ಸಾರಾಂಶ
ಸಂತೋಷ ದೈವಜ್ಞಮುಂಡಗೋಡ: ಸಂತಾನ ಪ್ರಾಪ್ತಿ ಹಾಗೂ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ತಾಯಿ ಎಂದೇ ಪ್ರಸಿದ್ಧಿಯಾಗಿ ನೂರಾರು ವರ್ಷಗಳ ಇತಿಹಾಸವುಳ್ಳ ತಾಲೂಕಿನ ಸಾಲಗಾಂವ ಬಾಣಂತಿದೇವಿ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ನಡೆದಿವೆ. ಮಕರ ಸಂಕ್ರಾಂತಿ ವೇಳೆ ನಡೆಯುವ ಜಾತ್ರಾ ಮಹೋತ್ಸವ ಪಲ್ಲಕ್ಕಿ ಉತ್ಸವ, ಡೊಳ್ಳು ಭಜನೆ ಮುಂತಾದ ವಾದ್ಯ ಮೇಳಗಳಿಂದ ಕೂಡಿರುತ್ತದೆ. ಸಾಲಗಾಂವ. ಚಿಗಳ್ಳಿ, ಅಜ್ಜಳ್ಳಿ, ಕಾವಲಕೊಪ್ಪ, ಮುಡಸಾಲಿ, ಹಿರೇಹಳ್ಳಿ, ಹೊಸಕೊಪ್ಪ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಅತಿ ಉತ್ಸುಕತೆಯಿಂದ ಭಾಗಿಯಾಗುತ್ತಾರೆ.ಜ. ೧೪ರಂದು ದೇವಿಯ ಸನ್ನಿಧಿಯಲ್ಲಿ ಹೋಮ, ಹವನ ಸೇರಿದಂತೆ ಧಾರ್ಮಿಕ ವಿಧಿ ವಿಧಾನಗಳು ಜರುಗಲಿವೆ. ಜ. ೧೫ರಂದು ದೇವಿಗೆ ಹಣ್ಣುಕಾಯಿ ಉಡಿ ಸೇವೆ, ಹರಕೆ ತೀರಿಸುವ ಕಾರ್ಯಕ್ರಮ ನೆರವೇರಲಿದ್ದು, ಅಂದು ಸಂಜೆ ೪ ಗಂಟೆಗೆ ಪಲ್ಲಕ್ಕಿ ಉತ್ಸವ ಬಳಿಕ ಬಾಣಂತಿ ದೇವಿಯ ತೆಪ್ಪೋತ್ಸವ ನಡೆಯಲಿದೆದೆ. ಹರಕೆ ವಿಶೇಷ: ಭಕ್ತರು ಇಲ್ಲಿಯ ದೇವಾಲಯಕ್ಕೆ ಬಂದು ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳುತ್ತಾರೆ. ಮುಖ್ಯವಾಗಿ ಮಕ್ಕಳಿಲ್ಲದವರು ಸಂತಾನ ಪ್ರಾಪ್ತಿಯನ್ನೇ ಬೇಡುವುದು ವಿಶೇಷವಾಗಿದೆ. ಬೇಡಿಕೆ ಈಡೇರಿದಲ್ಲಿ ಪೋಷಕರು ಜನಿಸಿದ ಶಿಶುವನ್ನು ಕೆರೆಯಲ್ಲಿ ಜೋಡಿ ಕುಡಿ ಬಾಳೆ ಎಲೆಯಲ್ಲಿ ಮಲಗಿಸಿ ನೀರಿನಲ್ಲಿ ತೇಲಿಸುವ ಮೂಲಕ ಹರಕೆ ತೀರಿಸುತ್ತಾರೆ. ಸಂತಾನ ಭಾಗ್ಯ ಕರುಣಿಸಿದರೆ ಕೆರೆಯಲ್ಲಿ ತೆಪ್ಪ ಪೂಜೆ ನೆರವೇರಿಸುವುದಾಗಿ ಬಾಣಂತಿ ದೇವಿಯನ್ನು ಬೇಡಿಕೊಂಡ ಮಹಿಳೆಯರ ಇಷ್ಟಾರ್ಥಗಳು ಸಾಕಾರಗೊಂಡರೆ ಜನಿಸುವ ಮಗುವನ್ನು ಬಾಳೆ ದಿಂಡಿನಿಂದ ತಯಾರಿಸಲಾದ ತೆಪ್ಪದಲ್ಲಿ ಬಿಡುವ ಸಂಪ್ರದಾಯವಿದ್ದು, ಪ್ರತಿವರ್ಷ ದೇವಿಯ ಕೃಪಾಕಟಾಕ್ಷದಿಂದ ಜನಿಸುವ ನೂರಾರು ಮಕ್ಕಳನ್ನು ಜಾತ್ರಾ ಮಹೋತ್ಸವದಂದು ತೆಪ್ಪದಲ್ಲಿ ಬಿಡುವುದು ಇಂದಿಗೂ ನಡೆಯುತ್ತದೆ.ದೇವಾಲಯದ ಇತಿಹಾಸ: ಮುಂಡಗೋಡದಿಂದ ಶಿರಸಿಗೆ ಹೋಗುವ ಮಾರ್ಗವಾಗಿ ೬ ಕಿಮೀ ಕ್ರಮಿಸಿದರೆ ಮಾರ್ಗ ಮಧ್ಯದಲ್ಲಿಯೇ ಸಿಗುವ ಈ ದೇವಾಲಯ ಐತಿಹಾಸಿಕವಾಗಿದೆ. ಹುಬ್ಬಳ್ಳಿ- ಶಿರಸಿ ಹೆದ್ದಾರಿ ಕೆರೆಯ ಮೇಲೆ ಬಾಣಂತಿದೇವಿ ದೇವಸ್ಥಾನವಿದೆ. ಹಲವು ವರ್ಷಗಳ ಹಿಂದೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ತೀವ್ರ ನೀರಿನ ಅಭಾವ ತಲೆದೋರಿದ ವೇಳೆ ಗ್ರಾಮಸ್ಥರೆಲ್ಲ ಒಟ್ಟಾಗಿ ಕೆರೆ ನಿರ್ಮಾಣ ಕಾರ್ಯ ಕೈಗೊಂಡರು.
