಕು ಎಂದರು. ರಸಗೊಬ್ವರ ಬಳಕೆ ಕಡಿಮೆಯಾದಂತೆ ಆರ್ಥಿಕ ಸಮತೋಲನ ಕಾಯ್ದುಕೊಳ್ಳಬಹುದಾಗಿದೆ ಎಂದು ರೈತರಿಗೆ ತಿಳಿಸಿದರು.
ರಸಗೊಬ್ವರ ವ್ಯಾಪಾರಸ್ಥರು ರೈತರಿಂದ ದೂರು ಬಾರದಂತೆ ನೋಡಿಕೊಳ್ಳಬೇಕು. ಇಲಾಖೆಯ ನಿರ್ದೇಶನದಂತೆ ಗೊಬ್ಬರ ಮಾರಾಟ ಮಾಡುವಂತೆ ಸೂಚಿಸಿದ್ದಾರೆ.ಅರವಟಗಿ ವಿವಿಧೋದ್ದೇಶ ಕೃಷಿ ಸಹಕಾರಿ ಸಂಘಕ್ಕೆ ಭೇಟಿ ನೀಡಿದ ಕೃಷಿ ಅಧಿಕಾರಿಗಳು, ಗೊಬ್ಬರ ದಾಸ್ತಾನಿನ ವಿವರ ಪಡೆದುಕೊಂಡು ರಾಸಾಯನಿಕ ಗೊಬ್ಬರದ ಬಳಕೆ ಕಡಿಮೆ ಮಾಡುವ ಬಗ್ಗೆ ರೈತರಿಗೆ ತಿಳಿವಳಿಕೆ ಕಾರ್ಯಕ್ರಮ ಆಯೋಜಿಸಲು ತಿಳಿಸಿದರು.
ಸಂಘದ ಕಾರ್ಯದರ್ಶಿ ವಿಜಯ ಧಾರವಾಡ, ಆಸೀಫ್ ದಾಸ್ತಿಕೊಪ್ಪ ಉಪಸ್ಥಿತರಿದ್ದರು.