ಕೊಪ್ಪಳ: ನಗರದ ಹುಲಿಕೇರೆ ಬಳಿ ಇರುವ ಶಿವರಾತ್ರೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಬಾರಿ ರಾಜ್ಯಮಟ್ಟದ ಗಾಯಕರ ಅದ್ಭುತ ರಸಮಂಜರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಕಳೆದ ಹದಿನೈದು ದಿನಗಳಿಂದ ಸಿದ್ಧತೆ ನಡೆಸಿದ್ದು, ಇಲ್ಲಿಯ ಪ್ರಸಾದ ವೈವಿಧ್ಯಮಯವಾಗಿರುತ್ತದೆ. ಮಂಡಾಳು ವಗ್ಗರಣೆ ಮಿರ್ಚಿ ಭಜ್ಜಿಯ ಜತೆಗೆ ಭಕ್ತರು ತಂದುಕೊಟ್ಟಿರುವ ಬಗೆ ಬಗೆ ಸಿಹಿ ತಿನಿಸು ನೀಡಲಾಗುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುತ್ತಾರೆ. ಹೀಗಾಗಿ, ಅದನ್ನು ಇನ್ನು ದೊಡ್ಡ ಪ್ರಮಾಣದಲ್ಲಿ ಮಾಡಲು ಮುಂದಾಗಿದ್ದು, ಇದಕ್ಕೆ ಕೊಪ್ಪಳ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯಶನ್ ಸಹ ಸಾಥ್ ನೀಡಿದ್ದು, ರಾಜ್ಯಮಟ್ಟದ ಕಲಾವಿದರನ್ನು ಕರೆಯಿಸಲಾಗಿದೆ. ಅಷ್ಟೇ ಅಲ್ಲ ಇಡೀ ರಾತ್ರಿ ಜಾಗರಣೆ ಮಾಡಲು ವೈವಿಧ್ಯಮಯ ಸಂಗೀತ ಕಾರ್ಯಕ್ರಮ ನಂತರ ಭಜನಾ ಸ್ಪರ್ಧೆ ಹಮ್ಮಿಕೊಂಡಿರುವುದು ವಿಶೇಷವಾಗಿದೆ.

ಭರ್ಜರಿ ಸಿದ್ಧತೆ: ಕಿನ್ನಾಳ ರಸ್ತೆಯಲ್ಲಿರುವ ಶ್ರೀಶಿವಶರಣೇ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿಯ ಶಿವರಾತ್ರಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ.

ಶಿವಶರಣೇ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿಯೂ ಮಂಡಾಳು ವಗ್ಗರಣೆ ಮತ್ತು ಮಿರ್ಚಿ ಭಜ್ಜಿ ಹಾಕಲಾಗುತ್ತದೆ. ಜಾನಪದ ಮತ್ತು ಭಾವಗೀತೆ ಸಂಭ್ರಮ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ದೋಣಿಯ ಬೀರಲಿಂಗೇಶ್ವರ ಜನಪದ ಕಲಾತಂಡ, ಕೇರಳದ ಮ್ಯೂಜಿಸಿಯನ್ ಶ್ರೀಜಯ ಹಾಗು ಭಾವೈಕ್ಯ ಕಲಾತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನಗರದ ಕಾವ್ಯಾನಂದ ಉದ್ಯಾನವನದಲ್ಲಿರುವ ಶಿವನ ದೇವಸ್ಥಾನದಲ್ಲಿ ಈಶ್ವರಿ ವಿಶ್ವವಿದ್ಯಾಲಯದಿಂದ ಶಿವರಾತ್ರಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುತ್ತಿರುವುದು ವಿಶೇಷ. ವಿಶೇಷ ಉಪನ್ಯಾಸ, ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.


ಶಿವರಾತ್ರೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷವೂ ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಈ ವರ್ಷ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯಶನ್ ಸಾಥ್ ನೀಡುವ ಮೂಲಕ ಮತ್ತಷ್ಟು ವೈಭವಯುತವಾಗಿ ಆಚರಣೆ ಮಾಡಲಾಗುತ್ತದೆ ಎಂದು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ತಿಳಿಸಿದ್ದಾರೆ.

ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಈ ವರ್ಷವೂ ಶಿವರಾತ್ರಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲು ನಿರ್ಧರಿಸಿ ಅದಕ್ಕೆ ಪೂರಕ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಂಗೀತ ಕಾರ್ಯಕ್ರಮದ ಜತೆಗೆ ಜಾನಪದ ಕಲಾ ತಂಡ, ಜಾದು ಪ್ರದರ್ಶನ ಸಹ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡರು ಎಸ್. ಬಿ.ನಾಗರಳ್ಳಿ ತಿಳಿಸಿದ್ದಾರೆ.