ಆದರೆ ಎಷ್ಟೇ ಆಳ ಅಗೆದರೂ ನೀರು ಸಿಗಲಿಲ್ಲ. ನೀರು ಏಕೆ ಬರುತ್ತಿಲ್ಲ ಎಂದು ಗ್ರಾಮಸ್ಥರು ತೀವ್ರ ಚರ್ಚೆಯಲ್ಲಿರುವ ಸಂದರ್ಭದಲ್ಲಿ ತವರು ಮನೆಗೆ ಬಾಣಂತನಕ್ಕೆ ಬಂದಿದ್ದ ಮಹಿಳೆಯೋರ್ವಳು ಕೌತುಕದಿಂದ ತನ್ನ ತಂದೆ ಪಾಲ್ಗೊಂಡ ಕೆರೆ ನಿರ್ಮಾಣ ಕಾರ್ಯ ವೀಕ್ಷಿಸಲು ಕೆರೆಯ ದಡದ ಮೇಲೆ ಬರುತ್ತಿದ್ದಂತೆ ಒಮ್ಮಿಂದೊಮ್ಮೆಲೆ ಕೆರೆಯಲ್ಲಿ ನೀರು ಉಕ್ಕಿ ಬಾಣಂತಿ ಮಗಳನ್ನು ಬಲಿ ತೆಗೆದುಕೊಂಡಿತು ಎಂಬ ಇತಿಹಾಸವಿದೆ.ಇಂದಿನಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ
ಮುಂಡಗೋಡ: ಸಂತಾನ ಪ್ರಾಪ್ತಿ ಹಾಗೂ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ತಾಯಿ ಎಂದೇ ಪ್ರಸಿದ್ಧಿಯಾಗಿ ನೂರಾರು ವರ್ಷಗಳ ಇತಿಹಾಸವುಳ್ಳ ತಾಲೂಕಿನ ಸಾಲಗಾಂವ ಬಾಣಂತಿದೇವಿ ಜಾತ್ರಾ ಮಹೋತ್ಸವ ಜ. ೧೩ರಿಂದ ೧೬ರ ವರೆಗೆ ಜರುಗಲಿದೆ.ಜ. ೧೩ರಂದು ಶ್ರೀದೇವಿಯನ್ನು ಮೂಲ ಮನೆಯಿಂದ ಭವ್ಯ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ತರಲಾಗುತ್ತದೆ. ಜ. ೧೪ರಂದು ಬೆಳಗ್ಗೆ ೫ ಗಂಟೆಗೆ ಪ್ರಥಮ ಪೂಜೆ ಮತ್ತು ಅಭಿಷೇಕ, ೬ ಗಂಟೆಗೆ ಪಂಚಾಕ್ಷರಿ ಮಂತ್ರ ಘೋಷದೊಂದಿಗೆ ಸಪ್ತಾಹ ಪ್ರಾರಂಭವಾಗುವುದು.ಆನವರಿ ೧೫ರಂದು ಬೆಳಗ್ಗೆ ೬.೩೦ಕ್ಕೆ ಪಂಚಾಕ್ಷರಿ ಸಪ್ತಾಹವು ಮಂಗಲಗೊಳ್ಳುವುದು. ೯.೩೦ಕ್ಕೆ ದೇವಿಗೆ ಮಹಾಪೂಜೆ, ಉಡಿ ತುಂಬುವುದು, ಹಣ್ಣು- ಕಾಯಿ ಸಮರ್ಪಣೆ ನಂತರ ಗ್ರಾಮದ ಎಲ್ಲ ದೇವರಿಗೆ ಹಣ್ಣುಕಾಯಿ ಸಮರ್ಪಣೆ ಕಾರ್ಯಕ್ರಮಗಳು ಡೊಳ್ಳಿನ ಮಜಲು, ಭಜನೆಗಳೊಂದಿಗೆ ಅತಿ ವಿಜೃಂಭಣೆಯಿಂದ ಜರುಗುತ್ತದೆ. ಸಂಜೆ ೪ ಗಂಟೆಗೆ ಶ್ರೀದೇವಿಯ ಪಲ್ಲಕ್ಕಿ ಉತ್ಸವ ಮತ್ತು ತೆಪ್ಪೋತ್ಸವ ನಂತರ ಸಂಜೆ ೫ ಗಂಟೆಗೆ ಜ್ಯೋತಿ ಪೂಜೆಯೊಂದಿಗೆ ಕೆರೆಯಲ್ಲಿ ಬಿಡುವುದು ಸಂಜೆ ೭ ಗಂಟೆಯಿಂದ ಡೊಳ್ಳಿನ ಮಜಲು ವಾದ್ಯ ವೈಭವಗಳೊಂದಿಗೆ ಜರುಗಲಿದೆ.
ಜ. ೧೪ರಿಂದ ೧೬ರ ವರೆಗೆ ಮೂರು ದಿನಗಳ ನಿತ್ಯ ಅನ್ನಸಂತರ್ಪಣೆ ಜರುಗುತ್ತದೆ. ಅಲ್ಲದೆ ಸಾಮಾಜಿಕ ನಾಟಕ ಮತ್ತು ನಿತ್ಯ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಪ್ರಕಟಣೆ ತಿಳಿಸಿದೆ.